ಯುವಕನನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸುತ್ತಿರುವ ದೃಶ್ಯ
ಚಿತ್ರ: ಎಕ್ಸ್
ಸೋಲದೇವನಹಳ್ಳಿ(ನೆಲಮಂಗಲ): ಬಾಲಕಿಗೆ ಅಶ್ಲೀಲ ಸಂದೇಶ ಕಳುಹಿಸಿದ ಆರೋಪದ ಮೇಲೆ ಯುವಕನನ್ನು ಅಪಹರಿಸಿ ಕಾರಿನಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ವಿವಸ್ತ್ರಗೊಳಿಸಿ ಹಲ್ಲೆ ನಡೆಸಿರುವ ಘಟನೆ ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಹಲ್ಲೆಗೊಳಗಾದ ಕೆ.ಎಂ.ಕುಶಾಲ್ ಅವರ ದೂರು ಆಧರಿಸಿ, ಬಾಲಕಿ ಹಾಗೂ ಶಿವಶಂಕರ್, ಯಶವಂತ್, ಹೇಮಂತ್, ಸಲ್ಮಾನ್ ಖಾನ್, ಎಂ.ರಾಹುಲ್, ಎಸ್.ತೇಜಸ್, ಆರ್.ರಾಕೇಶ್, ಎನ್.ಶಶಾಂಕ್ ಗೌಡ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ಕಾರು, ಮೊಬೈಲ್ ಫೋನ್, ಮೂರು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಯುವಕನಿಗೆ ಥಳಿಸಿದ ವಿಡಿಯೊಗಳು ಜಾಲತಾಣದಲ್ಲಿ ಹರಿದಾಡುತ್ತಿವೆ. ಆರೋಪಿಗಳ ಪೈಕಿ ಸಲ್ಮಾನ್ ಖಾನ್ ಬಿಟ್ಟು, ಉಳಿದವರು ಎಂಜಿನಿಯರಿಂಗ್ ಮತ್ತು ಬಿಸಿಎ ಓದುತ್ತಿದ್ದಾರೆ.
‘ನಾನು ಓದುತ್ತಿದ್ದ ಕಾಲೇಜಿನಲ್ಲಿ ಬಾಲಕಿಯನ್ನು ಪ್ರೀತಿಸುತ್ತಿದ್ದೆ. ಆದರೆ, ಇತ್ತೀಚೆಗೆ ಆಕೆ ಬೇರೆ ಹುಡುಗನ ಜತೆ ಸಲುಗೆಯಿಂದ ಇದ್ದಳು. ಹಾಗಾಗಿ ನಮ್ಮಿಬ್ಬರ ನಡುವೆ ಜಗಳ ನಡೆಯುತ್ತಿತ್ತು. ಜೂನ್ 30ರಂದು ಆಕೆಗೆ ಸಂದೇಶ ಕಳುಹಿಸಿದ್ದೆ. ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳೋಣ ಎಂದು ನನ್ನನ್ನು ಹೆಸರಘಟ್ಟಕ್ಕೆ ಕರೆಯಿಸಿಕೊಂಡಿದ್ದಳು. ಅಲ್ಲಿಗೆ ತೆರಳಿದಾಗ ಹೇಮಂತ್ ಹಾಗೂ ಇತರರು, ಮೊಬೈಲ್ನಲ್ಲಿದ್ದ ಬಾಲಕಿಯ ಫೋಟೊಗಳನ್ನು ಅಳಿಸಿ ಹಾಕುವಂತೆ ಹೇಳಿ ಹಲ್ಲೆ ನಡೆಸಿದರು. ಬಲವಂತವಾಗಿ ಕಾರಿನಲ್ಲಿ ಆರ್.ಆರ್. ಕಾಲೇಜು ಬಳಿ ಕರೆದೊಯ್ದು ಥಳಿಸಿದರು’ ಎಂದು ಕುಶಾಲ್ ದೂರಿನಲ್ಲಿ ತಿಳಿಸಿದ್ದಾರೆ.
