ಬೆಳಗಾವಿ: ‘ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ 22 ವರ್ಷ ವಯಸ್ಸಿನ ನನ್ನ ಪುತ್ರ ಮಹೇಶನಿಗೆ ಶಸ್ತ್ರಚಿಕಿತ್ಸೆ ಮಾಡುವಾಗ ವೈದ್ಯರ ತಪ್ಪು ನಿರ್ಧಾರದಿಂದ ಕರುಳು ತುಂಡರಿಸಿದೆ’ ಎಂದು ರೋಗಿಯ ತಂದೆ ಫಕ್ಕೀರಪ್ಪ ಮಾದರ ದೂರಿದ್ದಾರೆ.
ಮಾಧ್ಯಮಗಳ ಮುಂದೆ ಹೇಳಿಕೆ ನೀಡಿರುವ ಅವರು, ‘ನಾವು ಸವದತ್ತಿ ತಾಲ್ಲೂಕಿನ ಇಂಗಳಗಿಯವರು. ಮಗನಿಗೆ ‘ಅಪೆಂಡಿಕ್ಸ್’ ಶಸ್ತ್ರಚಿಕಿತ್ಸೆ ಮಾಡುವಾಗ ಕರುಳು ತುಂಡಾಗಿದೆ. ಶಸ್ತ್ರಚಿಕಿತ್ಸೆ ಬಳಿಕವೂ ಮಗನ ಆರೋಗ್ಯ ತೀವ್ರ ಹದಗೆಟ್ಟ ಕಾರಣ ನಾವು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದೆವು. ಆಗ ಜಿಲ್ಲಾಸ್ಪತ್ರೆ ವೈದ್ಯರು ಮಾಡಿದ ತಪ್ಪು ಗೊತ್ತಾಗಿದೆ. ಮರು ಶಸ್ತ್ರಚಿಕಿತ್ಸೆ ಮಾಡಲು ₹10 ಲಕ್ಷಕ್ಕೂ ಹೆಚ್ಚು ವ್ಯಯಿಸಿದ್ದೇವೆ’ ಎಂದರು.
ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿರುವ ಬಿಮ್ಸ್ ನಿರ್ದೇಶಕ ಡಾ.ಅಶೋಕಕುಮಾರ ಶೆಟ್ಟಿ, ‘ಪ್ರಕರಣ ಕುರಿತು ತನಿಖೆ ಕೈಗೊಂಡು ವರದಿ ಸಲ್ಲಿಸುವಂತೆ ಸೂಚಿಸಿದ್ದೇನೆ. ಕೆಲವು ಪ್ರಕರಣಗಳಲ್ಲಿ ಶಸ್ತ್ರಚಿಕಿತ್ಸೆ ಯಶಸ್ವಿ ಆಗಿದ್ದರೂ ಬೇರೆಬೇರೆ ತೊಂದರೆಗಳು ಕಾಣಿಸಿಕೊಳ್ಳುವುದು ಸಹಜ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.