ದೊಡ್ಡಬಳ್ಳಾಪುರ: ಹೊಸದಾಗಿ ರಚನೆಯಾಗುತ್ತಿರುವ ಮಂಚೇನಹಳ್ಳಿ ತಾಲ್ಲೂಕಿಗೆ ತೂಬಗೆರೆ ಹೋಬಳಿಯನ್ನು ಸೇರ್ಪಡೆ ಮಾಡುವುತ್ತಿರುವುದನ್ನು ಖಂಡಿಸಿ ಶನಿವಾರ ತೂಬಗೆರೆ ಹೋಬಳಿಯ ವಿವಿಧ ಗ್ರಾಮಗಳಲ್ಲಿ ತೂಬಗೆರೆ ಹೋಬಳಿ ಹಿತರಕ್ಷಣಾ ಸಮಿತಿ ವತಿಯಿಂದ ಶನಿವಾರ ಜನಜಾಗೃತಿ ಪ್ರಚಾರ ಸಭೆಗಳು ವಿವಿಧ ಗ್ರಾಮಗಳಲ್ಲಿ ನಡೆದವು.
ಪ್ರಚಾರ ಸಭೆಯಲ್ಲಿ ಮಾತನಾಡಿದ ಸಮಿತಿಯ ತಾಲ್ಲೂಕು ಅಧ್ಯಕ್ಷ ರವಿಸಿದ್ದಪ್ಪ, ‘ಡಿ.16 ರಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಬೃಹತ್ ಪ್ರತಿಭಟನಾ ಸಭೆ ನಡೆಸುವ ಮೂಲಕ ನಮ್ಮ ವಿರೋಧವನ್ನು ಅಧಿಕೃತವಾಗಿ ದಾಖಲಿಸಲಾಗುತ್ತಿದೆ. ಈ ಪ್ರತಿಭಟನೆಗೆ ತೂಬಗೆರೆ ಹೋಬಳಿಯ ಪ್ರತಿ ಗ್ರಾಮದಿಂದಲು ಮನೆಗೆ ಒಬ್ಬರಂತೆ ಭಾಗವಹಿಸುವಂತೆ ಮಾಡುವ ಸಲುವಾಗಿಯೇ ಜಾಗೃತಿ ಸಭೆಗಳನ್ನು ನಡೆಸಲಾಗುತ್ತಿದೆ’ ಎಂದರು.
‘ತೂಬಗೆರೆ ಹೋಬಳಿಯನ್ನು ದೊಡ್ಡಬಳ್ಳಾಪುರ ತಾಲ್ಲೂಕಿನಿಂದ ಬೇರ್ಪಡಿಸಿ ಮಂಚೇನಹಳ್ಳಿಗೆ ಸೇರ್ಪಡೆ ಮಾಡುವುದರಿಂದ ಕೃಷಿ, ಶಿಕ್ಷಣ, ಕಂದಾಯ ಸೇರಿದಂತೆ ಎಲ್ಲ ವಿಚಾರದಲ್ಲೂ ತೊಂದರೆಯಾಗಲಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಇರುವುದರಿಂದ ದೊರೆಯುವ ಉದ್ಯೋಗ, ಶೈಕ್ಷಣಿಕ ಹಾಗೂ ಕಂದಾಯದ ಲಾಭಗಳು ಕೈತಪ್ಪುವ ಸಾಧ್ಯತೆಗಳು ಇವೆ’ ಎಂದು ಆತಂಕ ವ್ಯಕ್ತಪಡಿಸಿದರು.
ತೂಬಗೆರೆ ಹೋಬಳಿಯು ಮಂಚೇನಹಳ್ಳಿಗೆ ಸೇರ್ಪಡೆಗೊಳ್ಳುವುದರಿಂದ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಇರುವ ಇತಿಹಾಸ ಪ್ರಸಿದ್ಧ ಘಾಟಿ ಸುಬ್ರಹ್ಮಣ್ಯಸ್ವಾಮಿ ದೇವಾಲಯ ಸೇರಿದಂತೆ ಎಲ್ಲವು ಕೈತಪ್ಪಲಿವೆ. 15ರವರೆಗೂ ವಿವಿಧ ಗ್ರಾಮಗಳಲ್ಲಿ ನಡೆಯುವ ಪ್ರಚಾರ ಸಭೆಯಲ್ಲಿ ತೂಬಗೆರೆ ಹೋಬಳಿ ಹಿತರಕ್ಷಣ ಸಮಿತಿ ಪದಾಧಿಕಾರಿಗಳಷ್ಟೇ ಅಲ್ಲದೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಕನ್ನಡ ಪರ ಸಂಘಟನೆ, ದಲಿತ ಪರ ಹಾಗೂ ರೈತ ಸಂಘಟನೆಗಳ ಮುಖಂಡರು ಭಾಗವಹಿಸಲಿದ್ದಾರೆ ಎಂದರು.
ಜನಜಾಗೃತಿ ಸಭೆಯಲ್ಲಿ ಹಿತರಕ್ಷಣ ಸಮಿತಿ ಉಪಾಧ್ಯಕ್ಷ ಎಂ.ಮುನೇಗೌಡ, ಆರ್.ಸತೀಶ್, ಟಿ.ಆರ್. ಶ್ರೀನಿವಾಸ್, ಕಾರ್ಯದರ್ಶಿ ಎಸ್.ನಾಗೇನಹಳ್ಳಿ ಎಂ.ಮಂಜುನಾಥ್, ಖಜಾಂಚಿ ಟಿ.ಎನ್.ಕೃಷ್ಣಪ್ಪ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.