ಮೂಡಲಗಿ: `ದಾನಗಳಲ್ಲಿ ರಕ್ತ ದಾನವು ಶ್ರೇಷ್ಠ ದಾನವಾಗಿದೆ~ ಎಂದು ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಅವರು ಹೇಳಿದರು.
ಇಲ್ಲಿಯ ಕೆ.ಎಚ್. ಸೋನವಾಲಕರ ಪ್ರತಿಷ್ಠಾನ, ಜೈಂಟ್ಸ್ ಗ್ರುಪ್, ಎಂ.ಇ.ಎಸ್. ಕಲಾ ಹಾಗೂ ವಾಣಿಜ್ಯ ಕಾಲೇಜಿನ ರೆಡ್ ಕ್ರಾಸ್ ಮತ್ತು ಎನ್ಎಸ್ಎಸ್ ಘಟಕ, ಸಿ.ಎನ್. ಮುಗಳಖೋಡ ಇನ್ಸಸ್ಟಿಟ್ಯೂಟ್ ಆಪ್ ನರ್ಸಿಂಗ್ ಮತ್ತು ಗೋಕಾಕ ರಕ್ತ ಭಂಡಾರದ ಸಹಯೋಗದಲ್ಲಿ ಕೃಷ್ಣಪ್ಪ ಸೋನವಾಲಕರ ಅವರ 68ನೇ ಜನ್ಮ ದಿನಾಚರಣೆಯ ನಿಮಿತ್ತ 3ನೇ ಬೃಹತ್ ಐಚ್ಛಿಕ ರಕ್ತದಾನ ಶಿಬಿರ ಮತ್ತು ಮೂಡಲಗಿ ಶೈಕ್ಷಣಿಕ ವಲಯ ಮಟ್ಟದ ಶಾಲಾ ಮಕ್ಕಳ ಸ್ಕೌಟ್ಸ್ ಮತ್ತು ಗೈಡ್ಸ್ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ರಕ್ತದಾನದಿಂದ ಜೀವ ಉಳಿಸಿದ ಪುಣ್ಯ ದೊರೆಯುತ್ತದೆ. ಸಂಘ, ಸಂಸ್ಥೆಗಳು ಸಮಾಜ ಮೆಚ್ಚುವಂತ ಕೆಲಸವನ್ನು ಮಾಡುವುದರ ಮೂಲಕ ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.
ಕೆ.ಎಚ್. ಸೋನವಾಲ್ಕರ್ ಪ್ರತಿಷ್ಠಾನವು ರಕ್ತದಾನ ಶಿಬಿರ ಏರ್ಪಡಿಸುವ ಮೂಲಕ ಸಮಾಜಕ್ಕೆ ಉತ್ತಮ ಕೆಲಸವನ್ನು ಮಾಡುವದರ ಮೂಲಕ ಕೃಷ್ಣಪ್ಪ ಅವರ ನೆನಪನ್ನು ಅಜರಾಮಗೊಳಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಮಾತನಾಡಿ ಸರ್ಕಾರಿ ಶಾಲೆಗೆ ಭೂದಾನ ಮಾಡುವುದರ ಮೂಲಕ ಕೆ.ಎಚ್. ಸೋನವಾಲ್ಕರ್ ಕುಟುಂಬವು ಶಿಕ್ಷಣ ಕ್ಷೇತ್ರಕ್ಕೆ ಅಪೂರ್ವ ಕೊಡುಗೆ ನೀಡಿದೆ ಎಂದು ಹೇಳಿದರು.
ಮೂಡಲಗಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಎಂ.ಎಚ್.ಸೋನವಾಲ್ಕರ್,ರೋಟರಿ ರಕ್ತ ಭಂಡಾರ ಕಾರ್ಯದರ್ಶಿ ಸೋಮಶೇಖರ ಮಗದುಮ್ ಮಾತನಾಡಿದರು.
ಪುರಸಭೆ ಮಾಜಿ ಅಧ್ಯಕ್ಷ ಎಸ್.ಆರ್. ಸೋನವಾಲ್ಕರ್ ಅಧ್ಯಕ್ಷತೆ ವಹಿಸಿದ್ದರು.
ಅಮೃತಬೋಧ ಸ್ವಾಮೀಜಿ ಮತ್ತು ಲಕ್ಷ್ಮಣ ದೇವರು ಸಾನ್ನಿಧ್ಯ ವಹಿಸಿದ್ದರು.
ಮುಖ್ಯ ಅತಿಥಿಯಾಗಿ ಪುರಸಭೆ ಅಧ್ಯಕ್ಷೆ ನಾಗರತ್ನಾ ಯಮಕನಮರಡಿ, ಲಕ್ಷ್ಮೀಬಾಯಿ ಕೆ. ಸೋನವಾಲಕರ, ಮಲ್ಲಿಕಾರ್ಜುನ ಕಬ್ಬೂರ, ಜಿ.ಟಿ. ಸೋನವಾಲಕರ, ವೈದ್ಯಾಧಿಕಾರಿ ಡಾ. ಭಾರತಿ ಕೋಣಿ, ಡಾ. ಅನೀಲ ಪಾಟೀಲ, ಡಾ. ಎಸ್.ಎಸ್. ಪಾಟೀಲ, ಡಾ. ಗಿರೀಶ ಸೋನವಾಲಕರ, ರಮೇಶ ಪ್ಯಾಟಿಗೌಡರ, ಪ್ರಾಚಾರ್ಯ ಬಿ.ಸಿ. ಪಾಟೀಲ, ಪ್ರೊ. ಎಸ್.ಎ. ಶಾಸ್ತ್ರೀಮಠ ಭಾಗವಹಿಸಿದ್ದರು.
ಬಾಲಶೇಖರ ಬಂದಿ ಸ್ವಾಗತಿಸಿದರು, ಪ್ರೊ. ಸಂಗಮೇಶ ಗುಜಗೊಂಡ, ಕರಿಬಸವರಾಜ ನಿರೂಪಿಸಿದರು, ಅಶೋಕ ಬೆಣ್ಣಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.