ಬೆಳಗಾವಿ: ಇಲ್ಲಿನ ಮರಾಠ ಲಘುಪದಾತಿ ದಳದಲ್ಲಿ (ಎಂಎಲ್ಐಆರ್ಸಿ) ಮಂಗಳವಾರ ಅಗ್ನಿವೀರರ ನಿರ್ಗಮನ ಪಥಸಂಚಲನ ನಡೆಯಿತು. 31 ವಾರಗಳ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ 651 ಅಗ್ನಿವೀರರು ದೇಶಸೇವೆಗೆ ಸೇರ್ಪಡೆಯಾದರು.
ಮೋಡ ಮುಸುಕಿದ ವಾತಾವರಣದಲ್ಲಿ ಸೇನಾ ಸಮವಸ್ತ್ರದಲ್ಲಿ ಬಂದ ಯುವಜನರ ದಂಡು ಗಮನ ಸೆಳೆಯಿತು. ಅತ್ಯಂತ ಶಿಸ್ತು, ಹುಮ್ಮಸ್ಸಿನಿಂದ ನಡೆಸಿದ ಪಥಸಂಚಲನ ಕಂಡು ಪಾಲಕರು, ಕುಟುಂಬವರು ಹರ್ಷ ಪಟ್ಟರು.
ಎಂಎಲ್ಐಆರ್ಸಿ ಕಮಾಂಡೆಂಟ್ ಬ್ರಿಗೇಡಿಯರ್ ಜೋಯ್ದೀಪ್ ಮುಖರ್ಜಿ ಅವರು ಪಥಸಂಚಲನ ಪರಿಶೀಲಸಿದರು. ಪರೇಡ್ಗೆ ಅಗ್ನಿವೀರ ಲಹಾನೆ ಅತುಲ್ ನಾಯಕತ್ವ ವಹಿಸಿದರು. ಮೇಜರ್ ಸಂದೀಪ್ ಕುಮಾರ್ ಪರೇಡ್ ಅಡ್ಜಟಂಟ್ ಆಗಿದ್ದರು. ರಾಷ್ಟ್ರಧ್ವಜ, ರೆಜಿಮೆಂಟಲ್ ಧ್ವಜ ಮತ್ತು ಧಾರ್ಮಿಕ ಪವಿತ್ರ ಪುಸ್ತಕಗಳ ಸಾಕ್ಷಿಯಾಗಿ ಅಗ್ನಿವೀರರು ಪ್ರತಿಜ್ಞಾವಿಧಿ ಸ್ವೀಕರಿಸಿದರು.
ನಾಯಕ್ ಯಶವಂತ ಘಾಡ್ಗೆ ‘ವಿಕ್ಟೋರಿಯಾ ಕ್ರಾಸ್’ ಪದಕವನ್ನು ಅಗ್ನಿವೀರ ಸಾಹಿಲ್ ಶಿಂಧೆ ಅವರಿಗೆ ಪ್ರದಾನ ಮಾಡಿದರು. ಪ್ರತಿಭಾವಂತ ಅಗ್ನಿವೀರರು ಮತ್ತು ಅವರ ಕುಟುಂಬಸ್ಥರನ್ನು ಗೌರವಿಸಲಾಯಿತು.
ಶರ್ಕತ್ ಯುದ್ಧ ಸ್ಮಾರಕಕ್ಕೆ ಗಣ್ಯರು ಪುಷ್ಪಗುಚ್ಛ ಅರ್ಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.