ADVERTISEMENT

‘ನ್ಯೂಸ್‌ ಕ್ವಿಜ್‌ ಜ್ಞಾನ ವೃದ್ಧಿಗೆ ಸಹಕಾರಿ’

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2020, 7:09 IST
Last Updated 12 ಡಿಸೆಂಬರ್ 2020, 7:09 IST
‘ಪ್ರಜಾವಾಣಿ’ ನ್ಯೂಸ್‌ ಕ್ವಿಜ್‌ನಲ್ಲಿ ಬಹುಮಾನ ಪಡೆದ ಟಿ.ಕೆ. ನಾಗರಾಜ್‌ ಹಾಗೂ ಎನ್‌. ಶಿವಕುಮಾರ್‌
‘ಪ್ರಜಾವಾಣಿ’ ನ್ಯೂಸ್‌ ಕ್ವಿಜ್‌ನಲ್ಲಿ ಬಹುಮಾನ ಪಡೆದ ಟಿ.ಕೆ. ನಾಗರಾಜ್‌ ಹಾಗೂ ಎನ್‌. ಶಿವಕುಮಾರ್‌   

ದೊಡ್ಡಬಳ್ಳಾಪುರ:‘ಪ್ರಜಾವಾಣಿ’ ನ್ಯೂಸ್‌ ಕ್ವಿಜ್‌ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಓದುಗರಿಗೆ ಶುಕ್ರವಾರ ನಗರದಲ್ಲಿ ಬಹುಮಾನ ವಿತರಿಸಲಾಯಿತು.

ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದ ನಗರದ ಸೋಮೇಶ್ವರ ಬಡಾವಣೆಯ ನಿವೃತ್ತ ಪ್ರಾಂಶುಪಾಲ ಟಿ.ಕೆ. ನಾಗರಾಜ್, ‘ಮೌಲ್ಯಯುತ ಸುದ್ದಿಗಳನ್ನು ನೀಡುತ್ತ ಬಂದಿರುವ ಪ್ರಜಾವಾಣಿ ಪತ್ರಿಕೆಯಿಂದ ನಡೆಯುತ್ತಿರುವ ನ್ಯೂಸ್‌ ಕ್ವಿಜ್‌ನಲ್ಲೂ ಮೌಲ್ಯಯುತ ಪ್ರಶ್ನೆಗಳನ್ನೇ ಕೇಳಲಾಗುತ್ತಿದೆ. ಪತ್ರಿಕೆಯ ಓದುಗರ ಜ್ಞಾನ ಪರೀಕ್ಷೆಗೆ ಉಪಯುಕ್ತವಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧಗೊಳ್ಳುವ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ನ್ಯೂಸ್‌ ಕ್ವಿಜ್‌ನಲ್ಲಿ ಭಾಗವಹಿಸಿದರೆ ಸಾಮಾನ್ಯ ಜ್ಞಾನ ಬೆಳೆಯಲು ಉಪಯುಕ್ತವಾಗಲಿದೆ’ ಎಂದು ಅನಿಸಿಕೆ ಹಂಚಿಕೊಂಡರು.

ಬಹುಮಾನ ಪಡೆದ ದೇವನಹಳ್ಳಿ ತಾಲ್ಲೂಕಿನ ಇಲತೊರೆ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಎನ್‌. ಶಿವಕುಮಾರ್‌, ‘ವಿದ್ಯಾರ್ಥಿ ದಿಸೆಯಿಂದಲೂ ಪ್ರಜಾವಾಣಿ ಓದುತ್ತಲೇ ಬೆಳೆದವನು ನಾನು. ಶಿಕ್ಷಕ ವೃತ್ತಿಯಲ್ಲಿನ ಬಹುತೇಕ ಯಶಸ್ಸಿಗೆ ಪತ್ರಿಕೆಯ ಓದು ಸಹಕಾರಿಯಾಗಿದೆ. ಓದುಗರಿಗೆ ನೇರವಾಗಿ ಅರ್ಥವಾಗುವಂತೆ ಬರೆಯುವ ವಾಕ್ಯ ರಚನೆಯಿಂದ ಮೊದಲುಗೊಂಡು ಒಂದು ವಿಷಯ ಕುರಿತು ಉತ್ತಮ ಲೇಖನ ಬರೆಯುವವರೆಗೂ ಪತ್ರಿಕೆ ಕಲಿಸುತ್ತದೆ’ ಎಂದು ಅನುಭವ ಹಂಚಿಕೊಂಡರು.

ADVERTISEMENT

‘ಬದುಕಿನಲ್ಲಿ ಕ್ರಿಯಾಶೀಲತೆ ಬೆಳೆಯಲು, ಉತ್ತಮ ವಿಚಾರ, ಚಿಂತನೆ ಬೆಳೆಯಲು ಪ್ರಜಾವಾಣಿ ಸಹಕಾರಿಯಾಗಿದೆ. ವಿದ್ಯಾರ್ಥಿ ದಿಸೆಯಿಂದಲೇ ಪ್ರಜಾವಾಣಿ ಓದುವ ಅಭ್ಯಾಸ ಬೆಳೆಸಿಕೊಂಡರೆ ಸ್ಥಳೀಯ, ದೇಶ, ವಿದೇಶಗಳ ವಿಚಾರದ ಬಗ್ಗೆ ನಿಷ್ಪಕ್ಷಪಾತವಾಗಿ ತಿಳಿದುಕೊಳ್ಳಲು ಸಹಕಾರಿಯಾಗಲಿದೆ’ ಎಂದರು.

ನ್ಯೂಸ್‌ ಕ್ವಿಜ್‌ನಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಂಡರೆ ಅವರು ಭವಿಷ್ಯ ರೂಪಿತವಾಗಲು ಮಾರ್ಗದರ್ಶನವಾಗುತ್ತದೆ. ಬಹುಮಾನ ಗಳಿಕೆಯ ಜೊತೆಗೆ ಜ್ಞಾನವೂ ದೊರೆಯುತ್ತದೆ ಎಂದರು.

ಬಹುಮಾನ ವಿತರಣೆ ಸಂದರ್ಭದಲ್ಲಿ ‘ಪ್ರಜಾವಾಣಿ’ ವಿತರಕರಾದ ದೇವನಾಥ್‌, ರಾಜು, ಪ್ರಸರಣ ವಿಭಾಗದ ಶಂಕರ್‌ ಹಿರೇಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.