
ಕಾಗವಾಡ: ಮತಕ್ಷೇತ್ರಕ್ಕೆ ಮುಖ್ಯಮಂತ್ರಿಗಳು ₹50 ಕೋಟಿ ವಿಶೇಷ ಅನುದಾನ ನೀಡಿದ್ದು, ಶಿಕ್ಷಣ, ಆರೋಗ್ಯ, ನೀರಾವರಿ ಮತ್ತು ಮೂಲ ಸೌಲಭ್ಯಗಳ ಅಭಿವೃದ್ಧಿ ಜೊತೆಗೆ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ಕೊಡಲಾಗುತ್ತಿದೆ ಎಂದು ಶಾಸಕ ರಾಜು ಕಾಗೆ ಹೇಳಿದರು.
ತಾಲ್ಲೂಕಿನ ಮಂಗಸೂಳಿ ಮಲಯ್ಯ ದೇವಸ್ಥಾನದ ಬಳಿ ಉದ್ಯಾನದ ಅಭಿವೃದ್ಧಿಗಾಗಿ ಅರಣ್ಯ ಇಲಾಖೆಯ ₹1ಕೋಟಿ ಅನುದಾನದ ಪೈಕಿ ₹60 ಲಕ್ಷ ಅನುದಾನದ ಕಾಮಗಾರಿಗೆ ಮತ್ತು ಉಗಾರ ಖುರ್ದ ಗ್ರಾಮದಲ್ಲಿ ₹40 ಲಕ್ಷ ಅನುದಾನದ ಭಗತಸಿಂಗ್ ಸರ್ಕಲ್ ರಸ್ತೆ ಮತ್ತು ₹35 ಲಕ್ಷ ಅನುದಾನದ ಸೀಮಿಲಕ್ಷ್ಮಿ ಗುಡಿಯಿಂದ ಮಂಗಸೂಳಿ ರಸ್ತೆ ಡಾಂಬರೀಕರಣಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಲ್ಲಯ್ಯನ ದೇವಸ್ಥಾನದ ಬಳಿ ಸುಂದರ ಉದ್ಯಾನವನ್ನು ಅಭಿವೃದ್ಧಿ ಪಡಿಸಲಾಗುತ್ತಿದ್ದು ಇನ್ನೂ ₹40 ಲಕ್ಷ ಅನುದಾನ ಬರಬೇಕಿದೆ. ಅದು ಬಂದ ಮೇಲೆ ಸುಂದರ ಉದ್ಯಾನವನ ಪೂರ್ಣಗೊಳ್ಳಲಿದೆ. ಜೊತೆಗೆ ಇಲ್ಲಿರುವ ಕೆರೆಯನ್ನು ತುಂಬಿ ಬೋಟಿಂಗ್ ವ್ಯವಸ್ಥೆ ಕೂಡಾ ಮಾಡಲಾಗುವುದು. ಇದರ ಜೊತೆಗೆ ಕಾಗವಾಡ, ಶೇಡಬಾಳ, ಲೋಕುರ ಗ್ರಾಮಗಳ ಒಟ್ಟು 6 ಕೆರೆ ತುಂಬುವ ಯೋಜನೆಗೆ ₹26 ಕೋಟಿ ಹಣ ಟೇಂಡರ್ ಪ್ರಕಿಯೆ ಮುಗಿದಿದ್ದು ಶೀಘ್ರದಲ್ಲೇ ಕಾಮಗಾರಿ ಕೈಗೊಳಲಾಗುವದು ಎಂದರು.
ಇಓ ವಿರಣ್ಣ ವಾಲಿ, ಭೀಮಗೊಂಡ, ಅರಣ್ಯಾಧಿಕಾರಿ ರಾಕೇಶ ಅರ್ಜುನವಾಡ, ಮುಖ್ಯಾಧಿಕಾರಿ ಮಹಾಂತೇಶ ಕವಲಾಪುರ, ಮಡಿವಾಳಪ್ಪ ಪಾಟೀಲ, ಎಂಜಿನಿಯರ್ ಸಂತೊಷ, ನಾಗರಾಜ, ಜಿ.ಪಂ. ಮಾಜಿ ಸದಸ್ಯ ರವಿಂದ್ರ ಪೂಜಾರಿ, ಮುಕುಂದ ಪೂಜಾರಿ,ಗ್ರಾ.ಪಂ. ಅಧ್ಯಕ್ಷ ಬಾಳು ಭಜಂತ್ರಿ, ಸಂಜಯ ತಳವಲಕರ,ಪಿಡಿಒ ಸಂಜಯ ಸೂರ್ಯವಂಶಿ ಸಮಿವುಲ್ಲಾ ಬಾರಗೀರ, ಶೇರಅಲಿ ಬಾರಗೀರ, ಎಚ್.ಎನ್. ನದಾಫ, ಮಹಾದೇವ ಕಟಗೇರಿ ಸೇರಿದಂತೆ ಅನೇಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.