‘ಮೊಬೈಲ್ನಲ್ಲಿದ್ದ ಬಾಲಕಿಯ ಫೋಟೊಗಳನ್ನು ಆರೋಪಿಗಳು ಅಳಿಸಿ ಹಾಕಿದರು. ನಂತರ ಅದೇ ಕಾರಿನಲ್ಲಿ ಕೂರಿಸಿಕೊಂಡು ಆಲೂರು ಕೆರೆಯ ತೋಪಿಗೆ ನನ್ನನ್ನು ಕರೆದೊಯ್ದು, ವಿವಸ್ತ್ರಗೊಳಿಸಿ, ಮರದ ಕಟ್ಟಿಗೆಯಿಂದ ಥಳಿಸಿ, ಬಾಲಕಿ ಸಹವಾಸಕ್ಕೆ ಬಾರದಂತೆ ಜೀವ ಬೆದರಿಕೆ ಹಾಕಿದರು. ನನ್ನನ್ನು ಬೆತ್ತಲೆಗೊಳಿಸಿ, ಹಲ್ಲೆ ಮಾಡಿದವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು’ ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.
ಚಿತ್ರದುರ್ಗದ ರೇಣುಕಸ್ವಾಮಿ ಕೊಲೆಯಿಂದ ಪ್ರೇರಿತರಾಗಿ ಈ ರೀತಿ ಮಾಡಿದ್ದಾರೆಯೇ ಗೊತ್ತಿಲ್ಲ. ಅಂತಹ ಘಟನೆಗಳು ಯುವಕರ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆಯೇ ಎಂಬುದರ ಕುರಿತು ಮನಶಾಸ್ತ್ರಜ್ಞರು ಅಧ್ಯಯನ ನಡೆಸಬೇಕುಜಿ.ಪರಮೇಶ್ವರ ಗೃಹ ಸಚಿವ
ರೇಣುಕಾಸ್ವಾಮಿ ಪ್ರಕರಣ ಉಲ್ಲೇಖಿಸಿದ ಹಲ್ಲೆ? ಎಂಟು ಜನರ ಯುವಕರ ತಂಡ ಕುಶಾಲ್ಗೆ ಒದ್ದು ಹಲ್ಲೆ ಮಾಡಿರುವುದು ಅವಾಚ್ಯ ಪದಗಳಿಂದ ನಿಂದಿಸಿ ಮಾರ್ಮಾಂಗ ತುಳಿದು ಹಿಂಸೆ ಮಾಡಿರುವ ದೃಶ್ಯ ಸೆರೆಯಾಗಿದೆ. ‘ತಪ್ಪಾಯ್ತು ಅಣ್ಣಾ ಬಿಡ್ರೋ’ ಎಂದು ಕೈಮುಗಿದು ಯುವಕ ಬೇಡಿಕೊಂಡರೂ ಬಾಲಕಿ ಮುಂದೆಯೇ ಹಾಡು ಹೇಳುವಂತೆ ಆರೋಪಿಗಳು ಒತ್ತಾಯಿಸಿದ್ದಾರೆ. ಚಿತ್ರದುರ್ಗದ ರೇಣುಕಸ್ವಾಮಿ ಪ್ರಕರಣವನ್ನು ಉಲ್ಲೇಖಿಸಿ ಮುಖ ತೋರಿಸುತ್ತಾ ಇವರೇ ಎ1 ಎ2 ಎ3 ಎಂದು ಮಾತನಾಡಿರುವುದು ವಿಡಿಯೊದಲ್ಲಿ ದಾಖಲಾಗಿದೆ. ಹಲ್ಲೆಯ ದೃಶ್ಯ ಮೊಬೈಲ್ನಲ್ಲಿ ಸೆರೆ ಹಿಡಿದಿರುವ ಆರೋಪಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಯಬಿಡುವುದಾಗಿ ಬೆದರಿಕೆ ಹಾಕಿದ್ದಾರೆ. 2024ರ ಜೂನ್ನಲ್ಲಿ ಚಿತ್ರದುರ್ಗದ ರೇಣುಕಸ್ವಾಮಿ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಲಾಗಿತ್ತು. ಈ ಸಂಬಂಧ ನಟ ದರ್ಶನ್ ಸೇರಿ ಹಲವರ ಮೇಲೆ ಪ್ರಕರಣ ದಾಖಲಾಗಿತ್ತು. ಕೊಲೆ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.