ADVERTISEMENT

‘ಕ್ರೀಡಾಂಗಣದ ಜಾಗ ಉಳಿಸಿ‘

ಯುವಜನ ಸೇವಾ ಇಲಾಖೆಗೆ ಸೂಲಿಬೆಲೆ ಪಟ್ಟಣದ ಜನರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2021, 7:46 IST
Last Updated 4 ಫೆಬ್ರುವರಿ 2021, 7:46 IST
ಸೂಲಿಬೆಲೆಯ ಡಾ.ಬಿ.ಆರ್. ಅಂಬೇಡ್ಕರ್ ಯುವಜನ ಅಭಿವೃದ್ಧಿ ಕೇಂದ್ರದ ಸುತ್ತಲೂ ಮುಳ್ಳಿನ ಪೊದೆ ಬೆಳೆದಿರುವುದು
ಸೂಲಿಬೆಲೆಯ ಡಾ.ಬಿ.ಆರ್. ಅಂಬೇಡ್ಕರ್ ಯುವಜನ ಅಭಿವೃದ್ಧಿ ಕೇಂದ್ರದ ಸುತ್ತಲೂ ಮುಳ್ಳಿನ ಪೊದೆ ಬೆಳೆದಿರುವುದು   

ಸೂಲಿಬೆಲೆ: ಪಟ್ಟಣದಲ್ಲಿ ಕ್ರೀಡಾಂಗಣ ನಿರ್ಮಿಸಲು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಗೆ ಮಂಜೂರಾಗಿರುವ ಜಮೀನು ಬೇರೆ ಇಲಾಖೆಗೆ ಹಸ್ತಾಂತರಿಸುವ ಪ್ರಕ್ರಿಯೆ ನಡೆದಿದೆ. ಈ ಪ್ರಕ್ರಿಯೆ ನಿಲ್ಲಿಸಬೇಕೆಂದು ಸಾರ್ವಜನಿಕರು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.

ಹೊಸಕೋಟೆ ತಾಲ್ಲೂಕು ಕೇಂದ್ರ ಹೊರತುಪಡಿಸಿ ಅತಿಹೆಚ್ಚು ಜನಸಂಖ್ಯೆ ಇರುವ ಸೂಲಿಬೆಲೆ ಪಟ್ಟಣವಾಗಿ ಬೆಳೆಯುತ್ತಿದೆ. ಇದನ್ನು ಗಮನಿಸಿದ ಗ್ರಾಮದ ಮುಖಂಡರು ಮುಂದಾಲೋಚನೆಯಿಂದ ಸರ್ವೇ ನಂ. 10ರಲ್ಲಿ 9.36ಎಕರೆ ಜಮೀನು ಗುರುತಿಸಿ ಕ್ರೀಡಾಂಗಣ ನಿರ್ಮಿಸಲು ಸರ್ಕಾರದಿಂದ ಮಂಜೂರು ಮಾಡಿಸಿದ್ದರು. ಕ್ರೀಡಾಂಗಣ ಉಳಿಸಿಕೊಳ್ಳಬೇಕು ಅಥವಾ ಪರ್ಯಾಯ ಜಮೀನು ಗುರುತಿಸಿ ನಂತರ ಜಮೀನನ್ನು ಬೇರೆ ಇಲಾಖೆಗೆ ಹಸ್ತಾಂತರಿಸಬೇಕು. ಯುವಜನಾಂಗದ ದೃಷ್ಟಿಯಿಂದ ಕ್ರೀಡಾಂಗಣಕ್ಕೆ ಸೇರಿದ ಜಮೀನನ್ನು ಇಲಾಖೆಯಲ್ಲಿಯೇ ಉಳಿಸಿಕೊಳ್ಳಬೇಕೆಂಬುದು ಸ್ಥಳೀಯರ ಒತ್ತಾಯ.

9.36 ಎಕರೆ ಜಮೀನನ್ನು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಗೆ ವರ್ಗಾಯಿಸಲಾಗಿದೆ. ಈ ಜಮೀನಿಗೆ ಸುತ್ತಲೂ ತಂತಿಬೇಲಿ ಹಾಕಲು ಮತ್ತು ಕಾವಲುಗಾರ ಕೊಠಡಿ ನಿರ್ಮಿಸಲು ಸರ್ಕಾರದಿಂದ ₹ 1 ಲಕ್ಷ ಮಂಜೂರಾಗಿದ್ದು, ಈ ಪೈಕಿ ₹ 50 ಸಾವಿರ ಬಿಡುಗಡೆಯಾಗಿತ್ತು. ಉಳಿದ ಅನುದಾನವನ್ನು ಬಿಡುಗಡೆಗೊಳಿಸಲು 2000ರಲ್ಲಿ ನಡೆದ ಸಮಿತಿಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು ಎನ್ನುತ್ತಾರೆ ನಿವೃತ್ತ ಶಿಕ್ಷಕ ಎಂ. ಆಂಜನೇಯಲು.

ADVERTISEMENT

ಉದ್ಘಾಟನೆ ಭಾಗ್ಯ ಕಾಣದ ಭವನ:2011-12ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಉಪ ಯೋಜನೆಯಡಿ ಡಾ.ಬಿ.ಆರ್‌. ಅಂಬೇಡ್ಕರ್ ಯುವಜನ ಅಭಿವೃದ್ಧಿ ಕೇಂದ್ರ ಕಟ್ಟಡ ನಿರ್ಮಾಣವಾಗಿದೆ. ಕಟ್ಟಡ ನಿರ್ಮಾಣವಾಗಿ 8-9 ವರ್ಷ ಕಳೆದರೂ ಇಲ್ಲಿಯವರೆಗೆ ಉದ್ಘಾಟನೆ ಭಾಗ್ಯ ಕಂಡಿಲ್ಲ. ಸೂಲಿಬೆಲೆಯಲ್ಲಿ ಕ್ರೀಡಾಂಗಣದ ಕೊರತೆಯಿದೆ. ಹೋಬಳಿಯ ಯುವಕರು ಕ್ರಿಕೆಟ್ ನೆಟ್ ಅಭ್ಯಾಸ ಮಾಡಲು ಹೊಸಕೋಟೆ, ಕೆ.ಆರ್. ಪುರಕ್ಕೆ ಹೋಗಬೇಕಾಗಿದೆ ಎನ್ನುತ್ತಾರೆ ಯೂನಿಟಿ ಕ್ರಿಕೆಟರ್ಸ್ ಸದಸ್ಯ ಶಂಶಿರ್.

‘ಅನುದಾನ ಬಳಸಿಕೊಂಡು ಕ್ರೀಡಾಂಗಣ ಅಭಿವೃದ್ಧಿ ಪಡಿಸದಿದ್ದರೆ ತಾಲ್ಲೂಕು ಮಟ್ಟದಲ್ಲಿ ಪ್ರತಿಭಟನೆ ಕೈಗೊಳ್ಳಲಾಗುವುದು’ ಎನ್ನುತ್ತಾರೆ ಮಾನವ ಹಕ್ಕುಗಳ ಜಾಗೃತಿ ಸಮಿತಿಯ ಎಂ.ಆರ್. ಉಮೇಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.