
ಬೆಳಗಾವಿಯ ಕೃಷಿ ಇಲಾಖೆ ಜಂಟಿ ನಿರ್ದೇಶಕರ ಕಚೇರಿ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು, ಸಿರಿಧಾನ್ಯ ಬಳಸಿ ತಯಾರಿಸಿದ ಖಾದ್ಯಗಳನ್ನು ಸವಿದರು
ಪ್ರಜಾವಾಣಿ ಚಿತ್ರ
ಬೆಳಗಾವಿ: ರಾಗಿ ಉಂಡೆ, ಸಜ್ಜೆ ಕಿಚಡಿ, ಸಿರಿಧಾನ್ಯ ಪಾಯಸ, ಸಾಮೆ ಅನ್ನ, ರಾಗಿ ಕಡಬು, ನವನಕ್ಕಿ ಖಾರದ ವಡೆ, ಹುರಕ್ಕಿ ಹೋಳಿಗೆ...
ಹೀಗೆ... ಸಾಲು ಸಾಲಾಗಿ ವಿವಿಧ ಖಾದ್ಯಗಳನ್ನು ಜನರು ಕಂಡಿದ್ದು ಮತ್ತು ಅವುಗಳ ರುಚಿ ಸವಿದಿದ್ದು ಇಲ್ಲಿನ ಕೃಷಿ ಇಲಾಖೆ ಜಂಟಿನಿರ್ದೇಶಕರ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಸಿರಿಧಾನ್ಯ ಹಾಗೂ ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆಯಲ್ಲಿ.
ಸಿರಿಧಾನ್ಯ ಮತ್ತು ಸಾವಯವ ಅಂತರರಾಷ್ಟ್ರೀಯ ವಾಣಿಜ್ಯ ಮೇಳದ ಪ್ರಯುಕ್ತ ಆಯೋಜಿಸಿದ್ದ ಈ ಸ್ಪರ್ಧೆಯು ಸಿರಿಧಾನ್ಯಗಳ ಮಹತ್ವ ಸಾರಿತು. ‘ಮಕ್ಕಳು, ಯುವಕರು ಜಂಕ್ಫುಡ್ ಬದಲಿಗೆ, ಸಿರಿಧಾನ್ಯ ಸೇವಿಸಿದರೆ ಆರೋಗ್ಯ ಕಾಯ್ದುಕೊಳ್ಳಬಹುದು’ ಎಂಬ ಸಂದೇಶ ಸಾರಿತು.
ಮರೆತು ಹೋದ ಖಾದ್ಯ, ಸಿರಿಧಾನ್ಯ ಸಿಹಿಖಾದ್ಯ ಹಾಗೂ ಸಿರಿಧಾನ್ಯ ಖಾರದ ಖಾದ್ಯ ಎಂದು ಮೂರು ವಿಭಾಗಗಳಲ್ಲಿ ಸ್ಪರ್ಧೆ ಸಂಘಟಿಸಲಾಗಿತ್ತು. ಜಿಲ್ಲೆ ವಿವಿಧ ತಾಲ್ಲೂಕುಗಳಿಂದ ಬಂದಿದ್ದ ಮಹಿಳೆಯರು ಸಿರಿಧಾನ್ಯ ಬಳಸಿ, ವಿವಿಧ ಖಾದ್ಯ ತಯಾರಿಸಿದರು.
ಜೋಳದ ಕಿಚಡಿ, ತಾಲಿಪಟ್ಟು, ಸಿರಿಧಾನ್ಯ ಬಿಸಿಬೇಳೆ ಬಾತ್, ಅಂಬಲಿ, ರಾಗಿ ಬಿಸ್ಕತ್ತು, ರಾಗಿ ಮೋದಕ, ಸಾಂಬಾರ ಬುತ್ತಿ ಮತ್ತಿತರ ಖಾದ್ಯಗಳನ್ನು ಪ್ರದರ್ಶನಕ್ಕೆ ಇರಿಸಲಾಗಿತ್ತು. ಸಿರಿಧಾನ್ಯ ಬಳಸಿ ತಯಾರಿಸಿದ್ದ ಕೇಕ್ ಎಲ್ಲರ ಗಮನಸೆಳೆಯಿತು.
