ADVERTISEMENT

ತಲ್ಲೂರ: ಸಮರ್ಪಕ ಬಸ್ ಸೌಲಭ್ಯ ಒದಗಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 31 ಜನವರಿ 2022, 15:05 IST
Last Updated 31 ಜನವರಿ 2022, 15:05 IST
ತಲ್ಲೂರ ಸಮೀಪದ ಆಲದಕಟ್ಟಿ ಕೆ.ಎಂ. ಗ್ರಾಮದಲ್ಲಿ ಬಸ್ ಹತ್ತಲು ವಿದ್ಯಾರ್ಥಿಗಳು ಹರಸಾಹಸ ಪಡುತ್ತಿರುವುದು
ತಲ್ಲೂರ ಸಮೀಪದ ಆಲದಕಟ್ಟಿ ಕೆ.ಎಂ. ಗ್ರಾಮದಲ್ಲಿ ಬಸ್ ಹತ್ತಲು ವಿದ್ಯಾರ್ಥಿಗಳು ಹರಸಾಹಸ ಪಡುತ್ತಿರುವುದು   

ತಲ್ಲೂರ: ಸಮರ್ಪಕ ಬಸ್ ಸೌಲಭ್ಯವಿಲ್ಲದ ಪರಿಣಾಮ ಯರಗಟ್ಟಿ ತಾಲ್ಲೂಕಿನ ಗ್ರಾಮೀಣ ಭಾಗದ ಶಾಲಾ–ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿಮಾರ್ಣವಾಗಿದೆ.

ತಲ್ಲೂರ, ಆಲದಕಟ್ಟಿ ಕೆ.ಎಂ., ಜಾಲಿಕಟ್ಟಿ, ಜೀವಾಪೂರ, ಸೋಮಾಪೂರ, ನುಗ್ಗಾನಟ್ಟಿ ಸೇರಿದಂತೆ ಅನೇಕ ಗ್ರಾಮಕ್ಕೆ ಸರಿಯಾಗಿ ಬಸ್ ಸೌಕರ್ಯವಿಲ್ಲ. ಕೊರೊನಾ ನಂತರ ವಿವಿಧ ಕಾರಣಗಳನ್ನು ನೀಡಿ ಮೊದಲಿದ್ದ ಮಾರ್ಗಗಳ ಬಸ್‌ಗಳ ಕಾರ್ಯಾಚರಣೆ ನಡೆಯುತ್ತಿಲ್ಲ. ವಿದ್ಯಾರ್ಥಿಗಳು ಅನೇಕ ಬಾರಿ ಯರಗಟ್ಟಿ ಹಾಗೂ ಬೈಲಹೊಂಗಲ ಎನ್‌ಡಬ್ಲ್ಯುಕೆಆರ್‌ಟಿಸಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ದೂರಲಾಗುತ್ತಿದೆ.

ಶಾಲಾ–ಕಾಲೇಜುಗಳ ವಿದ್ಯಾರ್ಥಿಗಳು ಬೆಳಿಗ್ಗೆ ಬರುವ ಒಂದೆರಡು ಬಸ್‌ಗಳನ್ನೆ ಅವಲಂಬಿಸುವಂತಾಗಿದೆ. ಜಾಗ ಸಾಲದೆ ಅನಿವಾರ್ಯವಾಗಿ ಫುಟ್‌ಬೋರ್ಡ್‌ನಲ್ಲಿ ನಿಂತು ಅಥವಾ ಜೋತುಬಿದ್ದು ವಿದ್ಯಾರ್ಥಿಗಳು ಸಂಚರಿಸುತ್ತಿದ್ದಾರೆ. ಇದು ಆತಂಕಕ್ಕೆ ಕಾರಣವಾಗುತ್ತಿದೆ. ಕೋವಿಡ್ ಸಂದರ್ಭದಲ್ಲಿ ಅಂತರ ಕಾಯ್ದುಕೊಳ್ಳುವುದು ಕೂಡ ಸಾಧ್ಯವಾಗದಿರುವುದು ಕಂಡುಬರುತ್ತಿದೆ.

ADVERTISEMENT

‘ತಲ್ಲೂರ ಹಾಗೂ ಆಲದಕಟ್ಟಿ ಗ್ರಾಮಗಳಿಂದ ಬೈಲಹೊಂಗಲ ಮತ್ತು ಯರಗಟ್ಟಿ ಕಾಲೇಜುಗಳಿಗೆ ಹೋಗಲು ಬೆಳಿಗ್ಗೆ ಹಾಗೂ ಮರಳಲು ಸಂಜೆ ಹೆಚ್ಚಿನ ಬಸ್ ವ್ಯವಸ್ಥೆ ಇಲ್ಲ. ಇದರಿಂದ ಅವರು ತೊಂದರೆ ಅನುಭವಿಸುತ್ತಿದ್ದಾರೆ. ಸಂಬಂಧಿಸಿದವರು ಕೂಡಲೇ ಸಮಸ್ಯೆ ಪರಿಹರಿಸಬೇಕು’ ಎಂದು ಆಲದಕಟ್ಟಿ ಗ್ರಾಮ ಪಂಚಾಯ್ತಿ ಸದಸ್ಯ ಅಶೋಕ ಚಿಕ್ಕೊಪ್ಪ ಒತ್ತಾಯಿಸಿದರು.

ಬಸ್ ತಪ್ಪಿದರೆ ತರಗತಿಗೆ ಹಾಜರಾಗಲು ಆಗುವುದಿಲ್ಲವೆಂದು ಕೆಲವು ವಿದ್ಯಾರ್ಥಿಗಳು ಅನಿವಾರ್ಯವಾಗಿ ಖಾಸಗಿ ವಾಹನಗಳನ್ನು ಅವಲಂಬಿಸುವಂತಾಗಿದೆ. ಹೆಚ್ಚಿನ ಬಸ್‌ಗಳನ್ನು ಸಕಾಲಕ್ಕೆ ಈ ಮಾರ್ಗದಲ್ಲಿ ಓಡಿಸಬೇಕು ಎನ್ನುವುದು ಜನರ ಆಗ್ರಹವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.