ಬೆಳಗಾವಿ: ವಸತಿ ಯೋಜನೆಯಡಿ ಮಂಜೂರಾದ ಮನೆಗಳಿಗೆ ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸಿ ರಾಯಬಾಗ ತಾಲ್ಲೂಕಿನ ಶೇಡಬಾಳದ ಫಲಾನುಭವಿಗಳು ಇಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಕಚೇರಿಗೆ ಗುರುವಾರ ಮನವಿ ಸಲ್ಲಿಸಿದರು.
‘2016–17ನೇ ಸಾಲಿನಲ್ಲಿ ಮನೆಗಳ ಮಂಜೂರಾತಿಯಾಗಿದೆ. ಮೊದಲ ಕಂತಿನಲ್ಲಿ ಅಡಿಪಾಯ ಹಾಕಿದ್ದೆವು. ನಂತರದ ಕಂತಿನ ಹಣ ಬಂದಿಲ್ಲ. ಇದರಿಂದಾಗಿ ನಿರ್ಮಾಣ ಕಾರ್ಯ ಅರ್ಧಕ್ಕೆ ನಿಂತಿದೆ. 35ಕ್ಕೂ ಹೆಚ್ಚಿನ ಮನೆಗಳಿಗೆ ಸರ್ಕಾರದಿಂದ ಹಣ ಬಿಡುಗಡೆಯಾಗಿಲ್ಲ. ಎರಡು ವರ್ಷವಾದರೂ ಸ್ಥಳೀಯ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಮನೆ ಇಲ್ಲದೆ ನಾವು ‘ಶೆಡ್’ಗಳಲ್ಲಿ ಜೀವನ ನಡೆಸುತ್ತಿದ್ದೇವೆ. ನಿರಂತರ ಮಳೆಯಿಂದಾಗಿ ಶೆಡ್ಗಳಿಗೆ ಹಾನಿಯಾಗಿದೆ. ಈಗ ದೇವಸ್ಥಾನದಲ್ಲಿ ಇದ್ದೇವೆ’ ಎಂದು ತಿಳಿಸಿದರು.
‘ಜಿಲ್ಲಾಧಿಕಾರಿ ಇತ್ತ ಗಮನಹರಿಸಿ, ನಿರಾಶ್ರಿತರಾದ ನಮಗೆ ಅನುಕೂಲ ಮಾಡಿಕೊಡಬೇಕು’ ಎಂದು ಕೋರಿದರು.
ಶೀಲಾ ನಾಯಕ, ಸುಜಾತಾ ಕಟಗೇರಿ, ಸಂಗೀತಾ ಮಡ್ಡಿ, ಭಾರತಿ ಮಾಂದೆ, ಸೋನಾಬಾಯಿ ಬಡಚಿ, ಸತ್ಯವ್ವ ನರಸೈಯಿ, ರೇಖಾ ನರಸೈಯಿ, ಇಲಾಸಮತಿ ನರಸೈಯಿ, ಮಾದೇವಿ ನರಸೈಯಿ, ಸವಿತಾ ಕೆಂಪವಾಡೆ, ಸುಂದರಬಾಯಿ ಮಲ್ಲನ್ಮವರ, ಲಕ್ಷ್ಮಿಬಾಯಿ ನರಸನ್ಮವರ, ಸಂದರಬಾಯಿ ಕುಸನಾಳ, ಎಸ್. ಕುಸನಾಡಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.