
ಬೆಳಗಾವಿಯ ಬಿ.ಎಸ್.ಯಡಿಯೂರಪ್ಪ ಮಾರ್ಗದ ಬಳಿ ಇರುವ ವೇದಿಕೆಯಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದವರು ಪ್ರತಿಭಟಿಸಿದರು
-ಪ್ರಜಾವಾಣಿ ಚಿತ್ರ
ಬೆಳಗಾವಿ: ವಿಧಾನಮಂಡಲ ಚಳಿಗಾಲದ ಅಧಿವೇಶನದ ಮೂರನೇ ದಿನವಾದ ಬುಧವಾರವೂ ಇಲ್ಲಿನ ಸುವರ್ಣ ವಿಧಾನಸೌಧ ಬಳಿ ಮತ್ತು ನಗರದ ಬಿ.ಎಸ್.ಯಡಿಯೂರಪ್ಪ ಮಾರ್ಗದ ಬಳಿ ಇರುವ ವೇದಿಕೆಗಳಲ್ಲಿ ಸಾಲು ಸಾಲು ಪ್ರತಿಭಟನೆ ನಡೆದವು. ವಿವಿಧೆಡೆಯಿಂದ ಆಗಮಿಸಿದ್ದ ಹಲವು ಸಂಘಟನೆಯವರು ಧರಣಿ ನಡೆಸಿದರು. ‘ಸರ್ಕಾರ ನಮ್ಮ ಬೇಡಿಕೆ ಕಡೆಗಣಿಸುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ರಾಜ್ಯದಲ್ಲಿ 1995ರಿಂದ ಆರಂಭಗೊಂಡ ಕನ್ನಡ ಮಾಧ್ಯಮ ಅನುದಾನರಹಿತ ಶಾಲೆ, ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸಬೇಕು’ ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಅನುದಾನರಹಿತ ಶಾಲೆ– ಕಾಲೇಜುಗಳ ಆಡಳಿತ ಮಂಡಳಿಗಳ ಮತ್ತು ನೌಕರರ ಒಕ್ಕೂಟದವರು ಪ್ರತಿಭಟನೆ ನಡೆಸಿದರು.
1987ರಿಂದ 1995ರ ಅವಧಿಯಲ್ಲಿ ಸ್ಥಾಪನೆಯಾದ ಕನ್ನಡ ಮಾಧ್ಯಮ ಅನುದಾನರಹಿತ ಶಾಲೆ, ಕಾಲೇಜುಗಳನ್ನು ಸರ್ಕಾರ ಅನುದಾನಕ್ಕೆ ಒಳಪಡಿಸಿದೆ. ಅದಾದ ನಂತರದ ಅವಧಿಯಲ್ಲಿ ಆರಂಭಗೊಂಡ ಶಿಕ್ಷಣ ಸಂಸ್ಥೆಗಳನ್ನು ಅನುದಾನದಿಂದ ಹೊರಗಿಟ್ಟ ಕಾರಣ, ಸಂಕಷ್ಟಕ್ಕೆ ಸಿಲುಕಿವೆ. ಹಾಗಾಗಿ 1995ರಿಂದ ಆರಂಭವಾದ ಕನ್ನಡ ಮಾಧ್ಯಮ ಶಾಲಾ ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸಬೇಕು’ ಎಂದು ಒತ್ತಾಯಿಸಿದರು.
ಎಸ್.ಎಸ್.ಮಠದ, ಪರಶುರಾಮ ಬೆಳಗಾಂವಕರ, ಸಲೀಮ್ ಕಿತ್ತೂರ, ಎಂ.ಎ.ಕೋರಿಶೆಟ್ಟಿ, ಸಂತೋಷ ಕುರಬೆಟ್ಟ, ಮೃತ್ಯುಂಜಯ ಕಲ್ಮಠ ನೇತೃತ್ವ ವಹಿಸಿದ್ದರು.
ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಅನ್ನು ಪ್ರಾತಿನಿಧಿಕ ಪರಿಷತ್ ಎಂದು ಘೋಷಿಸಿ, ಅನುದಾನಕ್ಕೆ ಒಳಪಡಿಸಬೇಕು ಎಂದು ಒತ್ತಾಯಿಸಿ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ನವರು ಪ್ರತಿಭಟಿಸಿದರು.
