ADVERTISEMENT

ಗ್ರಾಮೀಣ ಅಂಚೆ ನೌಕರರ ಮುಷ್ಕರ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2012, 9:30 IST
Last Updated 18 ಅಕ್ಟೋಬರ್ 2012, 9:30 IST

ರಾಮದುರ್ಗ: ಗ್ರಾಮೀಣ ಅಂಚೆ ನೌಕರರನ್ನು ಕಾಯಂಗೊಳಿಸಬೇಕು ಮತ್ತು ಪಿಂಚಣಿ ಸೌಲಭ್ಯ ಒದಗಿಸಬೇಕೆಂದು ಒತ್ತಾಯಿಸಿ ಗ್ರಾಮೀಣ ಅಂಚೆ ನೌಕರರು ಬುಧವಾರದಿಂದ ಇಲ್ಲಿನ ಅಂಚೆ ಕಾರ್ಯಾಲಯದ ಮುಂದೆ ಅನಿರ್ಧಿಷ್ಟ ಧರಣಿ ಸತ್ಯಾಗ್ರಹ ಆರಂಭಿಸಿದರು.

ಗ್ರಾಮೀಣ ಅಂಚೆ ನೌಕರರ ಮೇಲೆ ಕಾಯಂಗೊಂಡಿರುವ ಅಧಿಕಾರಿಗಳು ನಡೆಸುತ್ತಿರುವ ದೌರ್ಜನ್ಯ ತಡೆಯಬೇಕು. ಗ್ರಾಮೀಣ ನೌಕರರಿಗೆ ನಿಗದಿತ ಅವಧಿಯ ಕೆಲಸದ ಸಮಯ ನಿಗದಿ ಪಡಿಸಬೇಕು. ಕಾಯಂ ನೌಕರರು ಗ್ರಾಮೀಣ ಅಂಚೆ ನೌಕರರನ್ನು ಒತ್ತೆಯಾಳುಗಳಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ದೂರಿದರು.

ಗ್ರಾಮೀಣ ಅಂಚೆ ನೌಕರರಿಗೆ ಕಡಿಮೆ ಪ್ರಮಾಣದ ಕೆಲಸದ ಹೊರೆ ಬೀಳುತ್ತಿದೆ ಎಂದು ಅಧಿಕಾರಿಗಳು ದೂರುತ್ತಾರೆ. ದೇಶದಲ್ಲಿ ಸಾಕಷ್ಟು ಪ್ರಮಾಣದ ಹಳ್ಳಿಗಳು ಹೆಚ್ಚಾಗುತ್ತಿವೆ. ಅಂತೆಯೇ ನವಗ್ರಾಮಗಳು ನಿರ್ಮಾಣಗೊಳ್ಳುತ್ತಿವೆ. ಆದರೂ ಗ್ರಾಮೀಣ ಅಂಚೆ ನೌಕರರಿಗೆ ಕೆಲಸದ ಒತ್ತಡ ಬೀಳುವುದಿಲ್ಲ ಎಂದು ಅಧಿಕಾರಿಗಳು ಹೇಳುವುದರಲ್ಲಿ ಹುರುಳಿಲ್ಲ ಎಂದರು.

ಮುಷ್ಕರದ ನೇತೃತ್ವವನ್ನು ಗ್ರಾಮೀಣ ಅಂಚೆ ನೌಕರರ ಸಂಘದ ಅಧ್ಯಕ್ಷ ಕೆ. ಕೆ. ದೇಶಪಾಂಡೆ, ಎಸ್. ಎಫ್. ಬರಿದೆಲಿ, ಎಚ್. ಐ. ರಾಮದುರ್ಗ, ಬಿ. ಎ. ಸನದಿ, ಡಿ. ಕೆ. ಚಿಟ್ನೀಸ್ ವಹಿಸಿಕೊಂಡಿದ್ದರು.

ರೋಡ್ ಷೋ ಇಂದು
ಗೋಕಾಕ: ಅಂಚೆ ಇಲಾಖೆಯ ಆರ್‌ಪಿಎಲ್‌ಆಯ್ ಹಾಗೂ ಪಿಎಲ್‌ಆಯ್ ಯೋಜನೆಗಳ ಕುರಿತು ನಗರ ಹಾಗೂ ಗ್ರಾಮೀಣ ಪ್ರದೇಶದ ಗ್ರಾಹಕರಲ್ಲಿ ಜಾಗೃತಿ ಮೂಡಿಸುವ ಸಂಬಂಧ ಸ್ಥಳೀಯ ಅಂಚೆ ಇಲಾಖೆ ಆಶ್ರಯದಲ್ಲಿ  ರೋಡ್‌ಷೋ ಕಾರ್ಯಕ್ರಮ ನಗರದ ಅಂಚೆ ಕಚೇರಿ ಆವರಣದಲ್ಲಿ ಇದೇ 18ರಂದು ಮುಂಜಾನೆ 8-30 ಗಂಟೆಗೆ ಜರುಗಲಿದೆ.

ಗೋಕಾಕ ಅರ್ಬನ್ ಬ್ಯಾಂಕ್ ಚೇರಮನ್ ಮಲ್ಲಿಕಾರ್ಜುನ ಚುನಮರಿ ಕಾರ್ಯಕ್ರಮ ಉದ್ಘಾಟಿಸುವರು.  ಅಂಚೆ ಇಲಾಖೆ ಅಧೀಕ್ಷಕ ಡಿ.ಎಸ್. ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.