ಬೆಳಗಾವಿ: ನಗರ ಹೊರವಲಯದ ಗೌಂಡವಾಡ ಗ್ರಾಮದಲ್ಲಿ ಶನಿವಾರ ರಾತ್ರಿ ಕೊಲೆಯಾದ ಸತೀಶ ಪಾಟೀಲ (37) ಅವರ ಶವ ಭಾನುವಾರ ಕೂಡ ನಗರದ ಕೆಎಲ್ಇ ಆಸ್ಪತ್ರೆಯಲ್ಲಿದೆ. ಇತ್ತ ಗ್ರಾಮದಲ್ಲಿ ಪತಿ ಮುಖ ನೋಡಲು ಪತ್ನಿ ಸ್ನೇಹಾ ಗೋಳಾಟ ಹೇಳತೀರದಾಗಿದೆ.
'ಸತೀಶ... ಮಲಾಪನ್ ಗಿವೂನ್ ಜಾವಾ (ಸತೀಶ ನನ್ನನ್ನೂ ಕರೆದುಕೊಂಡು ಹೋಗು)' ಎಂದು ಕೂಗುತ್ತ ಸ್ನೇಹಾ ಅವರು ರಸ್ತೆಯಲ್ಲಿ ಹೊರಳಾಡಿದರು. ಮನೆಯಿಂದ ಆಸ್ಪತ್ರೆಯ ಕಡೆಗೆ ಓಡಲು ಮುಂದಾದರು. ಆಗ ನೆರವಿಗೆ ಬಂದ ಕುಟುಂಬದ ಇತರ ಸದಸ್ಯರು ಅವರನ್ನು ಸಂಬಾಳಿಸಲು ಪರದಾಡಬೇಕಾಯಿತು.
ಸತೀಶ ಪಾಟೀಲ ಧರಿಸುತ್ತಿದ್ದ ಚಪ್ಪಲಿ, ಬೈಕ್ ಮುಟ್ಟಿದ ಸ್ನೇಹಾ ಕಣ್ಣೀರಾದರು. ಮನೆಯ ಮುಂದೆಯೇ ಸತೀಶ ಅವರನ್ನು ಮಾರಕಾಸ್ತ್ರಗಳಿಂದ ಹೊಡಿದಿದ್ದು, ರಕ್ತದ ಕಲೆಗಳನ್ನು ಕಂಡು ಪತ್ನಿ ಮಮ್ಮಲ ಮರುಗಿದರು.
ವಿಮಾನದ ಮೂಲಕ ತಾಯಿ ಕರೆಸಲು ವ್ಯವಸ್ಥೆ
ಕೊಲೆಯಾದ ಸತೀಶ ಅವರ ತಾಯಿ ನಳಿನಿ ಅವರು ಕೆಲ ದಿನಗಳ ಹಿಂದೆ ವಿಶಾಖಪಟ್ಟಣಕ್ಕೆ ತೆರಳಿದ್ದಾರೆ. ಸಂಬಂಧಿಯೊಬ್ಬರ ಬಾಣಂತನಕ್ಕೆ ತೆರಳಿದ್ದ ಅವರನ್ನು ವಿಮಾನದ ಮೂಲಕ ಕರೆಸಲು ಸಂಬಂಧಿಕರು ಸಿದ್ಧತೆ ಮಾಡಿದ್ದಾರೆ.
ವಿಶಾಖಪಟ್ಟಣದಿಂದ ಭಾನುವಾರ ಬೆಳಿಗ್ಗೆ ಹೊರಟ ನಳಿನಿ ಅವರು ಹೈದರಾಬಾದ್ ವರೆಗೆ ರಸ್ತೆ ಮೂಲಕ ಬರಲಿದ್ದಾರೆ. ಅಲ್ಲಿಂದ ಮಧ್ಯಾಹ್ನ 3.45ಕ್ಕೆ ಬಿಡುವ ವಿಮಾನದ ಮೂಲಕ ಅವರನ್ನು ಬೆಳಗಾವಿಗೆ ಕರೆತರಲು ವ್ಯವಸ್ಥೆ ಮಾಡಲಾಗಿದೆ.
ಇವನ್ನೂ ಓದಿ..
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.