ಮೂಡಲಗಿ: ‘ಅರಭಾವಿ, ಕಲ್ಲೋಳಿ, ನಾಗನೂರು ಮತ್ತು ಮೂಡಲಗಿ ಪಟ್ಟಣಗಳ ವ್ಯಾಪ್ತಿಯ ಸಾರ್ವಜನಿಕರಿಗೆ ಶಾಶ್ವತ ಕುಡಿಯುವ ನೀರು ಕಲ್ಪಿಸಿಕೊಡುವ ಅಮೃತ ಯೋಜನೆಗೆ ಚಾಲನೆ ನೀಡಲಾಗಿದೆ. ಒಂದು ವರ್ಷದೊಳಗೆ ಕಾಮಗಾರಿ ಮುಗಿಯಲಿದೆ’ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಬುಧವಾರ ತಾಲ್ಲೂಕಿನ ಅರಭಾವಿ ಪಟ್ಟಣದ ಆಂಜನೇಯ ದೇವಸ್ಥಾನದ ಹತ್ತಿರ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಮೃತ 2.0 ಯೋಜನೆಯಡಿ ಅಂದಾಜು ₹140.69 ಕೋಟಿ ವೆಚ್ಚದಲ್ಲಿ ಕುಡಿಯುವ ನೀರಿನ ಯೋಜನೆಯ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ‘ಪ್ರತಿ ಕುಟುಂಬಕ್ಕೆ ಕುಡಿಯುವ ನೀರು ತಲುಪಲಿದೆ. ನನ್ನ 20 ವರ್ಷಗಳ ಕನಸು ಈಡೇರಿದಂತಾಗಿದೆ’ ಎಂದರು.
‘ಶಿರಢಾನ ಗ್ರಾಮದ ಹತ್ತಿರ (ಝಂಗಟಿಹಾಳ) ಘಟಪ್ರಭಾ ನದಿಯ ಎಡ ದಂಡೆಯಲ್ಲಿ ಜಾಕ್ವೆಲ್, ಇಂಟೇಕ್ ವೆಲ್ ಮತ್ತು ಇಂಟೇಕ್ ಕೊಳವೆ ಮಾರ್ಗಗಳನ್ನು ನಿರ್ಮಿಸಲಾಗುತ್ತಿದೆ. ರಸ್ತೆಗಳ ಅಭಿವೃದ್ಧಿ ಸಂಬಂಧ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಲ್ಲಿ ಮನವಿ ಮಾಡಿಕೊಳ್ಳಲಾಗಿದೆ’ ಎಂದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಅರಭಾವಿ, ಕಲ್ಲೋಳಿ, ನಾಗನೂರು ಮತ್ತು ಮೂಡಲಗಿ ಪುರಸಭೆಯಿಂದ ಸನ್ಮಾನಿಸಲಾಯಿತು.
ಶಿವಯ್ಯ ಹಿರೇಮಠ, ಅರಭಾವಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರೇಣುಕಾ ಮಾದರ, ಉಪಾಧ್ಯಕ್ಷೆ ರಾಜಶ್ರೀ ಗಂಗಣ್ಣವರ, ಮೂಡಲಗಿ ಪುರಸಭೆಯ ಅಧ್ಯಕ್ಷೆ ಖುರ್ಷದಾ ನದಾಫ, ಉಪಾಧ್ಯಕ್ಷೆ ಭೀಮವ್ವ ಪೂಜೇರಿ, ಗಜಾನನ ಯರಗನ್ವಿ, ಬಸವಂತ ದಾಸನ್ನವರ, ಸುಭಾಷ ಕ್ಯತೆನ್ನವರ, ಆಂಜನೇಯ ಶಿಕ್ಷಣ ಸಂಸ್ಥೆ ಅಧ್ಯಕ್ಷ ಶಂಕರ ಬಿಲಕುಂದಿ, ರಮೇಶ ಮಾದರ, ಮುತ್ತೆಪ್ಪ ಜಲ್ಲಿ, ರಾಮಪ್ಪ ಹಂದಿಗುಂದ, ರವಿ ಸಣ್ಣಕ್ಕಿ, ಹಣಮಂತ ಗುಡ್ಲಮನಿ, ಗಣಪತಿ ಇಳಿಗೆರಿ, ಸುಭಾಷ ಕುರಬೇಟ, ಪ್ರಶಾಂತ್ ನಿಡಗುಂದಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ವಿನಾಯಕ ಬಬಲೇಶ್ವರ, ತುಕಾರಾಂ ಮಾದರ, ಚಿದಾನಂದ ಮುಗಳಖೋಡ, ಕುಮಾರೇಶ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.