ADVERTISEMENT

‘ಸಾಗರದಾಚೆಗೂ ಬಸವಧರ್ಮ ಜೀವಂತ’

​ಪ್ರಜಾವಾಣಿ ವಾರ್ತೆ
Published 8 ಜುಲೈ 2025, 2:46 IST
Last Updated 8 ಜುಲೈ 2025, 2:46 IST
   

ಬೆಳಗಾವಿ: ‘ಭಾರತದಿಂದ ಸಾವಿರಾರು ಮೈಲಿ ದೂರವಿರುವ ನೀವೆಲ್ಲರೂ ಬಸವ ಧರ್ಮವನ್ನು ಸಾಗರದಾಚೆಗೂ ಜೀವಂತಗೊಳಿಸಿದ್ದೀರಿ. ನಿಮ್ಮೆಲ್ಲರ ಬಸವಾಭಿಮಾನಕ್ಕೆ ಎಷ್ಟು ಅಭಿನಂದನೆಗಳನ್ನು ಸಲ್ಲಿಸಿದರೂ ಕಡಿಮೆ. ಬಸವಣ್ಣನವರು ವಿಶ್ವ ಸಂದೇಶ ನೀಡಿದ ಮಹಾ ಮಾನವತಾವಾದಿ’ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಹೇಳಿದರು.

ಉತ್ತರ ಅಮೆರಿಕದ ಡೆಟ್ರ್ಯಾಟ್‌ ನಗರದಲ್ಲಿ ಜುಲೈ 4ರಿಂದ 6ರವರೆಗೆ ವೀರಶೈವ ಸಮಾಜ ಆಯೋಜಿಸಿದ 47ನೇ (ವಿಎಸ್‌ಎನ್‌ಎ) ಶರಣ ಸಂಗಮ ಸಮಾವೇಶ, ಬಸವ ಜಯಂತಿ ಸಮಾರಂಭ ಹಾಗೂ ಬಸವ ಪಲ್ಲಕ್ಕಿ ಉತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು.

‘ಭಾರತದಾಚೆಗೆ ಬಸವಣ್ಣನವರ ಜೀವನ ಸಂದೇಶವನ್ನು ಸಾರುವ ಮಹತ್ತರ ಕೆಲಸವನ್ನು ಉತ್ತರ ಅಮೆರಿಕದ ವೀರಶೈವ ಸಮಾಜವು ಮಾಡುತ್ತಿರುವುದು ಶ್ಲಾಘನೀಯ. ಬಸವಾದಿ ಶರಣರು ಸ್ಥಾಪಿಸಿದ ವೀರಶೈವ ಲಿಂಗಾಯತ ಧರ್ಮದ ನಿಜವಾದ ವಾರಸುದಾರರು ನೀವು. ಶರಣರ ವಿಚಾರಗಳು ಎಷ್ಟು ಪ್ರಖರವಾಗಿವೆ ಎಂದರೆ ಅವು ಸಾವಿರಾರು ವರ್ಷಗಳಾದರೂ ಈ ಭೂಮಿಯಿಂದ ಅಳಿಯಲು ಸಾಧ್ಯವಿಲ್ಲ’ ಎಂದರು.

ADVERTISEMENT

‘ವಿಶ್ವಕ್ಕೆ ಬಹುದೊಡ್ಡ ಕೊಡುಗೆ ಬಸವಾದಿ ಶಿವ ಶರಣರ ವಚನಗಳು. ಶರಣರು ಕೇವಲ ಧರ್ಮ ಸ್ಥಾಪಕರಲ್ಲ. ಮಾನವ ಧರ್ಮ ಸ್ಥಾಪಕರು.
ಸಮಾಜದಲ್ಲಿದ್ದ ಅಜ್ಞಾನವನ್ನು ಕಿತ್ತು ಹಾಕಿದವರು. ಸಮಾಜದಲ್ಲಿ ಸಮ ಸಮಾಜವನ್ನು ಉಂಟು ಮಾಡಿದ ಹರಿಕಾರರು. ಅಂತಹ ಶರಣರು ಕಾಯಕ ದಾಸೋಹ, ಸಮಾನತೆಯ ವಿಚಾರಗಳನ್ನು ಇಂದು ಜಗತ್ತು ಸ್ವೀಕರಿಸಿಕೊಳ್ಳುತ್ತಿರುವುದು ಸಂತೋಷ’ ಎಂದು  ಹೇಳಿದರು.

‘ಕಳೆದ 47 ವರ್ಷಗಳಿಂದ ಈ ಸಂಘಟನೆಯು ಬಸವಧರ್ಮವನ್ನು ಅಮೆರಿಕೆಯಲ್ಲಿ ಉಳಿಸುವ ಕಾರ್ಯವನ್ನು ಮಾಡುತ್ತಿರುವುದು ಅಭಿಮಾನ ಎನಿಸುತ್ತಿದೆ. ಈ ಸಮಾವೇಶದ ಮೂಲಕ ದೊಡ್ಡ ಚರಿತ್ರೆಯನ್ನು ನಿರ್ಮಿಸಿದ್ದೀರಿ. ನಿಮ್ಮ ಸೇವೆಗೆ ಪದಗಳು ಇಲ್ಲ. ಸದಾ ಮುಂದುವರೆಯಲಿ’ ಎಂದರು.

ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ವಚನಾನಂದ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಸಂಸದ ಜಗದೀಶ ಶೆಟ್ಟರ್, ಮಾಜಿ ಸಚಿವರಾದ ಮುರುಗೇಶ ನಿರಾಣಿ, ಶಂಕರ ಪಾಟೀಲ ಮುನೇನಕೊಪ್ಪ, ವಿಧಾನ ಪರಿಷತ್ ಸದಸ್ಯರಾದ ಪ್ರದೀಪ್, ಕೆ.ಎಸ್.ನವೀನ್, ಉದ್ಯಮಿ ರವಿಶಂಕರ ಭೂಪಳಾಪುರ, ಉತ್ತರ ಅಮೆರಿಕೆ ವೀರಶೈವ ಸಮಾಜದ ಅಧ್ಯಕ್ಷ ದಯಾನಂದ, ಸಮಾವೇಶದ ಕಾರ್ಯಾಧ್ಯಕ್ಷ ಮಹೇಶ ಪಾಟೀಲ, ಶೈಲಾ ಬೆಟ್ಟಲೂರ, ಪ್ರಭು ದೇಸಾಯಿ, ಗುರುರಾಜ ಕೋಟಿ ಹಾಗೂ ಅಪಾರ ಸಂಖ್ಯೆಯ ವೀರಶೈವ ಲಿಂಗಾಯತ ಸದ್ಭಕ್ತರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.