ADVERTISEMENT

ಸರ್ಕಾರಿ ಕಾರ್ಯದಲ್ಲಿ ರಾಜಕಾರಣ ಸಲ್ಲದು

ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2018, 11:28 IST
Last Updated 8 ಮಾರ್ಚ್ 2018, 11:28 IST
ನೂತನ ನಿಪ್ಪಾಣಿ ತಾಲ್ಲೂಕು ಕಾರ್ಯಾಲಯವನ್ನು ಉದ್ಘಾಟಿಸಿ ಸಚಿವ ರಮೇಶ ಜಾರಕಿಹೊಳಿ ಮಾತನಾಡಿದರು
ನೂತನ ನಿಪ್ಪಾಣಿ ತಾಲ್ಲೂಕು ಕಾರ್ಯಾಲಯವನ್ನು ಉದ್ಘಾಟಿಸಿ ಸಚಿವ ರಮೇಶ ಜಾರಕಿಹೊಳಿ ಮಾತನಾಡಿದರು   

ನಿಪ್ಪಾಣಿ: ತಾಲ್ಲೂಕಿನ ತಹಶೀಲ್ದಾರ್ ಕಾರ್ಯಾಲಯವನ್ನು ಬುಧವಾರ ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಉದ್ಘಾಟಿಸಿದರು.

‘ಕಾಂಗ್ರೆಸ್‌ ಮುಖಂಡ ಕಾಕಾಸಾಹೇಬ ಪಾಟೀಲ ಅವರ ಸತತ ಪ್ರಯತ್ನದಿಂದಾಗಿ ತಾಲ್ಲೂಕು ಘೋಷಣೆಯಾಗಿದೆ. ತಾಲ್ಲೂಕಿನ ಸರ್ವಾಂಗೀಣ ವಿಕಾಸಕ್ಕೆ ಕಟಿಬದ್ಧರಾಗಿದ್ದೇವೆ. ರಾಜಕಾರಣಕ್ಕಾಗಿ ಸರ್ಕಾರಿ ಕಾರ್ಯ ಅಥವಾ ಕಾರ್ಯಾಲಯದ ಬಳಕೆ ಸೂಕ್ತವಲ್ಲ’ ಎಂದರು.

ಚಿಕ್ಕೋಡಿ ತಹಶೀಲ್ದಾರ್ ಚಿದಂಬರ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿ ‘ಶೀಘ್ರದಲ್ಲಿಯೇ ಎಲ್ಲ ಕಚೇರಿಗಳನ್ನು ಆರಂಭಿಸಲಾಗುವುದು. ತಾಲ್ಲೂಕು ವ್ಯಾಪ್ತಿಯಲ್ಲಿ ಒಟ್ಟು 34 ಗ್ರಾಮ ಪಂಚಾಯ್ತಿಗಳಿದ್ದು, 53 ಗ್ರಾಮಗಳಿವೆ. 3.10 ಲಕ್ಷ ಜನಸಂಖ್ಯೆ ಇದೆ. ಮಿನಿ ವಿಧಾನಸೌದ ನಿರ್ಮಿಸಲು ನಗರಸಭೆಯು 2 ಎಕರೆ ಜಾಗ ನೀಡಿದ್ದು, ಶೀಘ್ರದಲ್ಲಿಯೇ ಕಾಮಗಾರಿ ಆರಂಭಿಸಲಾಗುವುದು ಎಂದರು.

ADVERTISEMENT

ಚಿಕ್ಕೋಡಿ ಉಪವಿಭಾಗಾಧಿಕಾರಿ ಗೀತಾ ಕೌಲಗಿ ಮಾತನಾಡಿದರು. ಕಾಂಗ್ರೆಸ್‌ ಮುಖಂಡ ಕಾಕಾಸಾಹೇಬ ಪಾಟೀಲ, ಸುಭಾಷ ಜೋಶಿ, ನಗರಸಭೆ ಅಧ್ಯಕ್ಷ ವಿಲಾಸ್‌ ಗಾಡಿವಡ್ಡರ, ಉಪಾಧ್ಯಕ್ಷ ಸುನೀಲ ಪಾಟೀಲ ವೇದಿಕೆಯಲ್ಲಿದ್ದರು. ನಿಪ್ಪಾಣಿ ತಹಶೀಲ್ದಾರ್ ಸಂಜೀವ ಕಾಂಬಳೆ ಸ್ವಾಗತಿಸಿದರು. ಶಾಸಕಿ ಶಶಿಕಲಾ ಜೊಲ್ಲೆ ಈಗಾಗಲೇ ಕಾರ್ಯಾಲಯ ಉದ್ಘಾಟಿಸಿದ್ದರು.

‘ಶಾಸಕಿ ತಮ್ಮ ಕಾರ್ಯಕರ್ತರೊಂದಿಗೆ ಕಾರ್ಯಾಲಯ ಉದ್ಘಾಟಿಸಿದ್ದಾರೆ. ಶಿಷ್ಟಾಚಾರದಂತೆ ಜಿಲ್ಲಾ ಉಸ್ತುವಾರಿ ಸಚಿವರು, ಅಧಿಕಾರಿಗಳು ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ ಕಚೇರಿ ಉದ್ಘಾಟಿಸಲಾಗುವುದು’ ಎಂದು ನಗರಸಭೆ ಅಧ್ಯಕ್ಷ ವಿಲಾಸ ಗಾಡಿವಡ್ಡರ್‌ ಹೇಳಿದ್ದರು.

ಅದರಂತೆ ಬುಧವಾರ ಮತ್ತೆ ಕಾರ್ಯಾಲಯ ಉದ್ಘಾಟಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.