
ಬೈಲಹೊಂಗಲ: ರೈತ ಸಮುದಾಯದ ಆಧ್ಯಾತ್ಮಿಕ ಕೇಂದ್ರವಾಗಿರುವ ಇತಿಹಾಸ ಪ್ರಸಿದ್ಧ ಶ್ರೀಮರಡಿ ಬಸವೇಶ್ವರ ದೇವಸ್ಥಾನ ಜಾತ್ರೆ ನ.10ರಿಂದ 15 ರವರೆಗೆ ಅದ್ದೂರಿಯಾಗಿ ನಡೆಯಲಿದೆ.
ನ.10 ರಂದು ಸಂಜೆ 4.30ಕ್ಕೆ ನವಿಲಿನ ಕಳಸ ಹೊತ್ತ ಮಹಾತೇರು ಎಳೆಯಲು ಭಕ್ತರು ಉತ್ಸುಕರಾಗಿದ್ದಾರೆ. ಜಾತ್ರೆ ನಿಮಿತ್ತ ರಾಜ್ಯ, ಹೊರರಾಜ್ಯಗಳ ಲಕ್ಷಾಂತರ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದುಕೊಳ್ಳುತ್ತಾರೆ. ತಮ್ಮ ಹರಕೆ ತೀರಿಸಿ, ಭಕ್ತಿ ಸಮರ್ಪಿಸುತ್ತಾರೆ.
80 ಅಡಿ ಎತ್ತರದ ರಥ: ಪ್ರತಿವರ್ಷ ಮರಡಿ ಬಸವೇಶ್ವರ ಜಾತ್ರೆಗೆ ಒಂದು ತಿಂಗಳ ಮುನ್ನವೇ ಸಿದ್ಧತೆ ಆರಂಭಿಸಲಾಗುತ್ತದೆ. ವಿಜಯದಶಮಿ ದಿನದಂದು ದೇವಸ್ಥಾನದಲ್ಲಿರುವ ಬೃಹತ್ ಆಕಾರದ ಕಲ್ಲಿನ ಚಕ್ರಗಳಿಗೆ ಪೂಜೆ ಸಲ್ಲಿಸಿ ಮೆರವಣಿಗೆ ಮೂಲಕ ಜವಳಿ ಕೂಟಕ್ಕೆ ತರಲಾಗುತ್ತದೆ. ದೀಪಾವಳಿ ಬಲಿಪಾಡ್ಯಮಿ ದಿನದಂದು ಕಟ್ಟಿಗೆಗಳನ್ನು ತಂದು ರಥ ಸಿದ್ಧಪಡಿಸಲಾಗುತ್ತದೆ. 80 ಅಡಿ ಎತ್ತರದ ಭವ್ಯ ರಥದಲ್ಲಿ ಬಸವೇಶ್ವರ, ಮಹಾನ್ ತಪಸ್ವಿಗಳ ಭಾವಚಿತ್ರ ಅಳವಡಿಸಲಾಗುತ್ತದೆ. ರಾಷ್ಟ್ರಧ್ವಜ ಮಾದರಿಯಲ್ಲಿ ರಥ ಅಲಂಕರಿಸಲಾಗುತ್ತದೆ. ರಥದ ಮೇಲಿನ ಬೆಳ್ಳಿ ನವಿಲು, ಬಂಗಾರ ಲೇಪಿನ ಕಳಶ ನೋಡುಗರನ್ನು ಆಕರ್ಷಿಸುತ್ತದೆ. ಹಲವಾರು ತಿರುವುಗಳ ಮದ್ಯಯೂ ಎತ್ತರದ ಪ್ರದೇಶಕ್ಕೆ ರಥೋತ್ಸವ ಸಾಗುವ ದೃಶ್ಯ ಮನಮೋಹಕವಾಗಿರುತ್ತದೆ. ರಥದಲ್ಲಿ ಶರಣರ ವಚನ ಗ್ರಂಥಗಳು, ಬಸವೇಶ್ವರ ಮೂರ್ತಿ ಪ್ರತಿಷ್ಠಾಪಿಸಲಾಗುತ್ತದೆ.
