ಚಿಕ್ಕೋಡಿ: ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ನಿರಂತರ ಮಳೆಯ ಕಾರಣ ತಾಲ್ಲೂಕಿನಲ್ಲಿ ಕೃಷ್ಣಾ ನದಿ ನೀರಿನ ಹರಿವು ಗಣನೀಯವಾಗಿ ಏರಿಕೆಯಾಗುತ್ತಿದೆ. ಪರಿಣಾಮ, ನದಿ ದಡದ ಕೆಲವುದೇವಸ್ಥಾನ, ದರ್ಗಾಗಳು ನೀರಿನಿಂದ ಆವೃತವಾಗಿವೆ.
ತಾಲ್ಲೂಕಿನ ಕಲ್ಲೋಳ ಸೇತುವೆ ಬಳಿಯ ದತ್ತ ಮಂದಿರ ನೀರಿನಲ್ಲಿ ಮುಳುಗಿದ್ದು, ಕಳಸದವರೆಗೂ ನೀರು ಏರಿದೆ.
ಇನ್ನೊಂದೆಡೆ, ಚಿಕ್ಕೋಡಿ ತಾಲ್ಲೂಕಿನ ಯಕ್ಸಂಬಾ ಸಮೀಪದ ಮುಲ್ಲಾನ್ಕಿಯ ಮನ್ಸೂರವಲಿ ದರ್ಗಾ ದೂಧಗಂಗಾ ನದಿಯಲ್ಲಿ ಭಾಗಶಃ ಮುಳುಗಿದೆ.
ಮಂಗಳವಾರ ಮಧ್ಯಾಹ್ನ 3ರ ಸುಮಾರಿಗೆ ಕೃಷ್ಣಾ ನದಿಯಲ್ಲಿ 89 ಸಾವಿರ ಕ್ಯುಸೆಕ್ ನೀರು ಹರಿದುಬರುತ್ತಿದೆ.
ಇದರಿಂದ ನದಿ ದಡದ ರೈತರು ತಮ್ಮ ಜಾನುವಾರು, ಪಂಪಸೆಟ್ ಹಾಗೂ ಕೃಷಿ ಸಲಕರಣೆಗಳನ್ನು ಬೇರೆಡೆ ಸ್ಥಳಾಂತರಿಸುವುದು ಸಾಮಾನ್ಯವಾಗಿದೆ.
ಭತ್ತದ ಗದ್ದೆಗೆ ನುಗ್ಗಿದ ನೀರು:
ಬೆಳಗಾವಿ ನಗರ ಹೊರವಲಯದ ಬಳ್ಳಾರಿ ನಾಲೆ ಉಕ್ಕಿ ಹರಿದು ಭತ್ತದ ಗದ್ದೆಗಳಿಗೆ ನುಗ್ಗಿದೆ.
ಬೆಳಗಾವಿ ತಾಲ್ಲೂಕಿನ ಯಳ್ಳೂರ, ಅಣಗೋಳ, ಧಾಮನೆ, ವಡಗಾವಿ ಸೀಮೆಯಲ್ಲಿ ಬೆಳೆದ ಭತ್ತದ ಗದ್ದೆಗಳಲ್ಲಿ ಮೊಣಕಾಲೆತ್ತರಕ್ಕೆ ನೀರು ನಿಂತಿದೆ.
ನಿರಂತರ ಮಳೆ ಹಾಗೂ ನೀರು ನಿಂತಿದ್ದರಿಂದ ಭಾಸುಮತಿ ಭತ್ತದ ಬೆಳೆ ಕೊಳೆಯುವ ಆತಂಕ ಉಂಟಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.