‘ನಾವು ನಾಡು–ನುಡಿ, ಕಲೆ, ಸಾಹಿತ್ಯ, ಶಿಕ್ಷಣಕ್ಕೆ ಸಂಬಂಧಿಸಿ ಹಲವು ದಶಕಗಳಿಂದ ಕಾರ್ಯಕ್ರಮ ಸಂಘಟಿಸುತ್ತಿದ್ದೇವೆ. ಆದರೆ, ಸರ್ಕಾರದಿಂದ ಯಾವುದೇ ಅನುದಾನ ಬಂದಿಲ್ಲ’ ಎಂದರು. ಮುಖಂಡರಾದ ಸಿ.ಎನ್.ಅಶೋಕ, ಸಿದ್ರಾಮ ನಿಲಜಗಿ, ಪ್ರಕಾಶ ಹೊಸಮನಿ, ಎಂ.ವೈ.ಮೆಣಸಿನಕಾಯಿ ಇತರರಿದ್ದರು.
‘ಗಡಿಯಲ್ಲಿ ಸದಾ ನಾಡವಿರೋಧಿ ಚಟುವಟಿಕೆ ಕೈಗೊಂಡು, ಭಾಷಾ ವಿಷಬೀಜ ಬಿತ್ತುತ್ತಿರುವ ಮಹಾರಾಷ್ಟ್ರ ಏಕೀಕರಣ ಸಮಿತಿಯನ್ನು (ಎಂಇಎಸ್) ನಿಷೇಧಿಸಬೇಕು’ ಎಂದು ಒತ್ತಾಯಿಸಿ ಕರುನಾಡ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
‘ಬೆಳಗಾವಿ ಜಿಲ್ಲೆ ವಿಭಜಿಸಿ, ಗೋಕಾಕ ಪ್ರತ್ಯೇಕ ಜಿಲ್ಲೆ ರಚಿಸಬೇಕು. ಸುವರ್ಣ ವಿಧಾನಸೌಧವನ್ನು ಆಡಳಿತ ಶಕ್ತಿಕೇಂದ್ರವಾಗಿಸುವ ನಿಟ್ಟಿನಲ್ಲಿ ಕಾರ್ಯದರ್ಶಿ ಮಟ್ಟದ ಕಚೇರಿಗಳನ್ನು ಸ್ಥಳಾಂತರಿಸಬೇಕು. ಸೌಧದ ಮುಂಭಾಗದಲ್ಲಿ ಭುವನೇಶ್ವರಿ ದೇವಿ ಮೂರ್ತಿ ಪ್ರತಿಷ್ಠಾಪಿಸಬೇಕು’ ಎಂದು ಒತ್ತಾಯಿಸಿದರು.
‘ವಿವಿಧ ಮೈಕ್ರೊ ಫೈನಾನ್ಸ್ನವರು ಬಡವರಿಗೆ, ಅದರಲ್ಲೂ ರೈತರಿಗೆ ಕಿರುಕುಳ ನೀಡುತ್ತಿದ್ದಾರೆ. ಅದನ್ನು ತಪ್ಪಿಸಬೇಕು. ರೈತರ ನೀರಾವರಿ ಪಂಪ್ಸೆಟ್ಗಳಿಗೆ ನಿರಂತರವಾಗಿ ವಿದ್ಯುತ್ ಪೂರೈಸಬೇಕು’ ಎಂದು ಆಗ್ರಹಿಸಿದರು.
ಮುಖಂಡರಾದ ಮಲ್ಲಿಕಾರ್ಜುನ ಮರಕುಂಬಿ, ಮಂಜುನಾಥ ಝಲ್ಲಿ ನೇತೃತ್ವ ವಹಿಸಿದ್ದರು.
ಬೆಳಗಾವಿಯ ಸುವರ್ಣ ವಿಧಾನಸೌಧ ಬಳಿ ಇರುವ ವೇದಿಕೆಯಲ್ಲಿ ಕರ್ನಾಟಕ ರಾಜ್ಯ ಸಮಗಾರ(ಚಮ್ಮಾರ) ಹರಳಯ್ಯ ಸಂಘದವರು ಸಚಿವ ಆರ್.ಬಿ.ತಿಮ್ಮಾಪುರ ಅವರಿಗೆ ಮನವಿ ಸಲ್ಲಿಸಿದರು
‘ಸಮಗಾರ ಸಮುದಾಯದ ಅಭಿವೃದ್ಧಿಗಾಗಿ ಮಹಾ ಶಿವಶರಣ ಹರಳಯ್ಯ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು’ ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಸಮಗಾರ(ಚಮ್ಮಾರ) ಹರಳಯ್ಯ ಸಂಘದವರು ಪ್ರತಿಭಟಿಸಿದರು.