ಜಟ್ಟಿಗಳನ್ನು ಬೆಳಕಿಗೆ ತಂದ ಜಾತ್ರೆ: ಈ ಭಾಗದ ಹಲವಾರು ಪೈಲ್ವಾನರನ್ನು ಬೆಳಕಿಗೆ ತಂದ ಕೀರ್ತಿ ಮರಡಿ ಬಸವೇಶ್ವರ ಜಾತ್ರೆಗಿದೆ. ಜಾತ್ರಾ ಕಮಿಟಿ, ಶ್ರೀವರ್ತಸಿದ್ಧ ಬಸವೇಶ್ವರ ಸೊಸೈಟಿ, ಕ್ರೀಡಾ ಮತ್ತು ಕಲಾವೇದಿಕೆ ವತಿಯಿಂದ ಕುಸ್ತಿ ಆಯೋಜಿಸಲಾಗುತ್ತದೆ. ಕುಸ್ತಿ ಪಂದ್ಯಾವಳಿಯಲ್ಲಿ ಹಲವಾರು ಜಟ್ಟಿಗಳು ರಣಕೇಕೇ ಹಾಕಿ ಮಿಂಚುತ್ತಾರೆ.
ಬೃಹತ್ ಕೃಷಿಮೇಳ, ಜಾನುವಾರ ಜಾತ್ರೆ, ಚಕ್ಕಡಿ ಶರ್ಯತ್ತು: ಈ ಬಾರಿಯ ಜಾತ್ರೆಯಲ್ಲಿ ಈಶಪ್ರಭು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಕೃಷಿ, ತೋಟಗಾರಿಕೆ, ಪಶು ಸಂಗೋಪನೆ ಇಲಾಖೆ, ಕೃಷಿಕ ಸಮಾಜ, ಕೃಷಿಕ ಪರಿಕರ ಮಾರಾಟಗಾರರ ಸಂಘದ ವತಿಯಿಂದ ಎಪಿಎಂಸಿ ಆವರಣದಲ್ಲಿ ನ.12ರಿಂದ 15 ರವರೆಗೆ ಬೃಹತ್ ಕೃಷಿಮೇಳ, ಜಾನುವಾರ ಜಾತ್ರೆ ನಡೆಯಲಿದೆ. ಮರಡಿ ಬಸವೇಶ್ವರ ತರುಣ ಸಂಘದಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ನಮ್ಮ ಹಿರಿಯರ ಮಾರ್ಗದರ್ಶನದಲ್ಲಿ ಪ್ರತಿವರ್ಷ ಅಂತರರಾಷ್ಟ್ರೀಯ ಮಟ್ಟದ ಪ್ರಸಿದ್ಧ ಕುಸ್ತಿ ಪಟುಗಳಿಂದ ಹೊನಲು ಬೆಳಕಿನ ಕುಸ್ತಿ ಪಂದ್ಯಾವಳಿ ನಡೆಸಲಾಗುತ್ತದೆ. ಈ ವರ್ಷವೂ ಕುಸ್ತಿ ಆಯೋಜಿಸಲಾಗಿದೆರಾಮಲಿಂಗ ಕುಡಸೋಮಣ್ಣವರ ಕುಸ್ತಿ ಸಂಯೋಜಕ
ಜಾತ್ರೆಯಲ್ಲಿ ಕೃಷಿಮೇಳ ಜಾನುವಾರ ಜಾತ್ರೆ ಆಯೋಜಿಸಲಾಗಿದೆ. ನಾಡಿನ ರೈತರು ಸಾರ್ವಜನಿಕರು ಸಂಪೂರ್ಣ ಬೆಂಬಲ ನೀಡಿದ್ದು ಮಾದರಿ ಕೃಷಿಮೇಳ ಜಾನುವಾರ ಜಾತ್ರೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆಮಹೇಶ ಬೆಲ್ಲದ ಕೃಷಿಮೇಳ ಆಯೋಜಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.