ಬೆಳಗಾವಿ: ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿ ಬೆಳಗಾವಿಯ ಮೂವರ ಹೆಸರಿದೆ. ಆದರೆ, ‘ಕೋಟಾ’ ವಿಷಯದಲ್ಲಿ ಉಂಟಾಗಿರುವ ಗೊಂದಲ ಚರ್ಚೆಗೆ ಒಳಗಾಗಿದೆ.
ಜಿಲ್ಲಾ ಕೋಟಾದಲ್ಲಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಅರಭಾವಿಯ ಬಯಲಾಟ ಕಲಾವಿದೆ ಕೆಂಪವ್ವ ಹರಿಜನ ಅವರನ್ನು ಆಯ್ಕೆ ಮಾಡಲಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಆಯ್ಕೆಯಾಗಿರುವ ಅಶೋಕ ಶೆಟ್ಟರ್ ಸದ್ಯ ಹುಬ್ಬಳ್ಳಿಯಲ್ಲಿದ್ದಾರೆ. ಅವರ ಮೂಲ ಬಾಗಲಕೋಟೆ ಎನ್ನಲಾಗುತ್ತಿದೆ. ಸಂಗೀತ ಕ್ಷೇತ್ರದಲ್ಲಿ ಪರಿಗಣಿಸಲಾದ ಅನಂತ ತೇರದಾಳ ಅವರು ಕೂಡ ಬಾಗಲಕೋಟೆ ಜಿಲ್ಲೆಯವರು, ಸದ್ಯ ಪುಣೆಯಲ್ಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಆಯ್ಕೆಯಾಗಿರುವ ರಾಮಣ್ಣ ಬ್ಯಾಟಿ ಅವರನ್ನು ಗದಗ ಜಿಲ್ಲೆಯ ಕೋಟಾಕ್ಕೆ ಸೇರಿಸಲಾಗಿದೆ. ಆದರೆ, ಅವರು ಬೆಳಗಾವಿ ಜಿಲ್ಲೆಯವರು ಎಂದು ತಿಳಿದುಬಂದಿದೆ.
ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ‘ಅನಂತ ತೇರದಾಳ ಅವರು ಇಲ್ಲಿನ ತಿಲಕವಾಡಿಯವರಾಗಿದ್ದಾರೆ ಹಾಗೂ ಸದ್ಯ ಪುಣೆಯಲ್ಲಿದ್ದಾರೆ ಎಂಬ ಮಾಹಿತಿ ಇದೆ. ಅವರು ಹಾಗೂ ಕೆಂಪವ್ವ ಹೆಸರನ್ನು ಇಲ್ಲಿಂದ ಶಿಫಾರಸು ಮಾಡಲಾಗಿತ್ತು. ಅಶೋಕ ಶೆಟ್ಟರ್ ಅವರ ಹೆಸರನ್ನು ಇಲ್ಲಿಂದ ಕಳುಹಿಸಿರಲಿಲ್ಲ’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.