ಆನೇಕಲ್: ಒಂಟಿ ಮನೆಯಲ್ಲಿದ್ದ ಮಹಿಳೆಯೊಬ್ಬರನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತಾಲ್ಲೂಕಿನ ಹೆಬ್ಬಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯ ಸಿಂಗೇನ ಅಗ್ರಹಾರದ ಬಳಿ ಗುರುವಾರ ರಾತ್ರಿ ನಡೆದಿದೆ.
ಶ್ವೇತಾ(35) ಕೊಲೆಯಾದ ಮಹಿಳೆ. ಶ್ವೇತಾ ಅವರ ಗಂಡ ಮುರಳಿಮೋಹನ್ ಅವರು ಚಂದಾಪುರದಲ್ಲಿ ಮೆಡಿಕಲ್ ಸ್ಟೋರ್ ನಡೆಸುತ್ತಿದ್ದಾರೆ. ಗುರುವಾರ ಸಂಜೆ ಶ್ವೇತಾ ಅವರ ಅತ್ತೆ ಮತ್ತು ಮಗ ಊರಿಗೆ ಹೋಗಿದ್ದರು. ಪತಿ ಮುರಳಿಮೋಹನ್ ಮೆಡಿಕಲ್ ಸ್ಟೋರ್ಗೆ ಹೋಗಿದ್ದರು. ಇವರ ಮನೆ ಊರಿನಿಂದ ಹೊರಗಡೆ ಇದ್ದು ಮನೆಯಲ್ಲಿ ಯಾರೂ ಇಲ್ಲದೇ ಇರುವುದನ್ನು ಕಂಡು ಹೊಂಚು ಹಾಕಿ ದುಷ್ಕರ್ಮಿಗಳು ಮನೆಗೆ ನುಗ್ಗಿ ಶ್ವೇತಾ ಅವರಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿ ಮಾಂಗಲ್ಯ ಸರ ಮತ್ತು ಮನೆಯಲ್ಲಿದ್ದ ಆಭರಣಗಳು ಇತರವಸ್ತುಗಳನ್ನು ಕದ್ದು ಪರಾರಿಯಾಗಿದ್ದಾರೆ.
ಘಟನಾ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಪೊಲೀಸ್ ಎಸ್ಪಿ ರವಿ ಡಿ.ಚನ್ನಣ್ಣನವರ್, ಎಎಸ್ಪಿ ಲಕ್ಷ್ಮೀ ಗಣೇಶ್, ಡಿವೈಎಸ್ಪಿ ಎಚ್.ಎಂ.ಮಹದೇವಯ್ಯ, ಸರ್ಕಲ್ ಇನ್ಸ್ಪೆಕ್ಟರ್ ಶೇಖರ್ ಭೇಟಿ ನೀಡಿದ್ದರು. ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಿವೈಎಸ್ಪಿ ಎಚ್.ಎಂ.ಮಹದೇವಯ್ಯ ನೇತೃತ್ವದಲ್ಲಿ ನಾಲ್ಕು ತಂಡಗಳನ್ನು ರಚಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.