ADVERTISEMENT

ಸುಂದರ 'ಬೆಳಗಾವಿ' ನಿರ್ಮಾಣಕ್ಕೆ ಕೈಜೋಡಿಸಿ: ಮೇಯರ್‌ ಮಂಗೇಶ ಪವಾರ ಕರೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2025, 6:19 IST
Last Updated 2 ಅಕ್ಟೋಬರ್ 2025, 6:19 IST
   

ಬೆಳಗಾವಿ: ‘ಮಹಾತ್ಮ ಗಾಂಧಿ ಸ್ವಚ್ಛತೆಗೆ ಒತ್ತು ನೀಡಿದ್ದರು. ಅಂತೆಯೇ ಪ್ರತಿಯೊಬ್ಬರೂ ಸ್ವಚ್ಛತೆಗೆ ಆದ್ಯತೆ ನೀಡಿ, ಸುಂದರ ಬೆಳಗಾವಿ ನಿರ್ಮಾಣಕ್ಕೆ ಕೈಜೋಡಿಸಿ’ ಎಂದು ಮೇಯರ್‌ ಮಂಗೇಶ ಪವಾರ ಕೋರಿದರು.

ಇಲ್ಲಿನ ಟಿಳಕವಾಡಿಯ ವೀರಸೌಧದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಮಹಾನಗರ ಪಾಲಿಕೆ ಗುರುವಾರ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧಿ ಮತ್ತು ಲಾಲ್‌ ಬಹದ್ದೂರ್‌ ಶಾಸ್ತ್ರಿ ಜಯಂತಿ ಕಾರ್ಯಕ್ರಮದಲ್ಲಿ ಅವರು  ಮಾತನಾಡಿದರು.

‘ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ ಏಕೈಕ ಕಾಂಗ್ರೆಸ್‌ ಅಧಿವೇಶನ 1924ರಲ್ಲಿ ಬೆಳಗಾವಿಯಲ್ಲಿ  ನಡೆದಿತ್ತು. ಇದು ಬೆಳಗಾವಿಗರಿಗೆ ಅಭಿಮಾನದ ಸಂಗತಿ. ಎಲ್ಲರೂ ಪರಿಸರಸ್ನೇಹಿ ಜೀವನಶೈಲಿ ರೂಢಿಸಿಕೊಳ್ಳಬೇಕು. ಮಾರುಕಟ್ಟೆಯಿಂದ ನಿತ್ಯ ಕೈಚೀಲ ತರದೆ, ನಮ್ಮ ವಾಹನದ‌ಲ್ಲೇ ಒಂದು ಕೈಚೀಲ ಸದಾ ಇರಿಸಬೇಕು’ ಎಂದರು. 

ADVERTISEMENT

ಜಿಲ್ಲಾಧಿಕಾರಿ ಮೊಹಮ್ಮದ್‌ ರೋಷನ್‌, ‘ಎಲ್ಲರೂ ಸೇವಾ ಮನೋಭಾವ ಬೆಳೆಸಿಕೊಂಡು, ತಮಗೆ ವಹಿಸಿದ ಕೆಲಸ ಅಚ್ಚುಕಟ್ಟಾಗಿ ನಿರ್ವಹಿಸಬೇಕು. ನಮ್ಮ ಧರ್ಮ ಪ್ರೀತಿಸುವ ಜತೆಗೆ, ಬೇರೆ ಧರ್ಮ ಗೌರವಿಸಬೇಕು. ಪ್ರತಿಭಾವಂತ ವಿದ್ಯಾರ್ಥಿಗಳು ಹೆಚ್ಚಿನ ವೇತನಕ್ಕಾಗಿ ಉದ್ಯೋಗ ಅರಸಿ ವಿದೇಶಕ್ಕೆ ಹೋಗದೆ, ದೇಶಕ್ಕಾಗಿ ದುಡಿಯಬೇಕು’ ಎಂದು ಕರೆಕೊಟ್ಟರು.

ಉಪನ್ಯಾಸ ನೀಡಿದ ಸಾಹಿತಿ ಪ್ರಕಾಶ ಗಿರಿಮಲ್ಲನವರ, ‘ಬೆಳಗಾವಿ ಜಿಲ್ಲೆಗೆ ಆರು ಬಾರಿ ಮಹಾತ್ಮ ಗಾಂಧಿ ಭೇಟಿ ನೀಡಿದ್ದರು. ಅವರ ಹೆಜ್ಜೆ ಗುರುತುಗಳು ಗಡಿಜಿಲ್ಲೆಯಲ್ಲಿ ಇಂದಿಗೂ ಅಚ್ಚಳಿಯದೆ ಉಳಿದಿವೆ’ ಎಂದು ಸ್ಮರಿಸಿದರು.

