ADVERTISEMENT

ದೊಡ್ಡಬಳ್ಳಾಪುರ| ಮೀಸಲಾತಿ ಪಡೆಯಲು ಅರ್ಹರ ಕೊರತೆ: ಮಾಜಿ ಸಚಿವ ಎಚ್.ಆಂಜನೇಯ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2025, 2:02 IST
Last Updated 14 ಅಕ್ಟೋಬರ್ 2025, 2:02 IST
​ದೊಡ್ಡಬಳ್ಳಾಪುರದ ಡಾ.ರಾಜ್‌ ಕುಮಾರ್ ಕಲಾಮಂದಿರದಲ್ಲಿ ಕರ್ನಾಟಕ ಮಾದರ ಮಹಾಸಭಾ ವತಿಯಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಜಾಗೃತಿ ಹಾಗೂ ಸದಸ್ಯತ್ವ ನೋಂದಣಿ ಅಭಿಯಾನ ಸಭೆಯಲ್ಲಿ ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿದರು
​ದೊಡ್ಡಬಳ್ಳಾಪುರದ ಡಾ.ರಾಜ್‌ ಕುಮಾರ್ ಕಲಾಮಂದಿರದಲ್ಲಿ ಕರ್ನಾಟಕ ಮಾದರ ಮಹಾಸಭಾ ವತಿಯಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಜಾಗೃತಿ ಹಾಗೂ ಸದಸ್ಯತ್ವ ನೋಂದಣಿ ಅಭಿಯಾನ ಸಭೆಯಲ್ಲಿ ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿದರು   

ದೊಡ್ಡಬಳ್ಳಾಪುರ: ನಾಲ್ಕು ದಶಕಗಳ ಹೋರಾಟದ ಫಲವಾಗಿ ಕರ್ನಾಟಕ ರಾಜ್ಯ ಸರ್ಕಾರವು ಒಳಮೀಸಲಾತಿ ಜಾರಿಗೆ ತಂದಿದೆ. ಇದರ ಪ್ರಯೋಜನವನ್ನು ನಮ್ಮ ಸಮುದಾಯ ಪಡೆದುಕೊಳ್ಳುವ ದಾರಿ ಸುಗಮವಾಗಿಲ್ಲ. ಮೀಸಲಾತಿಗೆ ಅನುಗುಣವಾದ ಶೈಕ್ಷಣಿಕ ಅರ್ಹತೆಗಳುಳ್ಳ ಅಭ್ಯರ್ಥಿಗಳ ಸಂಖ್ಯೆ ಕೇವಲ ಬೆರಳೆಣಿಕೆಯಷ್ಟಿರುವುದು ದುರಾದೃಷ್ಟಕರ ಸಂಗತಿ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.

ನಗರದ ಡಾ.ರಾಜ್‌ ಕುಮಾರ್ ಕಲಾಮಂದಿರದಲ್ಲಿ ಕರ್ನಾಟಕ ಮಾದರ ಮಹಾಸಭಾ ವತಿಯಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಜಾಗೃತಿ ಹಾಗೂ ಸದಸ್ಯತ್ವ ನೋಂದಣಿ ಅಭಿಯಾನ ಸಭೆಯಲ್ಲಿ ಮಾತನಾಡಿದರು.

ಒಳಮೀಸಲಾತಿಯ ಹೋರಾಟದ ಅನೇಕ ಮಜಲುಗಳಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ದುಡಿದ ಸಮಾಜದ ನಾಯಕರು ಒಳಮೀಸಲಾತಿ ಪಡೆದು ಕೊಳ್ಳುವಲ್ಲಿ ಇರುವಂತಹ ತೊಡಕು ಪರಿಹರಿಸಲು ಎಲ್ಲಾ ರಾಜಕೀಯ ಪಕ್ಷಗಳ ನೇತಾರರು ಪಕ್ಷಾತೀತವಾಗಿ ಒಗ್ಗೂಡಿ ರಾಜ್ಯ ಮಟ್ಟದಲ್ಲಿ ಕರ್ನಾಟಕ ಮಾದಾರ ಮಹಾಸಭಾ ಸ್ಥಾಪಿಸಲಾಗಿದೆ. ಸಮುದಾಯವನ್ನು ಸದೃಢವಾಗಿ ಕಟ್ಟಿ ಬೆಳೆಸಲು ಅನೇಕ ಕಾರ್ಯಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದರು.

