ADVERTISEMENT

ಸಾಲ ಮನ್ನಾ ಬಾಬ್ತು ₨ 1,185 ಕೋಟಿ ಬಾಕಿ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2013, 8:21 IST
Last Updated 4 ಡಿಸೆಂಬರ್ 2013, 8:21 IST

ಸುವರ್ಣಸೌಧ (ಬೆಳಗಾವಿ): ಪ್ರಸಕ್ತ ಸಾಲಿನ ರೈತರ ಬೆಳೆಸಾಲ ಮನ್ನಾ ಬಾಬ್ತು ₨ 1,185 ಕೋಟಿಯನ್ನು ಸಹಕಾರ ಸಂಘಗಳು ಮತ್ತು ಬ್ಯಾಂಕು ಗಳಿಗೆ ಬಿಡುಗಡೆ ಮಾಡ ಬೇಕಿದೆ ಎಂದು ಸಹಕಾರ ಸಚಿವ ಎಚ್.ಎಸ್. ಮಹದೇವ ಪ್ರಸಾದ್ ಅವರು ಮಂಗಳವಾರ ವಿಧಾನ ಪರಿಷತ್ತಿಗೆ ತಿಳಿಸಿದರು.

ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಸಾಲ ಮನ್ನಾ ಯೋಜನೆಯಡಿ ಈವರೆಗೆ ₨ 2,073.77 ಕೋಟಿ ಬಿಡುಗಡೆ ಮಾಡಿದೆ. ಬಾಕಿ ಇರುವ ₨ 1,185 ಕೋಟಿಯನ್ನು 2014ರ ಮಾರ್ಚ್ ಅಂತ್ಯದೊಳಗೆ ಪೂರ್ಣ ವಾಗಿ ಪಾವತಿಸಲಾಗುವುದು ಎಂದರು.

ಒಟ್ಟು 15.38 ಲಕ್ಷ ರೈತರು ಸಾಲ ಮನ್ನಾ ಯೋಜನೆಯ ಅನುಕೂಲ ಪಡೆಯುತ್ತಾರೆ. ಈಗಾಗಲೇ 9.17 ಲಕ್ಷ ರೈತರು ಈ ಯೋಜನೆಯ ಲಾಭ ಪಡೆದಿದ್ದಾರೆ. ಇನ್ನೂ 5.21 ಲಕ್ಷ ರೈತರು ಈ ಯೋಜನೆಯ ಅನುಕೂಲ ಪಡೆಯಲಿದ್ದಾರೆ ಎಂದು ಸದನಕ್ಕೆ ವಿವರ ಒದಗಿಸಿದರು.

ಸಾಲಮನ್ನಾ ಯೋಜನೆಯ ಬಾಕಿ ಬಿಡುಗಡೆ ಮಾಡದ ಕಾರಣದಿಂದ ರೈತರಿಗೆ ಹೊಸ ಸಾಲ ದೊರೆಯುತ್ತಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ಕಾಲಕಾಲಕ್ಕೆ ಸಾಲ ಮನ್ನಾ ಬಾಬ್ತು ಹಣ ಬಿಡುಗಡೆ ಮಾಡಲಾಗು ತ್ತಿದೆ. ಹಿಂದಿನ ವರ್ಷ ಈ ಅವಧಿ ಯಲ್ಲಿನ₨ 3,200 ಕೋಟಿ ಸಾಲ ಹಂಚಿಕೆ ಮಾಡಲಾಗಿತ್ತು. ಈ ವರ್ಷ ಈವರೆಗೆ ₨ 4,300 ಕೋಟಿ ಸಾಲ ವಿತರಿಸಲಾಗಿದೆ ’  ಎಂದರು.

ಮತ್ತೆ ಸಾಲ ಮನ್ನಾ ಇಲ್ಲ
ಅತಿವೃಷ್ಟಿಯಿಂದ ತೀವ್ರ ಸಂಕಷ್ಟದಲ್ಲಿ ಇರುವ ಮಲೆನಾಡಿನ ರೈತರ ಸಂಪೂರ್ಣ ಸಾಲವನ್ನು ಒಂದು ಬಾರಿಗೆ ಮನ್ನಾ ಮಾಡಬೇಕೆಂಬ ಜೆಡಿಎಸ್‌ನ ಎಂ.ಸಿ.ನಾಣಯ್ಯ  ಬೇಡಿಕೆ ಯನ್ನು ನಿರಾಕರಿಸಿದ ಮಹದೇವ ಪ್ರಸಾದ್, ‘ಮತ್ತೆ ಸಾಲಮನ್ನಾ ಸಾಧ್ಯವಿಲ್ಲ ಎಂದರು. ರೈತರ ಎಲ್ಲ ಸಮಸ್ಯೆಗಳಿಗೂ ಸಾಲಮನ್ನಾವೇ ಪರಿಹಾರವಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.