
ಆದೇಶ
ಬೆಳಗಾವಿ: ಚನ್ನಮ್ಮನ ಕಿತ್ತೂರು ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮವೊಂದರಲ್ಲಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅಪರಾಧಿಗೆ ಇಲ್ಲಿನ ಜಿಲ್ಲಾ ವಿಶೇಷ ಶೀಘ್ರಗತಿ ಪೋಕ್ಸೊ ನ್ಯಾಯಾಲಯವು 5 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ಮಂಗಳವಾರ ತೀರ್ಪು ನೀಡಿದೆ.
ಅಕ್ಷಯ ಯಲ್ಲಪ್ಪ ರಾವಳೆ (26) ಶಿಕ್ಷೆಗೆ ಗುರಿಯಾದವ. 2022ರ ಜನವರಿ 28ರಂದು ಬಾಲಕಿಯನ್ನು ಅಪಹರಿಸಿಕೊಂಡು ಹೋಗಿ, ಸರ್ಕಾರಿ ಆಸ್ಪತ್ರೆಯ ಕಟ್ಟಡದ ಕೋಣೆಯೊಂದರಲ್ಲಿ ಬಾಲಕಿಯ ಟಿಷರ್ಟ್ ಹರಿದು ವಿಡಿಯೊ ಮಾಡಿಕೊಂಡಿದ್ದ. ಲೈಂಗಿಕ ದೌರ್ಜನ್ಯ ನಡೆಸಿ ವಿಷಯವನ್ನು ಯಾರಿಗಾದರೂ ತಿಳಿಸಿದರ ಕೊಲೆ ಮಾಡುತ್ತೇನೆ ಎಂದು ಹೆದರಿಸಿದ್ದ. ಈ ಬಗ್ಗೆ ಬಾಲಕಿಯ ಪಾಲಕರು ದೂರು ದಾಖಲಿಸಿದ್ದಾರು.
ತನಿಖಾಧಿಕಾರಿ ಆಗಿದ್ದ ಮಹಾಂತೇಶ ಹೊಸಪೇಟ, ಡಿ.ಎಸ್. ಉಳ್ಳಾಗಡ್ಡಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಧೀಶರಾದ ಸಿ.ಎಂ.ಪುಷ್ಪಲತಾ ಅವರು 6 ಸಾಕ್ಷಿಗಳ ವಿಚಾರಣೆ ನಡೆಸಿ, 54 ದಾಖಲೆಗಳನ್ನು ಪರಿಶೀಲಿಸಿ ಶಿಕ್ಷೆ ವಿಧಿಸಿದ್ದಾರೆ.
ನೊಂದ ಬಾಲಕಿಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ₹1 ಲಕ್ಷ ಪರಿಹಾರ ಕೂಡ ಘೋಷಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಎಲ್.ವಿ.ಪಾಟೀಲ ವಾದ ಮಂಡಿಸಿದ್ದರು.
ಬೈಕುಗಳ ಡಿಕ್ಕಿ: ವೃದ್ಧ ಸಾವು: ಅಥಣಿ– ಮದಬಾವಿ ರಸ್ತೆ ಮೇಲೆ ಈಚೆಗೆ ಸಂಭವಿಸಿದ ಬೈಕುಗಳ ಡಿಕ್ಕಿಯಲ್ಲಿ ಹನಮಾಪೂರ ಕಲ್ಲಪ್ಪ ಬೀರು ವಾಘಮೋಡೆ (70) ಎಂಬ ವೃದ್ಧ ಮೃತಪಟ್ಟಿದ್ದು. ಅಥಣಿಯ ಲಕ್ಷ್ಮಣ ಮಾರುತಿ ಬಡಕಂಬಿ (65) ಎನ್ನುವವರು ಗಾಯಗೊಂಡಿದ್ದಾರೆ.
ಲಕ್ಷ್ಮಣ ಅವರು ಮುಂದೆ ಬೈಕ್ ಚಲಾಯಿಸುತ್ತಿದ್ದರು. ಕಲ್ಲಪ್ಪ ಹಿಂದಿನಿಂದ ಇನ್ನೊಂದು ಬೈಕಿನಲ್ಲಿ ಹೊರಟಿದ್ದರು. ಲಕ್ಷ್ಮಣ ಏಕಾಏಕಿ ಬೈಕನ್ನು ಬಲಕ್ಕೆ ತಿರುಗಿಸಿದ್ದರಿಂದ ಎರಡೂ ಬೈಕುಗಳ ಮಧ್ಯೆ ಡಿಕ್ಕಿ ಸಂಭವಿಸಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಕಲ್ಲಪ್ಪ ಸಾವನ್ನಪ್ಪಿದರು ಎಂದು ತಿಳಿಸಲಾಗಿದೆ.
ಕಾರ್– ಬೈಕ್ ಡಿಕ್ಕಿ, ಮಹಿಳೆ ಸಾವು: ಅಥಣಿ ಸಮೀಪದಲ್ಲಿ ಎದುರಿಗೆ ಬರುತ್ತಿದ್ದ ಕಾರಿಗೆ ಬೈಕ್ ಡಿಕ್ಕಿ ಹೊಡೆದು ಸವಾರ ಗಾಯಗೊಂಡಿದ್ದು, ಹಿಂದೆ ಕುಳಿತ ಮಹಿಳೆ ಸಾವನ್ನಪ್ಪಿದ್ದಾರೆ.
ಅಥಣಿ ಪಟ್ಟಣದ ಹೊರ ವಲಯದ ಜತ್ತ– ಜಾಂಬೋಟಿ ರಸ್ತೆಯಲ್ಲಿ ಸೋಮವಾರ ಘಟಣೆ ಜರುಗಿದೆ. ದರೂರಿನ ಸುಂದ್ರವ್ವ ಬಸಪ್ಪ ಕಲ್ಲೋಳಿ (72) ಮೃತರು. ಬಸಪ್ಪ ಕಲಮನಿ ಗಾಯಗೊಂಡಿದ್ದಾರೆ. ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.