ರಾಮದುರ್ಗ: ಬರಪೀಡಿತ ತಾಲ್ಲೂಕಿಗೆ ಕುಡಿಯುವ ನೀರು ಪೂರೈಕೆಗೆ ಹಾಗೂ ಬರ ಕಾಮಗಾರಿ ಆರಂಭಿಸಲು 50 ಲಕ್ಷ ರೂ. ನೀಡುವುದಾಗಿ ಹೇಳಿದ್ದ ಸರ್ಕಾರ ಹಣ ಬಿಡುಗಡೆ ಮಾಡದಿರುವುದನ್ನು ನೋಡಿದರೆ ಸರ್ಕಾರದ ಖಜಾನೆ ಖಾಲಿಯಾಗಿದೆ ಎಂದು ಶಾಸಕ ಅಶೋಕ ಪಟ್ಟಣ ಲೇವಡಿ ಮಾಡಿದರು.
ಪಟ್ಟಣದ ವೆಂಕಟೇಶ್ವರ ದೇವಸ್ಥಾನದಲ್ಲಿ ನಡೆದ ತಾಲ್ಲೂಕು ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅಶೋಕ ಪಟ್ಟಣ ಬರ ಪೀಡಿತ ತಾಲ್ಲೂಕುಗಳಲ್ಲಿ ಬರ ಕಾಮಗಾರಿ ಆರಂಭಿಸಲು ರೂ. 25 ಲಕ್ಷ ನೀಡಿದ್ದನ್ನು ಬಿಟ್ಟರೆ ಒಂದು ಪೈಸೆ ಬಿಡುಗಡೆ ಮಾಡಿಲ್ಲ ಎಂದು ರಾಜ್ಯ ಸರ್ಕಾರದ ಕಾರ್ಯ ವೈಖರಿ ಕುರಿತು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರದ ಅನುದಾನದಲ್ಲಿ ತಾಲ್ಲೂಕಿನಲ್ಲಿ 5 ಸ್ಥಳಗಳಲ್ಲಿ ಸುಮಾರು ರೂ. 8 ಕೋಟಿ ವೆಚ್ಚದಲ್ಲಿ ಬ್ರಿಜ್ ಕಂ ಬ್ಯಾರೇಜ್ ನಿರ್ಮಿಸಲಾಗುತ್ತದೆ. ಬಸವ ಇಂದಿರಾ ವಸತಿ ಯೋಜನೆಯಡಿ 2 ಸಾವಿರ ಮನೆಗಳನ್ನು ಮಂಜೂರ ಮಾಡಿಸಿದ್ದು ಕೆಲ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯರು ಅನುಷ್ಠಾನಕ್ಕೆ ವಿರೋಧಿಸುತ್ತಿದ್ದಾರೆ ಎಂದು ಆರೋಪಿಸಿದರು.
ಜಿ.ಪಂ ಮಾಜಿ ಸದಸ್ಯ ಮಾರುತಿ ಕೊಪ್ಪದ ಹುಲಕುಂದ, ಮತ್ತು ಬಿ. ಎಸ್. ನಾಯ್ಕ ಮಾತನಾಡಿದರು. ಕಾಂಗ್ರೆಸ್ ಪಕ್ಷದತ್ತ ಯುವಕರು ಬರುತ್ತಿದ್ದಾರೆ. ಆದರೆ ಕೆಲವು ಹಿರಿಯರು ಪಕ್ಷದಿಂದ ದೂರ ಸರಿಯುತ್ತಿದ್ದಾರೆ. ಅವರನ್ನು ಮತ್ತೇ ಪಕ್ಷದತ್ತ ತರುವ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.
ಪುರಸಭೆ ಮಾಜಿ ಅಧ್ಯಕ್ಷ ಬಾಬಣ್ಣ ಪತ್ತೇಪೂರ, ಪುರಸಭೆ ಉಪಾಧ್ಯಕ್ಷ ರಾಜಶೇಖರ ಶೆಲವಡಿ, ತಾಪಂ ಮಾಜಿ ಉಪಾಧ್ಯಕ್ಷೆ ರೂಪಾ ಯಲಿಗೋಡ, ಶಫಿ ಬೆಣ್ಣಿ ಮಾತನಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪರಪ್ಪ ಜಂಗವಾಡ, ಡಾ. ಎಸ್. ಜಿ. ಪಾಟೀಲ, ಅಶೋಕ ಗಾಣಿಗೇರ, ಮಹಿಬೂಬ ಯಕ್ಕುಂಡಿ ಮತ್ತು ಗಾಯತ್ರಿ ದೇವಾಂಗಮಠ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.