ADVERTISEMENT

ಚಿಕಿತ್ಸೆಗೆ ಹೆಚ್ಚಿನ ಹಣ: ಸಿಬಿಐ ತನಿಖೆ– ಶಾಸಕರ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 4 ಜೂನ್ 2021, 15:00 IST
Last Updated 4 ಜೂನ್ 2021, 15:00 IST

ಬೆಳಗಾವಿ: ‘ಕೋವಿಡ್–19 ಚಿಕಿತ್ಸೆಗೆ ರೋಗಿಗಳ ಕುಟುಂಬದವರ ಬಳಿ ನಿಯಮಬಾಹಿರವಾಗಿ ಹೆಚ್ಚು ಬಿಲ್ ಪಾವತಿಸುವಂತೆ ಖಾಸಗಿ ಆಸ್ಪತ್ರೆಗಳಲ್ಲಿ ಕೇಳುವ ವಿಡಿಯೊ ಕ್ಲಿಪಿಂಗ್ ಮತ್ತು ದಾಖಲೆಗಳು ನನ್ನ ಬಳಿ ಇದೆ. ಹೆಚ್ಚು ಹಣ ಪಡೆದಿರುವವರು ಕೂಡಲೇ ಮರಳಿಸಬೇಕು. ಇಲ್ಲದಿದ್ದರೆ ಈ ಎಲ್ಲಾ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಮಾಡಬೇಕಾಗುತ್ತದೆ’ ಎಂದು ಬಿಜೆಪಿ ಶಾಸಕ ಅಭಯ ಪಾಟೀಲ ಎಚ್ಚರಿಕೆ ನೀಡಿದ್ದಾರೆ.‌

ಈ ಬಗ್ಗೆ ಶುಕ್ರವಾರ ವಿಡಿಯೊ ಹೇಳಿಕೆ ಬಿಡುಗಡೆ ಮಾಡಿರುವ ಅವರು, ‘ನಗರದಲ್ಲಿ 27 ಖಾಸಗಿ ಆಸ್ಪತ್ರೆಗಳಿವೆ. ಅವುಗಳಲ್ಲಿ 22 ಆಸ್ಪತ್ರೆಗಳ ಮೇಲೆ ಜನರು ದೂರು ಕೊಟ್ಟಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರ ಗಮನಕ್ಕೆ ತಂದಿದ್ದೇನೆ. ಅವರು ಪರಿಶೀಲನೆ ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ’ ಎಂದು ತಿಳಿಸಿದ್ದಾರೆ.

‘ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರದ ನಿಯಮಕ್ಕೆ ವಿರುದ್ಧವಾಗಿ ಹೆಚ್ಚು ಬಿಲ್ ಪಡೆಯಲಾಗುತ್ತಿದೆ.‌ ಆ ಬಿಲ್‌ಗಳ ಪರಿಶೀಲನೆ ಆಗಬೇಕು ಮತ್ತು ಹೆಚ್ಚಿಗೆ ಹಣ ಪಡೆದಿರುವುದು ಕಂಡುಬಂದರೆ ಹಣ ಮರಳಿಸುವಂತೆ ಮಾಡಬೇಕು ಎಂದು ಮನವಿ ಸಲ್ಲಿಸಲಾಗಿದೆ. ಆಯುಷ್ಮಾನ್‌ ಭಾರತ ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ಖಾಸಗಿ ಆಸ್ಪತ್ರೆಗಳು ಉಚಿತವಾಗಿ ಚಿಕಿತ್ಸೆ ನೀಡಲು ಸ್ಪಂದಿಸುತ್ತಿಲ್ಲ ಎಂಬ ದೂರುಗಳೂ ಬಂದಿವೆ. ಅಂತಹ ಪ್ರಕರಣ ಕಂಡುಬಂದರೆ ಕ್ರಮಕ್ಕೆ ಶಿಫಾರಸು ಮಾಡುವಂತೆ ಮುಖ್ಯಮಂತ್ರಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.