ಸವದತ್ತಿ: ರೇಣುಕಾದೇವಿ ದರ್ಶನಕ್ಕೆ ಬಂದ ಅಣ್ಣಪ್ಪ ದಿವಟಗಿ ಮೇಲೆ ನಡೆದ ಹಲ್ಲೆಯನ್ನು ಶ್ರೀರಾಮ ಸೇನೆ ಖಂಡಿಸುತ್ತದೆ. ಘಟನೆಯಲ್ಲಿ ಭಾಗಿಯಾದ ಹೋಮ್ಗಾರ್ಡ ಮತ್ತು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಬೇಕೆಂದು ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ ಮುತಾಲಿಕ ಆಗ್ರಹಿಸಿದರು.
ಯಲ್ಲಮ್ಮ ದೇವಸ್ಥಾನದಲ್ಲಿ ನಡೆದ ಘಟನೆ ಕುರಿತು ಶುಕ್ರವಾರ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪಿಐ ಧರ್ಮಾಕರ ಧರ್ಮಟ್ಟಿ ಅವರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.
ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳದಿದ್ದರೆ ಕಾರ್ಯಕರ್ತರಿಗೆ ‘ಸವದತ್ತಿ ಚಲೋ’ ಕರೆ ನೀಡಬೇಕಾದೀತು. ಈಗಾಗಲೇ ಕಾನೂನು ರೀತಿ ಹೋರಾಟ ನಡೆಸಿದ್ದೇವೆ. ತಪ್ಪಿದ್ದವರಿಗೆ ಶಿಕ್ಷೆ ನೀಡಿರಿ. ಇಂತಹ ಸಿಬ್ಬಂದಿಯಿಂದ ಇಡೀ ಇಲಾಖೆಗೆ ಕೆಟ್ಟ ಹೆಸರು ಬರುತ್ತದೆ. ಕೂಡಲೇ ಇವರ ವಿರುದ್ಧ ಕ್ರಮಕೈಗೊಳ್ಳಿ ಎಂದು ಅವರು ಒತ್ತಾಯಿಸಿದರು.
ದೂರುದಾರ ಅಣ್ಣಪ್ಪ ಮಾತನಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಪಿಐ ಧರ್ಮಾಕರ ಧರ್ಮಟ್ಟಿ, ‘ಈ ಘಟನೆ ಕುರಿತು ಇಲಾಖೆಗೂ ವಿಷಾದವಿದೆ. ದೇವಸ್ಥಾನಕ್ಕೆ ಬರುವ ಜನ ಒಂದೇ ರೀತಿ ಇರುವದಿಲ್ಲ. ಶಾಂತಿ ಸುವ್ಯವಸ್ಥೆ ಪೊಲೀಸ್ ಇಲಾಖೆಯ ಆದ್ಯತೆ. ಈ ಸಿಬ್ಬಂದಿಯನ್ನು ಬೇರೆಡೆ ನಿಯೋಜಿಸಲಾಗಿದೆ. ಇಲಾಖೆಯಲ್ಲಿನ ಮಾಹಿತಿ ಮೇರೆಗೆ ತನಿಖೆ ನಡೆದಿದ್ದು ಮೇಲಧಿಕಾರಿಗೆ ವರದಿ ಸಲ್ಲಿಸಲಾಗುವುದು’ ಎಂದರು.
ಈ ವೇಳೆ ಶ್ರೀರಾಮ ಸೇನೆ ಕಾರ್ಯಕರ್ತರು ಹಾಗೂ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.