ಬೆಳಗಾವಿ: ಇಲ್ಲಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಹಾಗೂ ಚಲನಚಿತ್ರ ನಿರ್ಮಾಪಕ ಆನಂದ ಅಪ್ಪುಗೋಳ ಒಡೆತನದಲ್ಲಿರುವ ₹ 31.35 ಕೋಟಿ ಮೌಲ್ಯದ ಆಸ್ತಿಯನ್ನು ತನ್ನ ಸುಪರ್ದಿಗೆ ಪಡೆದಿರುವುದಾಗಿ ಜಾರಿ ನಿರ್ದೇಶನಾಲಯ ಗುರುವಾರ ತಿಳಿಸಿದೆ.
‘ಅಪ್ಪುಗೋಳ ಅವರ ಹನುಮಾನ್ ನಗರದಲ್ಲಿನ ಬಂಗಲೆ, ಬಾಕ್ಸೈಟ್ ರಸ್ತೆಯಲ್ಲಿನ ಜಾಗ, ತಾಲ್ಲೂಕಿನ ಬಿ.ಕೆ. ಬಾಳೇಕುಂದ್ರಿಯಲ್ಲಿನ ಮನೆ ಮತ್ತು ನೆಹರೂ ನಗರದಲ್ಲಿನ ಕಚೇರಿ ಹಾಗೂ ಅವರ ಹೆಸರಿನಲ್ಲಿನ ಬ್ಯಾಂಕ್ ಖಾತೆಗಳನ್ನು ಪಡೆದುಕೊಳ್ಳಲಾಗಿದೆ. ಪಿಎಂಎಲ್ಎ (ಅಕ್ರಮ ಹಣ ವರ್ಗಾವಣೆ ನಿಯಂತ್ರಣ ಕಾಯ್ದೆ) 2002ರ ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ಇ.ಡಿ.ಯು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಫೋಟೊಗಳ ಸಹಿತ ಟ್ವೀಟ್ ಮಾಡಿದೆ.
ಈ ಸೊಸೈಟಿಗೆ ಸಂಬಂಧಿಸಿದ ನಿವೇಶನ, ಖಾಲಿ ಜಾಗ, ಜಮೀನು, ಕಟ್ಟಡ ಮೊದಲಾದ ಆಸ್ತಿಗಳನ್ನು ಇ.ಡಿ. ಅಧಿಕಾರಿಗಳು ಹೋದ ತಿಂಗಳು ಇಲ್ಲಿಗೆ ಬಂದು ಪರಿಶೀಲಿಸಿದ್ದರು. ಗ್ರಾಹಕರಿಂದ ಠೇವಣಿಯಾಗಿ ಪಡೆದ ಕೋಟ್ಯಂತರ ರೂಪಾಯಿಯನ್ನು ವಂಚಿಸಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದ ತನಿಖೆಯನ್ನು ನಿರ್ದೇಶನಾಲಯ ನಡೆಸುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.