ದೇವನಹಳ್ಳಿ: ಇಲ್ಲಿನ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯ ಪೂರ್ಣಿಮಾಗೆ ರಾಜ್ಯ ಮಟ್ಟದ ಅತ್ಯುತ್ತಮ ಸಂಗೀತ ಶಿಕ್ಷಕಿ ಪ್ರಶಸ್ತಿ ಅಭಿಸಿದೆ.
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳಡಿಯಲ್ಲಿ ನಡೆಯುತ್ತಿರುವ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯ ಶಿಕ್ಷಕಿಗೆ ಬೆಂಗಳೂರಿನ ಡಿ.ದೇವರಾಜ್ ಅರಸು ಭವನದಲ್ಲಿ ಈಚೆಗ ಉಪಮುಖ್ಯಮಂತ್ರಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವ ಗೋವಿಂದ ಕಾರಜೋಳ, ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಜಿ.ಕುಮಾರ್ ನಾಯಕರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ನಿರ್ದೇಶಕ ಟಿ.ಜಿ.ವೆಂಕಟಾಚಲ, ಸರ್ಕಾರದ ಎಸ್.ಇ.ಪಿ. ಮತ್ತು ಟಿ.ಎಸ್.ಪಿ ಯೋಜನೆ ಸಲಹೆಗಾರ ನಟರಾಜ, ಪ್ರಶಸ್ತಿ ಪ್ರದಾನ ಸಂದರ್ಭದಲ್ಲಿ ಇದ್ದರು.
ವಸತಿ ನಿಲಯದಲ್ಲಿ ಈ ಕುರಿತು ಮಾತನಾಡಿದ ಸಂಗೀತ ಶಿಕ್ಷಕಿ ಪೂರ್ಣಿಮಾ, ‘ಸಂಗೀತ ವೃತ್ತಿಯಲ್ಲಿ ವಿದ್ಯಾರ್ಥಿಗಳಿಗೆ ಬೋಧಿಸುತ್ತಿದ್ದರೂ ನಾನೂ ಅಧ್ಯಯನ ವಿದ್ಯಾರ್ಥಿನಿಯಾಗಿದ್ದೇನೆ. 2018–19ನೇ ಸಾಲಿನ ರಾಜ್ಯ ಮಟ್ಟದ ಪ್ರಶಸ್ತಿ ಬಗ್ಗೆ ನಿರೀಕ್ಷೆ ಇರಲಿಲ್ಲ. ಕಳೆದ ಎರಡು ವರ್ಷಗಳಿಂದ ವಿದ್ಯಾರ್ಥಿಗಳಿಗೆ ಸಂಗೀತ ಮತ್ತು ಶಾಸ್ತ್ರೀಯ ನೃತ್ಯದ ಅಭಿರುಚಿ ಹೆಚ್ಚಿಸಿದ್ದೇನೆ. ಅದಕ್ಕೆ ಪೂರಕವೆಂಬಂತೆ ಪ್ರತಿಭಾ ಕಲೋತ್ಸವದಲ್ಲಿ ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಮಕ್ಕಳು ಪ್ರಶಸ್ತಿ ಪಡೆದಿರುವುದು ಹೆಮ್ಮೆ ಎನಿಸುತ್ತದೆ’ ಎಂದರು.
‘ವೃತ್ತಿಧರ್ಮ ಮುಖ್ಯ. ಪ್ರಶಸ್ತಿಯ ನಿರೀಕ್ಷೆ ಇಲ್ಲ. ಶಿಕ್ಷಕಿಯಾಗಿ ಜವಾಬ್ದಾವರಿ ಅರಿತು ಕೆಲಸ ಮಾಡುತ್ತಿದ್ದೇನೆ’ ಎಂದರು.
‘ಸಂಗೀತ ಬೋಧನಾ ಪಠ್ಯಕ್ರಮ ಕುರಿತು ಪ್ರೌಢಶಾಲೆ ಮಕ್ಕಳಿಗೆ ಆರಂಭಿಕ ಬೋಧನೆ, ನಂತರದ ಬೋಧನೆ ಕ್ರಮಗಳನ್ನು ಬರೆದು ನೀಡುವಂತೆ ರಾಜ್ಯ ಪ್ರೌಢ ಶಿಕ್ಷಣ ಪಠ್ಯಕ್ರಮ ಸಮಿತಿ ಕೋರಿತ್ತು. ಈಗಾಗಲೇ ಅದನ್ನು ಸಮಿತಿಗೆ ಸಲ್ಲಿಸಿದ್ದೇನೆ’ ಎಂದರು.
‘ಪ್ರಶಸ್ತಿ ಸಿಗಲು ಶಾಲೆಯ ಪ್ರಾಂಶುಪಾಲರು, ಸಹ ಶಿಕ್ಷಕರು, ಸಿಬ್ಬಂದಿ ವರ್ಗದವರ ಸಹಕಾರವಿದೆ. ಅವರೆಲ್ಲರಿಗೆ ಧನ್ಯವಾದಗಳು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.