ದೇವನಹಳ್ಳಿ: ‘ಪಟ್ಟಣದ ಶ್ರೀಚೌಡೇಶ್ವರಿ ದೇವಿಗೆ ಶರನ್ನವರಾತ್ರಿ ಪ್ರಯುಕ್ತ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ದೇವಾಲಯದ ಅಭಿವೃದ್ಧಿ ಸಮಿತಿಯ ನಿರ್ದೇಶಕ ಪಿ. ಗಂಗಾಧರ್ ತಿಳಿಸಿದ್ದಾರೆ.
ಇಲ್ಲಿನ ದೇವಾಲಯದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕೋವಿಡ್–19 ನಡುವೆಯೂ ವಾರ್ಷಿಕವಾಗಿ ನಡೆಯುವ ಯಾವುದೇ ಧಾರ್ಮಿಕ ಕಾರ್ಯಕ್ರಮಗಳನ್ನು ರದ್ದುಪಡಿಸಿಲ್ಲ. ಲಾಕ್ಡೌನ್ ವೇಳೆಯಲ್ಲಿ ಸರ್ಕಾರದ ಮಾರ್ಗಸೂಚಿಯನ್ನು ಪಾಲಿಸಲಾಗಿತ್ತು’ ಎಂದು ಹೇಳಿದರು.
ಅ. 16ರಿಂದ 26ರವರೆಗೆ ದೇವಿಗೆ ಅರಿಸಿನ ಕುಂಕುಮ, ಗಂಧ ಧಾನ್ಯಗಳು, ವಿಭೂತಿ, ಸರಸ್ವತಿ, ಕೋಲ್ಹಾಪುರದ ಲಕ್ಷ್ಮಿ, ವಸ್ತ್ರದೀಪ ರಾಜರಾಜೇಶ್ವರಿ, ತರಕಾರಿಯ ಅಲಂಕಾರ ನಡೆಯಲಿದೆ. ಅ. 26ರಂದು ಚಿನ್ನಲೇಪಿತ ಅಮ್ಮನವರ ಉತ್ಸವಮೂರ್ತಿಯನ್ನು ರಾಜ ಬೀದಿಯಲ್ಲಿ ಮೆರವಣಿಗೆ ಮಾಡಲಾಗುವುದು. ನಂತರ ಉಯ್ಯಾಲೋತ್ಸವ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಸಮಿತಿಯ ಅಧ್ಯಕ್ಷ ಸಿ. ಅಶ್ವಥನಾರಾಯಣ ಮಾತನಾಡಿ, ದೇವಿಯ ದರ್ಶನಕ್ಕೆ ಬರುವ ಭಕ್ತರಿಗೆ ಸ್ಯಾನಿಟೈಜ್ ವ್ಯವಸ್ಥೆ ಇರುತ್ತದೆ. ಜನರು ಮಾಸ್ಕ್ ಧರಿಸಿ ಅಂತರ ಕಾಯ್ದುಕೊಳ್ಳುವುದು ಅತಿಮುಖ್ಯ ಎಂದು ಹೇಳಿದರು.
ಅಭಿವೃದ್ಧಿ ಸಮಿತಿಯ ಸದಸ್ಯರಾದ ಎಸ್.ಆರ್. ಮುನಿರಾಜು, ಹನುಮಂತರಾಯಪ್ಪ, ಶ್ರೀರಾಮಯ್ಯ, ಲಯನ್ಸ್ ಸಂಸ್ಥೆ ಅಧ್ಯಕ್ಷ ಮಂಜುನಾಥ್, ಮುಖಂಡ ವಿಶ್ವನಾಥ್ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.