
ಮೂಡಲಗಿ: ಕಬ್ಬಿನ ಬೆಲೆ ₹3,300 ನಿಗದಿಗೊಳಿಸಿರುವ ಸರ್ಕಾರದ ಆದೇಶ ಪತ್ರವನ್ನು ಸಕ್ಕರೆ ಸಚಿವ ಶಿವಾನಂದ ಪಾಟೀಲ ಅವರು ರೈತ ಮುಖಂಡರಿಗೆ ನೀಡುತ್ತಿದ್ದಂತೆ ಸೇರಿದ ಸಾವಿರಾರು ಸಂಖ್ಯೆಯ ರೈತರು ಹಸಿರು ಟವಲ್ ತಿರುಗಿಸುತ್ತ, ಕೂಗು, ಸಿಳ್ಳೆ ಹಾಕಿ ಸಂಭ್ರಮಿಸಿದರು.
ರೈತರ ಹೋರಾಟವು ಯಶಸ್ಸಿಯಾಗಿದ್ದಕ್ಕೆ ವಿಜಯೋತ್ಸವದಲ್ಲಿ ಭಾಗಿಯಾಗಲು ಆಗಮಿಸಿದ್ದ ಮುಗಳಖೋಡ ಮಠದ ಮುರುಘರಾಜೇಂದ್ರ ಸ್ವಾಮೀಜಿಯವರು ಸಚಿವ ಶಿವಾನಂದ ಪಾಟೀಲ ಅವರಿಗೆ ಮತ್ತು ರೈತ ಮುಖಂಡರ ಮೇಲೆ ಆಶೀರ್ವಾದ ರೂಪದಲ್ಲಿ ಹೂಮಳೆಗೈದರು.
ಈ ಸಂದರ್ಭದಲ್ಲಿ ಮುಗಳಖೋಡದ ಶ್ರೀಗಳು ಮಾತನಾಡಿ ‘ಕಳೆದ 9 ದಿನಗಳ ವರೆಗೆ ಶಾಂತ ರೀತಿಯಿಂದ ನಡೆಸಿದ ರೈತರ ಹೋರಾಟದ ಫಲವಾಗಿ ಸರ್ಕಾರವು ಸಿಹಿ ಸುದ್ದಿಯನ್ನು ಕೊಟ್ಟಿದೆ. ಸರ್ಕಾರವನ್ನು ಮತ್ತು ಮುಖ್ಯಮಂತ್ರಿಗಳನ್ನು ಅಭಿನಂದಿಸುತ್ತೇನೆ’ ಎಂದರು.
ರೈತರೆಲ್ಲ ದೈವ ಭಕ್ತರಾಗಿದ್ದರಿಂದ ಬೆಳೆಯಿಂದ ಪಡೆಯುವ ಹೆಚ್ಚಿನ ಲಾಭವನ್ನು ಜಾತ್ರೆ, ಹಬ್ಬಗಳಿಗೆ, ದೇವಸ್ಥಾನಗಳ ಕಟ್ಟಲಿಕ್ಕೆ ದೇಣಿಗೆ, ಮಠಮಾನ್ಯಳಿಗೆ ಕೊಡುವ ಮೂಲಕ ಧರ್ಮದ ಕಾರ್ಯಗಳಿಗೆ ವ್ಯಯ ಮಾಡುತ್ತಾರೆ ಹೊರತು ದುಡ್ಡನ್ನು ದುರಪಯೋಗ ಮಾಡಿಕೊಳ್ಳುವುದಿಲ್ಲ ಎನ್ನುವ ವಿಶ್ವಾಸ ನನಗಿದೆ ಎಂದರು.
ಹೋರಾಟದ ಮುಂದಾಳತ್ವವನ್ನು ವಹಿಸಿರುವ ಆಧ್ಯಾತ್ಮಿಕ ಶಕ್ತಿಯಾಗಿ ಶಶಿಕಾಂತ ಗುರೂಜಿ ಹಾಗೂ ಸಂಘಟನೆಯ ಶಕ್ತಿಯಾಗಿ ರೈತ ಸಂಘದ ರಾಜ್ಯಾಧ್ಯಕ್ಷ ಚುನ್ನಪ್ಪ ಪೂಜಾರಿ ಈ ಇಬ್ಬರು ನಾಯಕರ ಶಿಸ್ತುಬದ್ಧ ಸಂಘಟನೆ, ಶ್ರದ್ಧೆ ಹಾಗೂ ಪ್ರಾಮಾಣಿಕತೆಯಿಂದಾಗಿ ಲಕ್ಷಾಂತರ ರೈತರ ಸಂಘಟನೆ ಮತ್ತು ಹೋರಾಟಕ್ಕೆ ಶಕ್ತಿ ತುಂಬಿದೆ ಎಂದು ಶ್ಲಾಘಿಸಿದರು.
ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಮತ್ತು ರಾಷ್ಟ್ರೀಯ ಮಳೆಯಾಶ್ರಿತ ಪ್ರದೇಶ ಪ್ರಾಧಿಕಾರದ (NRAA) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಶೋಕ ದಳವಾಯಿ ಮಾತನಾಡಿ, ಎರಡು ದಿನಗಳ ಹಿಂದೆ ಸಚಿವ ಶಿವಾನಂದ ಪಾಟೀಲ ಅವರು ರೈತರ ಪ್ರತಿಭಟನೆ ಸ್ಥಳಕ್ಕೆ ಬಂದು ತಮ್ಮಿಂದ ಎರಡು ದಿನ ಗಡವು ಪಡೆದುಕೊಂಡು ಅವರು ಮಾತು ಕೊಟ್ಟಂತೆ ಕಬ್ಬಿಗೆ ಬೆಲೆ ನಿರ್ಧಾರ ಮಾಡಿ ನಿಮ್ಮ ವಿಶ್ವಾಸವನ್ನು ಉಳಿಸಿಕೊಂಡಿದ್ದಾರೆ ಎಂದರು.
ಸಚಿವರು ಮುಖ್ಯಮಂತ್ರಿಗಳಿಗೆ ಕಬ್ಬು ಬೆಳೆಗಾರರ ಕಷ್ಟವನ್ನು ಮನವರಿಕೆ ಮಾಡಿಕೊಟ್ಟು ಕಬ್ಬಿಗೆ ಬೆಲೆ ನಿಗದಿಯಾಗುವಲ್ಲಿ ಅವರ ಪರಿಶ್ರಮವು ಮೆಚ್ಚುವಂತದ್ದು. ಮುಖ್ಯಮಂತ್ರಿಗಳೂ ರೈತರ ಪರವಾಗಿ ನಿರ್ಧಾರ ತೆಗದುಕೊಳ್ಳುವ ಮೂಲಕ ಸರ್ಕಾರವು ಸಹ ರೈತ ಕಾಯತ್ತಿದೆ ಎಂದರು.
ಜಿಲ್ಲಾಧಿಕಾರಿ ಮೊಹಮ್ಮದ ರೋಶನ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ ಮಾತನಾಡಿದರು.
ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರಬೂರ ಶಾಂತಕುಮಾರ, ರೈತ ಮುಖಂಡರಾದ ಪ್ರಕಾಶ ನಾಯ್ಕ, ರವಿಕುಮಾರ, ಸುಭಾಷ ಸುಬೇದಾರ, ಚಿಕ್ಕೋಡಿಯ ಮಲ್ಲಪ್ಪ ಅಂಗಡಿ, ತುಕ್ಕಾನಟ್ಟಿಯ ಕುಮಾರ ಮರ್ದಿ, ನಿರಲಕೋಡಿಯ ಕೆಂಪಣ್ಣ ಅಂಗಡಿ, ಹನಮಂತಣ್ಣ ಕಲ್ಲಾರ, ಮಂಜುನಾಥ ಪೂಜಾರಿ, ಶ್ರೀಶೈಲ್ ಅಂಗಡಿ, ಬಾಬಾಗೌಡ ಪಾಟೀಲ, ಸತ್ಯಪ್ಪಾ ವಲ್ಲಾಪೂರೆ, ಪದ್ಮಣ್ಣ ಉರಬಿ, ವಾಸು ಪಂಡ್ರೋಳಿ ಸೇರಿದಂತೆ ವಿವಿಧೆಡೆಯ ಬಂದಿದ್ದ ರೈತ ಮುಖಂಡರು ಭಾಗವಹಿಸಿದ್ದರು.
ಗುರ್ಲಾಪುರದಲ್ಲಿ ಮಾಡಿದ್ದ ರೈತರ ಹೋರಾಟ ಕೇಂದ್ರಕ್ಕೂ ಎಚ್ಚರಿಕೆ ಗಂಟೆ ಬಾರಿಸಿದೆ. ದಕ್ಷತೆಯಿಂದ ನಿಭಾಯಿಸಿದ ಅಧಿಕಾರಿಗಳನ್ನು ಅಭಿನಂದಿಸುತ್ತೇನೆಶಿವಾನಂದ ಪಾಟೀಲ ಸಕ್ಕರೆ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.