
ಬೆಳಗಾವಿ: ‘ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಈ ಬಾರಿ ಸುಗಮವಾಗಿ ವಿಧಾನಮಂಡಲ ಚಳಿಗಾಲದ ಅಧಿವೇಶನ ನಡೆಸಲು ಜಿಲ್ಲಾಡಳಿತದ ವತಿಯಿಂದ ಎಲ್ಲ ರೀತಿಯ ತಯಾರಿ ಮಾಡಿಕೊಂಡಿದ್ದೇವೆ’ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹೇಳಿದರು.
ಇಲ್ಲಿನ ಸುವರ್ಣ ವಿಧಾನಸೌಧಕ್ಕೆ ಮಂಗಳವಾರ ಭೇಟಿ ನೀಡಿ, ಅಧಿವೇಶನದ ಸಿದ್ಧತೆ ಪರಿಶಿಲಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
‘ಕಳೆದ ವರ್ಷ ಉತ್ತಮವಾಗಿ ಅಧಿವೇಶನ ನಡೆದಿತ್ತು. ಈ ಬಾರಿಯೂ ಯಾವುದೇ ಸಮಸ್ಯೆಯಾಗದು. ವಿವಿಧ ಇಲಾಖೆಗಳ ಮುಖ್ಯಸ್ಥರ ಜತೆ ಚರ್ಚಿಸಿ ಅಗತ್ಯ ಕ್ರಮ ವಹಿಸಿದ್ದೇವೆ’ ಎಂದರು.
‘ಅಧಿವೇಶನ ಹಿನ್ನೆಲೆಯಲ್ಲಿ ವಸತಿಗಾಗಿ 3 ಸಾವಿರ ಕೊಠಡಿ ಕಾಯ್ದಿರಿಸಿದ್ದೇವೆ. 700 ವಾಹನ ಬಳಸಿಕೊಳ್ಳಲಿದ್ದೇವೆ. ಲೋಕೋಪಯೋಗಿ ಇಲಾಖೆಯಿಂದ ಬೃಹತ್ ಆಕಾರದ ರಾಷ್ಟ್ರಧ್ವಜ ಪ್ರದರ್ಶಿಸಲಿದ್ದೇವೆ’ ಎಂದು ಹೇಳಿದರು.
ಪಾರ್ಕ್ ಉದ್ಘಾಟನೆ: ‘ಲೋಕೋಪಯೋಗಿ ಇಲಾಖೆ ₹4.5 ಕೋಟಿ ವೆಚ್ಚದಲ್ಲಿ ಸೌಧದ ಆವರಣದಲ್ಲಿ ನಿರ್ಮಿಸಿದ ಉದ್ಯಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉದ್ಘಾಟಿಸುವರು. ವಿವಿಧ ರೀತಿಯ ಕಾರಂಜಿ ಒಳಗೊಂಡ ಪಾರ್ಕ್ಗೆ ಜನರು ಭೇಟಿ ನೀಡಿ ನಿರಾಳರಾಗಬಹುದು’ ಎಂದು ತಿಳಿಸಿದರು.
ಪ್ರತಿಭಟನೆ ತಗ್ಗುವ ನಿರೀಕ್ಷೆ: ‘ಅಧಿವೇಶನ ವೇಳೆ ಪ್ರತಿಭಟನೆ ನಡೆಸುವವರಿಗಾಗಿ ಎರಡು ಕಡೆ ವ್ಯವಸ್ಥೆ ಮಾಡಿದ್ದೇವೆ. ಮೆಕ್ಕೆಜೋಳ, ಕಬ್ಬು ಬೆಳೆಯುವವರ ಸಮಸ್ಯೆಗೆ ಪರಿಹಾರ ಸಿಕ್ಕಿದೆ. ವಿವಿಧ ಸಂಘ–ಸಂಸ್ಥೆಗಳ ಜತೆಗೆ ನಗರ ಪೊಲೀಸ್ ಆಯುಕ್ತರು ಸಭೆ ಮಾಡುತ್ತಿದ್ದಾರೆ. ಹಾಗಾಗಿ ಈ ಬಾರಿ ಪ್ರತಿಭಟನೆಗಳ ಸಂಖ್ಯೆ ತಗ್ಗುವ ನಿರೀಕ್ಷೆ ಇದೆ’ ಎಂದರು.
‘ಪ್ರತಿಭಟನೆಗೆ ನಮ್ಮ ಆಕ್ಷೇಪವಿಲ್ಲ. ಆದರೆ, ಪ್ರತಿಭಟನೆ ನಡೆಸುವ ಮುನ್ನ, ಜಿಲ್ಲಾಧಿಕಾರಿ ಕಚೇರಿ ಮತ್ತು ನಗರ ಪೊಲೀಸ್ ಕಮಿಷನರ್ ಕಚೇರಿಗೆ ತಿಳಿಸಬೇಕು’ ಎಂದು ಹೇಳಿದರು.
ನಗರ ಪೊಲೀಸ್ ಕಮಿಷನರ್ ಭೂಷಣ ಬೊರಸೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಹಾಜರಿದ್ದರು.
ಪ್ರತಿಭಟನೆಗೂ ಮುನ್ನ ಮಾಹಿತಿ ನೀಡಲು ಸೂಚನೆ ₹4.5 ಕೋಟಿ ವೆಚ್ಚದಲ್ಲಿ ಉದ್ಯಾನ ನಿರ್ಮಾಣ ಬೃಹತ್ ಆಕಾರದ ರಾಷ್ಟ್ರಧ್ವಜ ಪ್ರದರ್ಶನ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.