‘ಸಮಗಾರ ಸಮುದಾಯದ ಗುರು ಹರಳಯ್ಯನವರ ಗುರುಪೀಠ ಸ್ಥಾಪನೆಗಾಗಿ ಬೆಂಗಳೂರು, ಬೆಳಗಾವಿ, ಹುಬ್ಬಳ್ಳಿ, ವಿಜಯಪುರದಲ್ಲಿ ಜಮೀನು ಮಂಜೂರುಗೊಳಿಸಿ, ಅನುದಾನ ಒದಗಿಸಬೇಕು. ಲಿಡ್ಕರ್ ನಿಗಮದಲ್ಲಿ ಅಧ್ಯಕ್ಷರು ಮತ್ತು ನಿರ್ದೇಶಕರ ಸ್ಥಾನವನ್ನು ನಮ್ಮ ಸಮುದಾದವರಿಗೆ ನೀಡಬೇಕು’ ಎಂದು ಆಗ್ರಹಿಸಿದರು.
ಮುಖಂಡರಾದ ಜಗದೀಶ ಬೆಟಗೇರಿ, ಸುನಿಲ ಮದಲಭಾವಿ, ಮಂಜುನಾಥ ಹಂಜಗಿ ನೇತೃತ್ವ ವಹಿಸಿದ್ದರು.
ಪ್ರತಿಭಟನಾ ಸ್ಥಳಕ್ಕಾಗಮಿಸಿ ಅಹವಾಲು ಆಲಿಸಿದ ಸಚಿವ ಆರ್.ಬಿ.ತಿಮ್ಮಾಪುರ ಅವರು, ‘ಸರ್ಕಾರ ಹಂತ–ಹಂತವಾಗಿ ನಿಮ್ಮ ಬೇಡಿಕೆ ಈಡೇರಿಸಲಿದೆ’ ಎಂದು ಭರವಸೆ ಕೊಟ್ಟರು.
‘ರಂಗರಾಜನ್ ಸಮಿತಿ ವರದಿ ಪ್ರಕಾರ, ಕಬ್ಬಿನ ಉಪ ಉತ್ಪನ್ನಗಳ ಲಾಭಾಂಶದಲ್ಲಿ ಸಕ್ಕರೆ ಕಾರ್ಖಾನೆಗೆ ಶೇ 30ರಷ್ಟು ಮತ್ತು ರೈತರಿಗೆ ಶೇ 70ರಷ್ಟು ಹಣ ನೀಡಬೇಕು’ ಎಂದು ಆಗ್ರಹಿಸಿ, ಭಾರತೀಯ ಕಿಸಾನ್ ಸಂಘದವರು ಪ್ರತಿಭಟಿಸಿದರು.
‘ರಾಜ್ಯದಲ್ಲಿ ವಿವಿಧ ಸಕ್ಕರೆ ಕಾರ್ಖಾನೆಗಳು ಕಬ್ಬಿನ ತೂಕದಲ್ಲಿ ರೈತರಿಗೆ ಮಾಡುತ್ತಿರುವ ಮೋಸ ತಪ್ಪಿಸಬೇಕು. ಕಾರ್ಖಾನೆಗಳಲ್ಲಿ ಸರ್ಕಾರದ ವತಿಯಿಂದಲೇ ಡಿಜಿಟಲ್ ತೂಕದ ಯಂತ್ರಗಳನ್ನು ಅಳವಡಿಸಬೇಕು. ಕಬ್ಬು ಪೂರೈಸಿದ 15 ದಿನಗಳ ಒಳಗಾಗಿ ರೈತರಿಗೆ ಪೂರ್ಣ ಪ್ರಮಾಣದ ಬಿಲ್ ಪಾವತಿಸಬೇಕು’ ಎಂದು ಒತ್ತಾಯಿಸಿದರು.
ಮುಖಂಡರಾದ ಭೀಮಸೇನ ಕೋಕರೆ, ವಿವೇಕ ಮೋರೆ, ಜಗದೀಶ ಸಂಕನಗೌಡರ, ಪುಟ್ಟಸ್ವಾಮಿ, ಎಸ್.ಎಲ್.ಗಾಣಗಿ ನೇತೃತ್ವ ವಹಿಸಿದ್ದರು.
‘ನಮಗೆ ಮಾಸಿಕ ₹15 ಸಾವಿರ ಗೌರವಧನ ನೀಡಬೇಕು’ ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಆಶಾ ಕಾರ್ಯಕರ್ತೆಯರು ಪ್ರತಿಭಟಿಸಿದರು.
