ದೇವನಹಳ್ಳಿ: ರಾಜ್ಯದ ಪ್ರಾದಶಿಕ ವಲಯಗಳಲ್ಲಿ 44 ಜಾತಿಗಳನ್ನು ಹಿಂದುಳಿದ ವರ್ಗದಡಿ ಪಟ್ಟಿಯಲ್ಲಿರುವುದರಿಂದ ಗಾಣಿಗ ಸಮುದಾಉಯಕ್ಕೆ ಸರ್ಕಾರ ಹೆಚ್ಚಿನ ಪ್ರಾತಿನಿಧ್ಯ ನೀಡುವ ಅವಶ್ಯವಿದೆ ಎಂದು ಗಾಣಿಗರ ಕ್ಷೇಮಾಭಿವೃದ್ಧಿ ಸಂಘದ ನಿರ್ದೇಶಕ ಜಿ.ರಾಜ್ ಗೋಪಾಲ್ ಸರ್ಕಾರವನ್ನು ಒತ್ತಾಯಿಸಿದರು.
ಗಾಣಿಗರ ಸಮುದಾಯದ ಮುಖಂಡ ಜಿ.ಎನ್.ವೇಣುಗೋಪಾಲ್ ಅವರಿಗೆ ಸಂಘದ ವತಿಯಿಂದ ಭಾನುವಾರ ಏರ್ಪಡಿಸಿದ್ದ ಅಭಿನಂದನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗಾಣಿಗರ ಸಮುದಾಯವನ್ನು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿರುವುದರಿಂದ ರಾಜಕೀಯ ಪ್ರಾತಿನಿಧ್ಯ ಸಿಗುವುದು ಕಷ್ಟವಾಗಿದೆ. ಬೆರಳೆಣಿಕೆಯಷ್ಟು ಪಂಚಾಯಿತಿ ಸದಸ್ಯರು ಆಯ್ಕೆಗೊಂಡಿರುವುದು ಬಿಟ್ಟರೆ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗೆ ಪಕ್ಷಗಳು ಟಿಕೆಟ್ ನೀಡುವುದು ಅನುಮಾನ. ಮುಂದಿನ ಚುನಾವಣೆಗೆ ಎಲ್ಲ ಪಕ್ಷಗಳ ಮೇಲೆ ಒತ್ತಡ ತರಲು ಸಂಘಟಿತರಾಗಬೇಕು ಎಂದು ಹೇಳಿದರು.
ಗ್ರಾಮಾಂತರ ಪ್ರದೇಶದಲ್ಲಿರುವ ಗಾಣಿಗ ಸಮುದಾಯ ಸಮಾಜದ ಮುಖ್ಯವಾಹಿನಿಗೆ ಬರಲು ಒಗ್ಗೂಡಬೇಕು. ಸರ್ಕಾರದ ವಿವಿಧ ಸವಲತ್ತು ಪಡೆಯಲು ಹಿಂದುಳಿದ ವರ್ಗದಲ್ಲಿರುವ ಪ್ರಬಲ ಸಮುದಾಯಗಳ ನಡುವೆ ಪೈಪೋಟಿ ನಡೆಸಬೇಕಾಗಿದೆ. ಸಮುದಾಯದಲ್ಲಿ ಶಿಕ್ಷಣದ ಜಾಗೃತಿ ಮೂಡಿಸಬೇಕಾಗಿದೆ ಎಂದು ಹೇಳಿದರು.
ಮಾತನಾಡಿದ ಮುಖಂಡ ಜಿ.ಎನ್.ವೇಣುಗೋಪಾಲ್ ಮಾತನಾಡಿ, ಸಮುದಾಯ ರಾಜಕೀಯ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ತೀರ ದುರ್ಬಲವಾಗಿದೆ. ಮೂಲವೃತ್ತಿ ಮೂಲೆಗೆ ಸೇರಿದೆ. ಆರ್ಥಿಕ ಅಭಿವೃದ್ಧಿಗೆ ಹಲವಾರು ಕ್ಷೇತ್ರಗಳಿವೆ. ಸರ್ಕಾರದ ಬಿಡಿಗಾಸು ಯೋಜನೆಗಳನ್ನ ಅವಲಂಬಿಸಬಾರದು ಎಂದು ಹೇಳಿದರು.
ಕಳೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಆಯ್ಕೆಗೊಂಡಿರುವ ಸದಸ್ಯರನ್ನು ಪಕ್ಷಾತೀತವಾಗಿ ಪಟ್ಟಿಮಾಡಿ ಜಿಲ್ಲಾ ಮಟ್ಟದ ಗಾಣಿಗರ ಸಮಾವೇಶ ನಡೆಸಿ ಸದಸ್ಯರಿಗೆ ಅಭಿನಂದಿಸಲು ಸಂಘದ ಪದಾಧಿಕಾರಿಗಳು ಸಹಕರಿಸಬೇಕು ಎಂದು ಹೇಳಿದರು.
ಸಂಘದ ಗೌರವಾಧ್ಯಕ್ಷ ರಾದ ವೆಂಕಟೇಶ್, ಕೃಷ್ಣಮೂರ್ತಿ, ಕಾರ್ಯಾಧ್ಯಕ್ಷ ಜಿ.ಕೆ.ರಾಮು, ಅಧ್ಯಕ್ಷ ವಿ.ಆಂಜಿನಪ್ಪ,ಪ್ರಧಾನ ಕಾರ್ಯದರ್ಶಿ ಎನ್.ಲಕ್ಷ್ಮಣ್, ಸಹಕಾರ್ಯದರ್ಶಿ ಶ್ರೀನಾಥ್, ಖಜಾಂಚಿ ಜಿ.ಮಂಜುನಾಥ್, ಸದಸ್ಯರಾದ ಶಿವಕುಮಾರ್, ರವಿಕುಮಾರ್, ಗ್ರಾಮ ಪಂಚಾಯಿತಿ ಸದಸ್ಯ ಹರೀಶ್, ಕಾನೂನು ಸಲಹೆಗಾರ ಎನ್.ಎಂ.ಅಮರ್ ನಾಥ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.