ಬೆಳಗಾವಿ: ಇಲ್ಲಿನ ಶಹಾಪುರದ ದುರ್ಗಾದೇವಿ ಮಂದಿರ ಸಮೀಪದ ವಿನೋದ ಚೌಗುಲೆ ಎನ್ನುವವರ ಮನೆ ಮೇಲೆ ಬುಧವಾರ ದಾಳಿ ನಡೆಸಿದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳು, ಕಾಳಸಂತೆಯಲ್ಲಿ ಮಾರಾಟಕ್ಕೆಂದು ಅಕ್ರಮವಾಗಿ ದಾಸ್ತಾನು ಇಡಲಾಗಿದ್ದ ಭಾರಿ ಪ್ರಮಾಣದ ಪಡಿತರವನ್ನು ಜಪ್ತಿ ಮಾಡಿದ್ದಾರೆ.
24 ಕ್ವಿಂಟಲ್ ‘ಅನ್ನಭಾಗ್ಯ’ ಯೋಜನೆಯ ಅಕ್ಕಿ, 20 ಲೀಟರ್ ಸೀಮೆಎಣ್ಣೆ ಹಾಗೂ 70 ಕೆ.ಜಿ. ತೊಗರಿಬೇಳೆಯನ್ನು ವಶಕ್ಕೆ ಪಡೆಯಲಾಗಿದೆ.
‘ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಬಿಪಿಎಲ್ ಪಡಿತರ ಚೀಟಿ ಹೊಂದಿರುವವರಿಗೆ ಸರ್ಕಾರವು ವಿತರಿಸುವ ಅಕ್ಕಿ, ಸೀಮೆಎಣ್ಣೆ ಹಾಗೂ ತೊಗರಿಬೇಳೆ ಇದಾಗಿದೆ’ ಎಂದು ಆಹಾರ ಇಲಾಖೆಯ ಉಪನಿರ್ದೇಶಕಿ ಎಸ್.ಎಸ್. ಬಳ್ಳಾರಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಈ ಪಡಿತರವನ್ನು ಕಾರ್ಡ್ದಾರರು ನಮಗೆ ಮಾರಿದ್ದಾರೆ. ನಮ್ಮ ಕಿರಾಣಿ ಅಂಗಡಿ ಇದ್ದು, ಅಲ್ಲಿ ಮಾರುವುದಕ್ಕಾಗಿ ಸಂಗ್ರಹಿಸಿಟ್ಟಿದ್ದೇವೆ’ ಎಂದು ವಿನೋದ ಚೌಗುಲೆ ತಿಳಿಸಿದ್ದಾರೆ. ಎಲ್ಲವನ್ನೂ ಜಪ್ತಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿ, ನ್ಯಾಯಾಧೀಶರು ನೀಡುವ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಲಾಗುವುದು’ ಎಂದು ಮಾಹಿತಿ ನೀಡಿದರು.
ಶಹಾಪುರ ಠಾಣೆ ಇನ್ಸ್ಪೆಕ್ಟರ್ ಜಾವೇದ್ ಮುಶಾಪುರಿ ಮತ್ತು ಸಿಬ್ಬಂದಿ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.