‘ರಾಜ್ಯದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಬಿಸಿಯೂಟ ನೌಕರರ ಗೌರವಧನ ಹೆಚ್ಚಿಸಲಾಗಿದೆ. ಅದೇ ಮಾದರಿಯಲ್ಲಿ ಏ.1ರಿಂದ ಅನ್ವಯವಗುವಂತೆ, ಎಲ್ಲ ಆಶಾ ಕಾರ್ಯಕರ್ತೆಯರ ಮಾಸಿಕ ಗೌರವಧನವನ್ನು ₹1 ಸಾವಿರ ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಬೇಕು. ಪಶ್ಚಿಮ ಬಂಗಾಳ ಮಾದರಿಯಲ್ಲಿ ನಿವೃತ್ತ ಆಶಾ ಕಾರ್ಯಕರ್ತೆಯರಿಗೆ ಇಡಿಗಂಟು ಸೌಲಭ್ಯ ಒದಗಿಸಬೇಕು’ ಎಂದು ಮನವಿ ಮಾಡಿದರು.
ಡಿ.ನಾಗಲಕ್ಷ್ಮಿ, ಕೆ.ಸೋಮಶೇಖರ ಯಾದಗಿರಿ ನೇತೃತ್ವ ವಹಿಸಿದ್ದರು.
ಬೆಳಗಾವಿಯ ಬಿ.ಎಸ್.ಯಡಿಯೂರಪ್ಪ ಮಾರ್ಗದ ಬಳಿಯ ವೇದಿಕೆಯಲ್ಲಿ ನಿವೃತ್ತ ನೌಕರರ ವೇದಿಕೆಯವರು ಪ್ರತಿಭಟನೆ ಮಾಡಿದರು
‘2022ರ ಜುಲೈ 1ರಿಂದ 2024ರ ಜುಲೈ 31ರ ಅವಧಿಯಲ್ಲಿ ಸೇವಾನಿವೃತ್ತಿ ಹೊಂದಿದ ನೌಕರರಿಗೆ ಏಳನೇ ವೇತನದ ಆಯೋಗದ ಪ್ರಕಾರ ನಿವೃತ್ತಿ ಆರ್ಥಿಕ ಒದಗಿಸಬೇಕು’ ಎಂದು ಒತ್ತಾಯಿಸಿ ರಾಜ್ಯ ನಿವೃತ್ತ ನೌಕರರ ವೇದಿಕೆಯವರು ಪ್ರತಿಭಟನೆ ನಡೆಸಿದರು.
‘ನಮಗೆ ಆರನೇ ವೇತನದ ಆಯೋಗದ ಪ್ರಕಾರ ನಿವೃತ್ತಿ ಆರ್ಥಿಕ ಸೌಲಭ್ಯ ಒದಗಿಸಲಾಗಿದೆ. ಏಳನೇ ವೇತನದ ಆಯೋಗದ ಪ್ರಕಾರ ಬರಬೇಕಿರುವ ವ್ಯತ್ಯಾಸದ ಹಣವನ್ನು ಒಂದೇ ಕಂತಿನಲ್ಲಿ ನೀಡಬೇಕು’ ಎಂದು ಕೋರಿದರು.
ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜಾ ಅವರು, ಪ್ರತಿಭಟನಾ ಸ್ಥಳಕ್ಕಾಗಮಿಸಿ ಬೇಡಿಕೆ ಆಲಿಸಿದರು. ಸದನದಲ್ಲಿ ಈ ಬಗ್ಗೆ ಧ್ವನಿ ಎತ್ತುವುದಾಗಿ ಭರವಸೆ ನೀಡಿದರು.
ಮುಖಂಡರಾದ ಎಂ.ಪಿ.ಎಂ.ಷಣ್ಮುಖಯ್ಯ, ಅಶೋಕ ಸಜ್ಜನ, ಎಸ್.ಜಿ.ಬಿಸೇರೊಟ್ಟಿ, ಶಂಕರಪ್ಪ ಲಮಾಣಿ, ಜಲಜಾ ಶೇಖರ, ಪ್ರಕಾಶಚಂದ್ರ ಶೆಟ್ಟಿ, ದಿನಕರ ಶೆಟ್ಟಿ, ಆನಂದಪ್ಪ ಡಿ., ಅರ್ಜುನ ಸೊಂಟಕ್ಕಿ, ವರ್ಧಮಾನ ಮಾರ್ಗನಕೊಪ್ಪ, ಚಂದ್ರಶೇಖರ ಅರಭಾವಿ, ಗೋಪಾಲ ನಾಯಕ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.