ವಿಜಯಪುರ: ಆದಿಕಾವ್ಯವೆಂದು ಹೆಸರಾಗಿರುವ ವಾಲ್ಮೀಕಿ ರಾಮಾಯಣ ಓದಿ ಪಾರಾಯಣ ಮಾಡಿದರೆ ಒಂದು ತೀರ್ಥಯಾತ್ರೆಗೆ ಸಮ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಲಕ್ಷ್ಮೀನಾರಾಯಣಪ್ಪ ಹೇಳಿದರು.
ಚನ್ನರಾಯಪಟ್ಟಣ ಹೋಬಳಿ ನಲ್ಲೂರು ಗ್ರಾಮ ಪಂಚಾಯಿತಿ ಆವರಣದಲ್ಲಿ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ರಾಮಾಯಣ ಮಹಾಕಾವ್ಯದ ಎಲ್ಲ ಪಾತ್ರಗಳು ಅಧ್ಯಾತ್ಮಿಕ, ಸಾಮಾಜಿಕ ನ್ಯಾಯ, ಮಾನವೀಯತೆ ಮತ್ತು ವಿಶ್ವ ಸಹೋದರತ್ವದ ಸಂಕೇತಗಳಾಗಿವೆ. ಜನರ ಬದುಕಿಗೆ ಸದಾ ಕಾಲ ಮಾರ್ಗದರ್ಶನ ಮಾಡಬಲ್ಲ ಸಾಮರ್ಥ್ಯ ರಾಮಾಯಣದಲ್ಲಿದೆ. ವಾಲ್ಮೀಕಿ ರಾಮಾಯಣದಲ್ಲಿ ಕೊಟ್ಟಿರುವ ಉದಾತ್ತ ಮೌಲ್ಯಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನವೀನ್ಕುಮಾರ್ ಮಾತನಾಡಿ, ಜನರ ಮನದಾಳದ ಅಂಧಕಾರ ತೊಲಗಿಸುವ ನಿಟ್ಟಿನಲ್ಲಿ ಜನಿಸಿದ ಅನೇಕ ಸಾಧು, ಸಂತರು, ದಾರ್ಶನಿಕರು, ಕವಿ, ಸಾಹಿತಿಗಳ ಮಾರ್ಗದರ್ಶನ ಎಲ್ಲರಿಗೂ ಮೆಲ್ಪಂಕ್ತಿ ಆಗಲಿ ಎಂದು ಅಭಿಪ್ರಾಯಪಟ್ಟರು.
ತಾಲ್ಲೂಕು ಪಂಚಾಯಿತಿ ಸದಸ್ಯ ಮಂಜುನಾಥ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಭಾಗ್ಯಮ್ಮ, ಗ್ರಾಮ ಪಂಚಾಯಿತಿ ಸದಸ್ಯರಾದ ಮಹಾಲಕ್ಷ್ಮೀ, ಮಂಜುಳ, ಆಂಜಿನಮ್ಮ, ಮಮತ, ಮಹಾದೇವಿ ಪಂಚಾಯಿತಿ ಕಾರ್ಯದರ್ಶಿ ರಮೇಶ್, ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.