ಆನೇಕಲ್: ರಾಣಿ ಅಬ್ಬಕ್ಕ 500ನೇ ಜಯಂತ್ಯುತ್ಸವ ಪ್ರಯುಕ್ತ ಎಬಿವಿಪಿ ಆಯೋಜಿಸಿರುವ ರಾಣಿ ಅಬ್ಬಕ್ಕ ರಥಯಾತ್ರೆಗೆ ಶನಿವಾರ ತಾಲ್ಲೂಕಿನ ನೆರಳೂರು ಸಮೀಪದ ಸ್ವಾಮಿ ವಿವೇಕಾನಂದ ವಿದ್ಯಾನಿಕೇತ ಪಿಯು ಕಾಲೇಜಿನಲ್ಲಿ ಚಾಲನೆ ನೀಡಲಾಯಿತು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕ್ಷೇತ್ರಿಯ ಕಾರ್ಯವಾಹ ನಾ.ತಿಪ್ಪೇಸ್ವಾಮಿ ರಥಯಾತ್ರೆಗೆ ಚಾಲನೆ ನೀಡಿದರು. ಸೆ.6ರಿಂದ ಸೆ.17ರವರೆಗೆ ಯಾತ್ರೆ ರಾಜ್ಯದಾದ್ಯಂತ ಸಂಚರಿಸಲಿದ್ದು ರಾಣಿ ಅಬ್ಬಕ್ಕ ಸೇರಿದಂತೆ ನಾಡಿನ ವೀರನಾರಿಯರ ಪರಿಚಯವನ್ನು ಇಂದಿನ ತಲೆಮಾರಿಗೆ ಮಾಡಿಕೊಡಲಿದೆ.
ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆಯರು ಪ್ರಮುಖ ಪಾತ್ರ ವಹಿಸಿದ್ದರು. ಪೋರ್ಚುಗೀಸರಿಗೆ ಸಿಂಹಸ್ವಪ್ನವಾಗಿದ್ದ ಉಲ್ಲಾಳದ ರಾಣಿ ಅಬ್ಬಕ್ಕ ಜೀವನ, ಶೌರ್ಯ, ಸಾಹಸ ಇಂದಿನ ಮಹಿಳೆಯರಿಗೆ ಸ್ಫೂರ್ತಿ. ಅಬ್ಬಕ್ಕಳ ಸ್ವಾಭಿಮಾನ, ಧೈರ್ಯ ಇಂದಿನ ಮಹಿಳೆಯರಲ್ಲಿ ಇರಬೇಕು ಎಂದು ನಟಿ ತಾರಾ ಅನುರಾಧ ಅಶಿಸಿದರು.
ರಾಣಿ ಅಬ್ಬಕ್ಕ ಕೆಚ್ಚೆದೆಯ ಹೋರಾಟದಿಂದ ಉಲ್ಲಾಳಕ್ಕೆ ಜಯ ದೊರೆತಿತ್ತು. ಭಾರತದಲ್ಲಿ ಸ್ವಾತಂತ್ರ್ಯ ಪೂರ್ವದಿಂದಲೂ ಮಹಿಳೆಯರಿಗೆ ಅಧಿಕಾರ, ಗೌರವ ನೀಡಲಾಗುತ್ತಿದೆ. ರಾಣಿ ಅಬ್ಬಕ್ಕ, ಕಿತ್ತೂರು ರಾಣಿ ಚನ್ನಮ್ಮ, ಒನಕೆ ಓಬವ್ವ ಅವರಂತಹ ಶಕ್ತಿಶಾಲಿ ಮಹಿಳೆಯರು ಅದಕ್ಕೆ ಸಾಕ್ಷಿ ಎಂದು ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಎಂ.ಯಂಗಾರೆಡ್ಡಿ ಹೇಳಿದರು.
ಅಬ್ಬಕ್ಕ ಕೇವಲ ರಾಣಿಯಲ್ಲ ಇತಿಹಾಸ ಬದಲಿಸಿದ ವೀರನಾರಿ. ಅವರ ಜೀವನ ಸಾಧನೆಯನ್ನು ರಾಜ್ಯದ ಪ್ರತಿಯೊಬ್ಬರಿಗೂ ರಥಯಾತ್ರೆ ತಲುಪಿಸಲಿದೆ ಎಂದು ಎಬಿವಿಪಿಯ ರಾಷ್ಟ್ರೀಯ ಕಾರ್ಯಸಮಿತಿ ಸದಸ್ಯ ಮಣಿಕಂಠ ಕಳಸ ತಿಳಿಸಿದರು.
ಎಸ್ವಿವಿಎನ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಜಿ.ನಾಗರಾಜು, ಎಬಿವಿಪಿ ರಾಷ್ಟ್ರೀಯ ಕಾರ್ಯದರ್ಶಿ ಶ್ರವಣ್ ಕುಮಾರ್, ಜ್ಞಾನ ಆರ್.ಗೌಡ, ರವಿ ಮಂಡ್ಯ, ಪ್ರವೀನ್, ಕೇಶವ ಬಂಗೇರ, ಯಶವಂತ್, ಸುಮಿತ್ ಶೆಟ್ಟಿ, ಮಂದಾರ, ಮೋನಿಶ್ ಪಿ.ಗೌಡ, ಆಕಾಶ್ ಜೈನ್, ಗಗನ್ ಮುಂತಾದವರು ವೇದಿಕೆಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.