ADVERTISEMENT

ಕೇಂದ್ರ ಮಾಜಿ ಸಚಿವ ಎ.ನಾರಾಯಣಸ್ವಾಮಿ ಮಾತನಾಡಿ, ರಾಜ್ಯದಲ್ಲಿ 50 ಲಕ್ಷಕ್ಕೂ ಹೆಚ್ಚು ಮಾದಿಗರು ಇದ್ದಾರೆ. ಮಾದಿಗ ಕುರಿತು ಚಿಂತನ ಮಂಥನ‌ವಾಗಬೇಕು. ಮೂಲ ಜಾತಿ ಮಾದಿಗ ಎಂದು ಬರೆಸಿದರೆ ಮಾತ್ರ ಮೀಸಲಾತಿ, ಇಲ್ಲದಿದ್ದಲ್ಲಿ ಯಾವ ಮೀಸಲಾತಿಯೂ ಬರುವುದಿಲ್ಲ ಎಂದು ಎಚ್ಚರಿಸಿದರು.

ಪಾಲನಹಳ್ಳಿ ಮಠದ ಪೀಠಾಧ್ಯಕ್ಷ ಡಾ.ಸಿದ್ದರಾಜುಸ್ವಾಮಿ, ರಾಜ್ಯಸಭಾ ಮಾಜಿ ಸದಸ್ಯ ಡಾ.ಎಲ್.ಹನುಮಂತಯ್ಯ, ಚಂದ್ರಪ್ಪ, ಪಾವಗಡ ಮಾಜಿ ಶಾಸಕ ತಿಮ್ಮರಾಯಪ್ಪ, ಎಸ್.ಎಸ್.ಘಾಟಿ ಸುಬ್ರಹ್ಮಣ್ಯ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಆರ್.ವಿ.ಮಹೇಶ್ ಕುಮಾರ್, ಮುಖಂಡರಾದ ರಾಮಕೃಷ್ಣಪ್ಪ, ಬಚ್ಚಹಳ್ಳಿ ನಾಗರಾಜ್, ರಾಜಘಟ್ಟ ಕಾಂತರಾಜ್, ತಳವಾರ ನಾಗರಾಜ್, ಹರ್ಷ, ಕುಂಬಾರಪೇಟೆ ನಾರಾಯಣಪ್ಪ, ಟಿ.ಡಿ.ಮುನಿಯಪ್ಪ, ವಕೀಲರಾದ ಕಾಂತರಾಜು, ಮುನಿರಾಜು, ಶಿವು, ಮನು, ಮಂಜುನಾಥ್, ವೆಂಕಟೇಶ್ ಇದ್ದರು.

ಮಾದರ ಸಮುದಾಯದ ಯುವ ಜನರನ್ನು ಕನಿಷ್ಠ ಪದವಿ ವಿದ್ಯಾವಂತರನ್ನಾಗಿ ರೂಪಿಸಬೇಕಾದ ಗುರುತರವಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.
ಎಚ್‌. ಆಂಜನೇಯ ಮಾಜಿ ಸಚಿವ
ಹಿಂದುಳಿದ ವರ್ಗಗಳ ಆಯೋಗವು ನಡೆಸುತ್ತಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಲ್ಲಿ ನಮ್ಮ ಸಮುದಾಯದ ಬಂಧುಗಳು ಎಕೆ ಎಡಿ ಎಎ ಎಂದು ಬರೆಸದೆ ಧರ್ಮದ ಕಾಲಂನಲ್ಲಿ ಹಿಂದು ಜಾತಿ ಮತ್ತು ಉಪಜಾತಿ ಕಾಲಂನಲ್ಲಿ ಬಿ-061 ಮಾದಿಗ ಎಂದೇ ಬರಸಬೇಕು
ಎ.ನಾರಾಯಣಸ್ವಾಮ ಕೇಂದ್ರ ಮಾಜಿ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.