
ಬೆಳಗಾವಿ: ಕಲಾವಿದರ ಮಾಸಾಶನ ಸೌಲಭ್ಯಕ್ಕಾಗಿ ವಯೋಮಿತಿಯನ್ನು 50 ವರ್ಷಕ್ಕೆ ಇಳಿಸಬೇಕು, ₹5 ಸಾವಿರಕ್ಕೆ ಮಾಸಾಶನ ಹೆಚ್ಚಿಸಲು ಆಗ್ರಹಿಸಿ ಕರ್ನಾಟಕ ಬೀದಿನಾಟಕ ಕಲಾ ತಂಡಗಳ ಒಕ್ಕೂಟ ಮತ್ತು ಸಾಂಸ್ಕೃತಿಕ ಸಂಘಗಳ ಒಕ್ಕೂಟದ ಸದಸ್ಯರು, ಭಜನೆ ಮಾಡುವ ಮೂಲಕ ಭಿನ್ನವಾಗಿ ಪ್ರತಿಭಟಿಸಿದರು.
ಇಲ್ಲಿನ ಸುವರ್ಣ ವಿಧಾನಸೌಧ ಬಳಿಯ ಉದ್ಯಾನದಲ್ಲಿ ಸೋಮವಾರ ಬೆಳಿಗ್ಗೆಯಿಂದ ‘ಸಾಂಸ್ಕೃತಿಕ ಪ್ರತಿಭಟನೆ’ ನಡೆಸಿದ ಕಲಾವಿದರು, ನಿರಂತರ ವಚನಗಾಯನ, ಪ್ರಾರ್ಥನೆ, ಕೀರ್ತನೆ, ಜನಪದ ಗೀತೆ, ಭಜನಾ ಪದಗಳನ್ನು ಹಾಡಿದರು. ಇದರಿಂದ ಪ್ರತಿಭಟನೆಗೆ ನಿಗದಿ ಮಾಡಿದ ಟೆಂಟುಗಳಲ್ಲಿನ ಜನರ ಗಮನ ಸೆಳೆದರು.
ಜಾನಪದ ಅಕಾಡೆಮಿ, ಸಾಹಿತ್ಯ ಅಕಾಡೆಮಿ ಸೇರಿ ಕೆಲ ಅಕಾಡೆಮಿಗಳ ಕಚೇರಿಗಳನ್ನು ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರಿಸಬೇಕು. ಬೀದಿನಾಟಕಕ್ಕೆ ಪ್ರತ್ಯೇಕ ಅಕಾಡೆಮಿ ಸ್ಥಾಪಿಸಲು ಆಗ್ರಹಿಸಿದರು.
ಒಕ್ಕೂಟದ ಮುಖಂಡರಾದ ಭರತ ಕಲಾಚಂದ್ರ, ಸುಜಾತಾ ಮಗದುಮ್ಮ ನೇತೃತ್ವ ವಹಿಸಿದ್ದರು.
ಊಟ ಮಾಡಿ ಪ್ರತಿಭಟನೆ:
ಪಾರಂಪರಿಕ ವೈದ್ಯ ಅಭಿವೃದ್ಧಿ ನಿಗಮ ಸ್ಥಾಪನೆಗೆ ಒತ್ತಾಯಿಸಿ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ ಮತ್ತು ಸಂಘಗಳ ಒಕ್ಕೂಟದವರು ಟೆಂಟ್ನಲ್ಲಿಯೇ ಸಾಮೂಹಿಕ ಊಟ ಮಾಡಿ ಪ್ರತಿಭಟಿಸಿದರು.
ಪಾರಂಪರಿಕ ವೈದ್ಯ ವೃತ್ತಿಗೆ ಮಾನ್ಯತೆ ನೀಡಬೇಕು. ಜಿಲ್ಲೆ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಧನ್ವಂತರಿ ವನ, ವೈದ್ಯ ಭವನ ನಿರ್ಮಿಸಬೇಕು. ಹಿರಿಯ ಪಾರಂಪರಿಕ ವೈದ್ಯರನ್ನು ಗುರುತಿಸಿ, ಜಿಲ್ಲೆ, ರಾಜ್ಯಮಟ್ಟದಲ್ಲಿ ಪುರಸ್ಕರಿಸಬೇಕು ಎಂದು ಆಗ್ರಹಿಸಿದರು. ಬಸವಪ್ರಸಾದ ಸ್ವಾಮೀಜಿ, ಶರಣಪ್ಪ ಬಳ್ಳಾರಿ ನೇತೃತ್ವ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.