ಶಾಸಕ ಆಸಿಫ್‌ ಸೇಠ್‌ ಅವರು, ಗಾಂಧಿ ಕಂಚಿನ ಪ್ರತಿಮೆ ಮತ್ತು ಲಾಲ್‌ಬಹದ್ದೂರ್‌ ಶಾಸ್ತ್ರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೇಶಕ ಗುರುನಾಥ ಕಡಬೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್‌ ಶಿಂಧೆ, ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌.ಬಿ.ಬಸರಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಮಹಾನಗರ ಪಾಲಿಕೆ ಆಯುಕ್ತೆ ಬಿ.ಶುಭ, ಸ್ವಾತಂತ್ರ್ಯ ಹೋರಾಟಗಾರ ರಾಜೇಂದ್ರ ಕಲಘಟಗಿ ಇದ್ದರು. ವಿನಾಯಕ ಮೋರೆ ತಂಡದವರು ಸಂಗೀತ ಕಾರ್ಯಕ್ರಮ ಪ್ರಸ್ತುತಪಡಿಸಿದರು.

ವಿಜೇತರಿಗೆ ಬಹುಮಾನ ವಿತರಣೆ

ಗಾಂಧಿ ಜಯಂತಿ ಅಂಗವಾಗಿ ಆಯೋಜಿಸಿದ್ದ ಜಿಲ್ಲಾಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಪ್ರೌಢಶಾಲೆ ವಿಭಾಗದಲ್ಲಿ ಬೆಳಗಾವಿ ತಾಲ್ಲೂಕಿನ ಮಚ್ಛೆಯ ಸರ್ಕಾರಿ ಪ್ರೌಢಶಾಲೆಯ ದಿವ್ಯಾ ಗಾಣಿಗೇರ ಪ್ರಥಮ, ಖಾನಾಪುರ ತಾಲ್ಲೂಕಿನ ನಂದಗಡದ ಎಸ್‌ಆರ್‌ಎಂಆರ್‌ಎಸ್‌ನ ನೀತಾ ಯಾದವಾಡ ದ್ವಿತೀಯ, ಚನ್ನಮ್ಮನ ಕಿತ್ತೂರಿನ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಪೂಜಾ ಗಜಪತಿ ತೃತೀಯ ಸ್ಥಾನ ಗಳಿಸಿದರು.

ಪಿಯು ವಿಭಾಗದಲ್ಲಿ ಬೈಲಹೊಂಗಲದ ಎಸ್‌ಜಿಎಸ್‌ವಿ ಪಿಯು ಕಾಲೇಜಿನ ದೀಪಿಕಾ ಮಿಶ್ರಿಕೋಟಿ ಪ್ರಥಮ, ಬೆಳಗಾವಿಯ ಸರ್ಕಾರಿ ಸರದಾರ್ಸ್‌ ಪಿಯು ಕಾಲೇಜಿನ ಅಮೃತಾ ಪಾಟೀಲ ದ್ವಿತೀಯ, ಸವದತ್ತಿಯ ಜಿ.ಜಿ. ಚೋಪ್ರಾ ಸರ್ಕಾರಿ ಪಿಯು ಕಾಲೇಜಿನ ಸಂಗಮೇಶ ತಳವಾರ ತೃತೀಯ ಸ್ಥಾನ ಪಡೆದರು.

ಸ್ನಾತಕ ಮತ್ತು ಸ್ನಾತಕೋತ್ತರ ವಿಭಾಗದಲ್ಲಿ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ನೇತ್ರಾವತಿ ಮಾದರ ಪ್ರಥಮ, ಸಾಕ್ಷತಾ ಬಡಲಿಂಗೆ ದ್ವಿತೀಯ, ಅಲ್ಫಿಯಾ ನದಾಫ್ ಹಾಗೂ ಲಕ್ಷ್ಮಿಬಾಯಿ ಮಾನಪ್ಪಗೋಳ ತೃತೀಯ ಸ್ಥಾನ ಗಳಿಸಿದರು.

ವಿಜೇತರಿಗೆ ಗಣ್ಯರು ನಗದು ಬಹುಮಾನ ಹಾಗೂ ಪ್ರಶಸ್ತಿಪತ್ರ ನೀಡಿ ಗೌರವಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.