ಐಗಳಿ: ‘ರೈತರ ಮಕ್ಕಳು ಒಕ್ಕಲುತನದಿಂದ ದೂರವಾಗಬಾರದೆಂದು ಅಥಣಿ ತಾಲ್ಲೂಕಿನಲ್ಲಿ ಕೃಷಿ ಕಾಲೇಜು ಸ್ಥಾಪಿಸಲಾಗುವುದು’ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.
ಸಮೀಪದ ಕೋಹಳ್ಳಿ ಗ್ರಾಮದಲ್ಲಿ ₹ 1.17 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಅಪ್ಪಯ್ಯ ಸ್ವಾಮಿ ಸಮುದಾಯ ಭವನ ಉದ್ಘಾಟಿಸಿ ಅವರು ಮಾತನಾಡಿದರು.
‘ಕೇಂದ್ರೀಯ ವಿದ್ಯಾಲಯವನ್ನೂ ತರಲಾಗುವುದು. ಮುಂಬರುವ ಬಜೆಟ್ನಲ್ಲಿ ಅನುಮತಿ ಪಡೆದು ಆದಷ್ಟು ಬೇಗ ಕಾಮಗಾರಿ ಪ್ರಾರಂಭಿಸಿ ಇಲ್ಲಿಯ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲಾಗುವುದು. ತಾಲ್ಲೂಕಿನ ಕೊಕಟನೂರ ಗ್ರಾಮದಲ್ಲಿ ನಿರ್ಮಾಣಗೊಂಡ ಪಶುವೈದ್ಯಕೀಯ ಕಾಲೇಜಿನಲ್ಲಿ ವಿದ್ಯಾರ್ಥಿಗಳ ದಾಖಲಾತಿ ಬರುವ ವರ್ಷ ಪ್ರಾರಂಭವಾಗಲಿದೆ’ ಎಂದು ತಿಳಿಸಿದರು.
‘ಗ್ರಾಮ ಪಂಚಾಯ್ತಿ ಸದಸ್ಯರು ರಾಜಕೀಯ ಮಾಡದೆ ಹಳ್ಳಿಗಳ ಅಭಿವೃದ್ಧಿಯತ್ತ ಗಮನಹರಿಸಬೇಕು. ಜನರಿಗೆ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಬೇಕು’ ಎಂದರು.
ಸಾನ್ನಿಧ್ಯ ವಹಿಸಿದ್ದ ಅಥಣಿ ಗಚ್ಚಿನ ಮಠದ ಶಿವಬಸವ ಸ್ವಾಮೀಜಿ, ವೀರಭದ್ರೇಶ್ವರ ಶಿವಾಚಾರ್ಯ, ವೀರೇಶ ದೇವರು, ಮೃತ್ಯುಂಜಯ ಸ್ವಾಮೀಜಿ, ಗಣೇಶ ಗುರೂಜಿ, ಯೋಗಾನಂದ ಸ್ವಾಮೀಜಿ ಮಾತನಾಡಿದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಹಾದೇವ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ಆತ್ಮಾರಾಮ ಸ್ವಾಮೀಜಿ, ಸಿ.ಎಸ್. ನೇಮಗೌಡ, ಎಸ್.ಎಲ್. ಪೂಜಾರಿ, ವೀರಸಂಗೌಡ ಪಾಟೀಲ, ನೂರಅಹಮ್ಮದ ಡೊಂಗರಗಾಂವ, ಉಮ್ಮಯ್ಯ ಪೂಜಾರಿ, ರಾಮು ಕುಂಬಾರ, ಅಪ್ಪಯ್ಯ ಸ್ವಾಮಿ ಟ್ರಸ್ಟ್ ಸಮಿತಿ ಅಧ್ಯಕ್ಷ ಸುನೀಲ ಝೇರೆ, ಶಾಮು ಕುಂಬಾರ, ಗುರುಬಸು ಬಂಡರಗೊಟ್ಟಿ, ಭೂಸೇನಾ ನಿಗಮದ ಎಇಇ ಷಣ್ಮುಖಪ್ಪ, ಮಲ್ಲಿಕಾರ್ಜುನ ಕೆಂಪವಾಡ ಇದ್ದರು.
ಸಹದೇವ ಸೂರ್ಯವಂಶಿ ಸ್ವಾಗತಿಸಿದರು. ಸುರೇಶ ಅಥಣಿ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.