ದೊಡ್ಡಬಳ್ಳಾಪುರ: ಭಾನುವಾರ ಸಂಭವಿಸಿದ ಕಂಕಣ ಸೂರ್ಯಗ್ರಹಣವನ್ನು ತಾಲ್ಲೂಕಿನಾದ್ಯಂತ ಖಗೋಳ ಪ್ರೇಮಿಗಳು ವೀಕ್ಷಿಸಿದರು. ಆದರೆ ಬೆಂಗಳೂರು ಭಾಗದಲ್ಲಿ ಪಾರ್ಶ್ವ ಗ್ರಹಣ ಗೋಚರಿಸಿದ್ದರಿಂದ ಹಾಗೂ ತಾಲ್ಲೂಕಿನಲ್ಲಿ ಬೆಳಗಿನಿಂದಲೂ ಸಹ ಮೋಡಕವಿದ ವಾತಾವರಣ ಇದ್ದುದ್ದರಿಂದ ಪೂರ್ಣ ಗ್ರಹಣದ ಆನಂದ ಸವಿಯಲು ಸಾಧ್ಯವಾಗಲಿಲ್ಲ.
ಗ್ರಹಣವನ್ನು ವಿಶೇಷ ಕನ್ನಡಕಗಳ ಮೂಲಕ ಬಹಳಷ್ಟು ಸಾರ್ವಜನಿಕರು ವೀಕ್ಷಿಸಿದರು. ಗ್ರಹಣದಿಂದಾಗಿ ಬಹಳಷ್ಟು ಜನ ಮನೆಯಿಂದ ಹೊರಗೆ ಬರಲಿಲ್ಲ. ಭಾನುವಾರವಾಗಿದ್ದರಿಂದ ಸಂಚಾರವೂ ಸಹ ವಿರಳವಾಗಿತ್ತು. ಬಹುತೇಕ ಹೋಟೆಲ್ಗಳು ಮುಚ್ಚಿದ್ದವು. ಬೆಳಿಗ್ಗೆ 10 ಗಂಟೆಗೆ ಗ್ರಹಣ ಆರಂಭವಾಯಿತಾದರೂ ಮಧ್ಯಕಾಲದ ವೇಳೆಗೆ ಮೋಡಗಳಿದ್ದುದರಿಂದ ಸ್ಪಷ್ಟವಾಗಿ ಗೋಚರಿಸಲಿಲ್ಲ.
ದೇವಾಲಯಗಳು ಬಂದ್: ತಾಲ್ಲೂಕಿನ ಘಾಟಿ ಸುಬ್ರಹ್ಮಣ್ಯಸ್ವಾಮಿ ದೇವಾಲಯ, ಕನಸವಾಡಿಯ ಶನಿಮಹಾತ್ಮ ದೇವಾಲಯ, ನಗರದ ರಾಮಲಿಂಗ ಚೌಡೇಶ್ವರಿ ದೇವಾಲಯ, ಪ್ರಸನ್ನ ವೆಂಕಟರಮಣಸ್ವಾಮಿ ದೇವಾಲಯ ಸೇರಿದಂತೆ ಎಲ್ಲಾ ದೇವಾಲಯಗಳನ್ನು ಬೆಳಿಗ್ಗೆ 9ರಿಂದಲೇ ಬಂದ್ ಮಾಡಲಾಗಿತ್ತು. ಮಧ್ಯಾಹ್ನ 2 ಗಂಟೆ ನಂತರ ದೇವಾಲಯವನ್ನು ಸ್ವಚ್ಛಗೊಳಿಸಿ ಸಂಜೆ 5 ಗಂಟೆಯ ನಂತರ ಭಕ್ತಾದಿಗಳ ದರ್ಶನಕ್ಕೆ ಅವಕಾಶ ನೀಡಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.