ಅದನ್ನು ಕತ್ತರಿಸುವ ಮೂಲಕ ಸ್ಪರ್ಧೆಗೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ‘ಸಿರಿಧಾನ್ಯಗಳು ಪೋಷಕಾಂಶಗಳ ಆಗರವಾಗಿವೆ. ಸಿರಿಧಾನ್ಯಗಳ ಮಹತ್ವವನ್ನು ಯುವಪೀಳಿಗೆಗೆ ಪರಿಚಯಿಸಬೇಕೆಂದರೆ ಇಂಥ ಕಾರ್ಯಕ್ರಮ ಅಗತ್ಯ’ ಎಂದರು.
ಕೃಷಿ ಇಲಾಖೆ ಜಂಟಿನಿರ್ದೇಶಕ ಎಚ್.ಡಿ.ಕೋಳೇಕರ, ‘ಸಿರಿಧಾನ್ಯ ಬೆಳೆಯುವುದು, ಸೇವಿಸುವುದನ್ನು ಪ್ರೋತ್ಸಾಹಿಸಲು ಕೃಷಿ ಇಲಾಖೆಯಿಂದ ವಾಕಥಾನ್, ಪಾಕ ಸ್ಪರ್ಧೆ ಮೊದಲಾದ ಕಾರ್ಯಕ್ರಮ ನಡೆಸುತ್ತಿದ್ದೇವೆ’ ಎಂದು ತಿಳಿಸಿದರು.
ತೀರ್ಪುಗಾರರಾಗಿ ಲೇಕ್ವ್ಯೂ ಆಸ್ಪತ್ರೆ ಆಹಾರ ತಜ್ಞೆ ಡಾ.ಅನಿತಾ ಭಾವಿ, ಮತ್ತಿಕೊಪ್ಪದ ಕೆಎಲ್ಇ ಸಂಸ್ಥೆಯ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಭಾವಿನಿ ಪಾಟೀಲ, ತುಕ್ಕಾನಟ್ಟಿಯ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ರೇಖಾ ಕಾರಬಾರಿ ಭಾಗವಹಿಸಿದ್ದರು. ಸಹದೇವ ಯರಗೊಪ್ಪ ನಿರೂಪಿಸಿದರು.
ಬೆಳಗಾವಿಯ ಕೃಷಿ ಇಲಾಖೆ ಜಂಟಿ ನಿರ್ದೇಶಕರ ಕಚೇರಿ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಸಿರಿಧಾನ್ಯಗಳನ್ನು ಬಳಸಿ ತಯಾರಿಸಿದ ಖಾದ್ಯಗಳನ್ನು ಮಹಿಳೆಯರು ಪ್ರದರ್ಶಿಸಿದರು
ಪಾಕ ಸ್ಪರ್ಧೆ; ವಿಜೇತರ ವಿವರ
ಸಿರಿಧಾನ್ಯ ಖಾರದ ಖಾದ್ಯ ವಿಭಾಗದಲ್ಲಿ ಬೆಳಗಾವಿಯ ಸುಮನ್ ಕೋಕಣ ರೇಣುಕಾ ಹಾವಳ ಸುಗಂಧಾ ಉರಣಕರ ಕ್ರಮವಾಗಿ ಮೊದಲ ಮೂರು ಬಹುಮಾನ ಪಡೆದರು. ಸಿಹಿಖಾದ್ಯ ವಿಭಾಗದಲ್ಲಿ ಹುಕ್ಕೇರಿಯ ಕಾವೇರಿ ಹುಕ್ಕೇರಿ ಪ್ರಥಮ ರೂಪಾ ಪಾಟೀಲ ದ್ವಿತೀಯ ಚಿಕ್ಕೋಡಿಯ ಜಯಶ್ರೀ ಕಾಂಬಳೆ ತೃತೀಯ ಸ್ಥಾನ ಪಡೆದರು. ಮರೆತು ಹೋದ ಖಾದ್ಯ ವಿಭಾಗದಲ್ಲಿ ಬೆಳಗಾವಿಯ ಸುರೇಖಾ ದೇಯನ್ನವರ ಚಿಕ್ಕೋಡಿಯ ಗಾಯತ್ರಿ ಪಾಟೀಲ ಬೆಳಗಾವಿಯ ಶೋಭಾ ಕೆ. ಕ್ರಮವಾಗಿ ಮೊದಲ ಮೂರು ಬಹುಮಾನ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.