ಬೆಳಗಾವಿ: ‘ಕೋವಿಡ್–19 ಭೀತಿಯಲ್ಲಿರುವ ಎಲ್ಲ ನಾಗರಿಕರಿಗೆ ರೋಗನಿರೋಧಕ ಚಚ್ಚುಮದ್ದು (ಕೋವಿಶೀಲ್ಡ್ ಲಸಿಕೆ) ಸಂಜೀವಿನಿ ಇದ್ದಂತೆ’ ಎಂದು ಯುಎಸ್ಎಂ–ಕೆಎಲ್ಇ ನಿರ್ದೇಶಕ ಡಾ.ಎಚ್.ಬಿ. ರಾಜಶೇಖರ ಹೇಳಿದರು.
ನಗರದ ಕೆಎಲ್ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆಯಲ್ಲಿ ನಡೆದ ಸಾರ್ವಜನಿಕರಿಗೆ ಕೊವಿಶೀಲ್ಡ್ ರೋಗನಿರೋಧಕ ಚುಚ್ಚುಮದ್ದು ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ವರ್ಷದಿಂದ ಭೀತಿಯಲ್ಲಿ ಬೆಂದಿರುವ ನಾಗರಿಕರಲ್ಲಿರುವ ಕೊರೊನಾ ಆತಂಕ ಹೋಗಲಾಡಿಸಲು ಕೆಎಲ್ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆ, ಕೆಎಲ್ಇ ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ಏಕಕಾಲದಲ್ಲಿ ಲಸಿಕೆ ಕಾರ್ಯಕ್ರಮ ಉದ್ಘಾಟಿಸಲಾಗಿದೆ. ಈ ಮೂಲಕ ನಾಗರಿಕರ ಆರೋಗ್ಯ ಕಾಪಾಡುವಲ್ಲಿ ಆರೋಗ್ಯ ಇಲಾಖೆಯು ಸದಾ ಮುಂಚೂಣಿಯಲ್ಲಿರುತ್ತದೆ ಎನ್ನುವುದು ಸಾಬೀತಾಗಿದೆ’ ಎಂದರು.
ರೋಗನಿರೋಧಕ ಚುಚ್ಚುಮದ್ದು ಸ್ವೀಕರಿಸಿದ ಬೆಳಗಾವಿ ಜಿಲ್ಲಾ ಹಿರಿಯ ನಾಗರಿಕರ ಸಂಘದ ಮಾಜಿ ಅಧ್ಯಕ್ಷ ಪ್ರಭಾಕರ ಕುಲಕರ್ಣಿ, ‘84 ವರ್ಷದವನಾದ ನಾನು ಇಂದು ಕೋವಿಡ್ ಲಸಿಕೆ ಹಾಕಿಸಿಕೊಂಡಿದ್ದೇನೆ. ಆರೋಗ್ಯವಾಗಿದ್ದೇನೆ. ಈ ಚುಚ್ಚುಮದ್ದು ಸುರಕ್ಷಿತವಾಗಿದ್ದು ನಾಗರಿಕರು ಯಾವುದೇ ರೀತಿಯ ಹಿಂಜರಿಕೆ ಇಲ್ಲದೇ ಪಡೆಯಬಹುದು’ ಎಂದು ತಿಳಿಸಿದರು.
ಆಸ್ಪತ್ರೆಯು ನಿರ್ದೇಶಕ ಡಾ.ಎಸ್.ಸಿ. ಧಾರವಾಡ, ‘ಸೋಂಕಿನ ಭೀತಿಯಲ್ಲಿರುವ ನಾಗರಿಕರ ಆರೋಗ್ಯ ಹಿತದೃಷ್ಟಿಯಿಂದ ಸರ್ಕಾರವು ಇಟ್ಟಿರುವ ಹೆಜ್ಜೆಯು ನಿಜಕ್ಕೂ ಶ್ಲಾಘನೀಯವಾಗಿದೆ. ನಮ್ಮ ಆಸ್ಪತ್ರೆಯನ್ನು ಕೋವಿಶೀಲ್ಡ್ ರೋಗನಿರೋಧಕ ಚುಚ್ಚುಮದ್ದು ಕೇಂದ್ರವನ್ನಾಗಿ ಗುರುತಿಸಿದ್ದು ನಿಜಕ್ಕೂ ಹೆಮ್ಮೆಯ ವಿಷಯವಾಗಿದೆ. ಈ ಚುಚ್ಚುಮದ್ದು ಪಡೆಯಲು ಆಸ್ಪತ್ರೆಯ ಸಾರ್ವಜನಿಕ ಸಂಪರ್ಕ ವಿಭಾಗದ ಮೊ:9538701437, 8550887777 ಸಂಪರ್ಕಿಸಬಹುದು’ ಎಂದು ಮಾಹಿತಿ ನೀಡಿದರು.
ಹಿರಿಯರಾದ ಪಾರ್ವತಿ ರಾಜಶೇಖರ, ಕಲ್ಪನಾ ಧಾರವಾಡ, ಶೋಭಾ ಕುಲಕರ್ಣಿ ಸೇರಿದಂತೆ 20 ಮಂದಿಗೆ ಚುಚ್ಚುಮದ್ದು ನೀಡಲಾಯಿತು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಎಸ್.ಸಿ. ಮಾಸ್ತಿಹೊಳಿ, ಆಸ್ಪತ್ರೆಯ ಹಿರಿಯ ವೈದ್ಯ ಡಾ.ಬಿ.ಎಸ್. ಮಹಾಂತಶೆಟ್ಟಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.