ADVERTISEMENT

ಬೆನಕಟ್ಟಿ: ವಿದ್ಯುತ್‌ ಪೂರೈಕೆಗೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2022, 15:41 IST
Last Updated 30 ಏಪ್ರಿಲ್ 2022, 15:41 IST
ಬೆನಕಟ್ಟಿಯಲ್ಲಿ ವಿದ್ಯುತ್‌ ಸಮರ್ಪಕ ಪೂರೈಕೆಗೆ ಆಗ್ರಹಿಸಿ ಉಪ ಕೇಂದ್ರದ ಬಳಿ ಶನಿವಾರ ಪ್ರತಿಭಟನೆ ನಡೆಸಿದರು
ಬೆನಕಟ್ಟಿಯಲ್ಲಿ ವಿದ್ಯುತ್‌ ಸಮರ್ಪಕ ಪೂರೈಕೆಗೆ ಆಗ್ರಹಿಸಿ ಉಪ ಕೇಂದ್ರದ ಬಳಿ ಶನಿವಾರ ಪ್ರತಿಭಟನೆ ನಡೆಸಿದರು   

ಬೆನಕಟ್ಟಿ: ಸಮರ್ಪಕವಾಗಿ ವಿದ್ಯುತ್‌ ಪೂರೈಸದಿರುವುದನ್ನು ಖಂಡಿಸಿ ರೈತರು ಇಲ್ಲಿನ 110 ಕೆ.ವಿ. ವಿದ್ಯುತ್‌ ಉಪ ಕೇಂದ್ರಕ್ಕೆ ಮುತ್ತಿಗೆ ಹಾಕಿ ಶನಿವಾರ ಪ್ರತಿಭಟನೆ ನಡೆಸಿದರು.

ಸಿಬ್ಬಂದಿಯಿಂದ ಸರಿಯಾಗಿ ಸ್ಪಂದನೆ ದೊರೆಯದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರದ ಕಚೇರಿಗೆ ಬೀಗ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

‘ಪ್ರತಿಭಟನೆ ನಡೆಸುತ್ತಿದ್ದವರ ಫೋಟೊ ಕಳುಹಿಸಿ, ಅವರ ಮೇಲೆ ಪ್ರಕರಣ ದಾಖಲಿಸಲು ಕ್ರಮ ವಹಿಸಲಾಗುವುದು’ ಎಂದು ಕಿರಿಯ ಎಂಜಿನಿಯರ್‌ ಮೊಬೈಲ್‌ ಫೋನ್‌ನಲ್ಲಿ ಸಿಬ್ಬಂದಿಗೆ ಸೂಚಿಸಿದ್ದು ರೈತರನ್ನು ಕೆರಳಿಸಿತು. ಕ್ರಮೇಣ ಮತ್ತಷ್ಟು ರೈತರು ಬಂದು ಸೇರಿದರು.

ADVERTISEMENT

ಮುಖಂಡ ರುದ್ರಪ್ಪ ರೇವನ್ನವರ ಮೊದಲಾದವರು ಕಿರಿಯ ಎಂಜಿನಿಯರ್‌ ಸ್ಥಳಕ್ಕೆ ಭೇಟಿ ನೀಡಬೇಕು ಎಂದು ಪಟ್ಟು ಹಿಡಿದರು.

ಮುನವಳ್ಳಿಯ ಎಸ್‌ಒ ಭಜಂತ್ರಿ ಸ್ಥಳಕ್ಕೆ ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸಿದರು. ‘ವಿದ್ಯಾರ್ಥಿಗಳಿಗೆ ಪರೀಕ್ಷೆಗಳಿವೆ. ಅವರು ಓದಿಕೊಳ್ಳಬೇಕಾಗುತ್ತದೆ. ಬೆಳೆ ಉಳಿಸಿಕೊಳ್ಳುವುದಕ್ಕೂ ಪರದಾಡುತ್ತಿದ್ದೇವೆ. ವಿದ್ಯುತ್‌ ಪೂರೈಕೆ ಇಲ್ಲದಿದ್ದರರೆ ತೀವ್ರ ತೊಂದರೆಯಾಗುತ್ತದೆ’ ಎಂದು ರೈತರು ತಿಳಿಸಿದರು. ಬಳಿಕ, ‘ಎಇಇ ಅವರನ್ನು ಕರೆಸಿ ಸಮಸ್ಯೆ ಬಗೆಹರಿಸಲಾಗುವುದು’ ಎಂದು ಯರಗಟ್ಟಿ ಪೊಲೀಸರು ನೀಡಿದ ಭರವಸೆ ಮೇರೆಗೆ ರೈತರು ಪ್ರತಿಭಟನೆ ವಾಪಸ್ ಪಡೆದರು.

ಪುಂಡಲೀಕ ಕುರಿ, ಶ್ರೀಶೈಲ ಲಕ್ಕಣ್ಣವರ, ಈರಯ್ಯ ಹಿರೇಮಠ, ಮುದಕ್ಕಪ್ಪ ಗುರವ್ವಗೋಳ, ರುದ್ರಪ್ಪ ಚೂರಿ, ಫಕೀರಪ್ಪ ಟಪಾಲ, ನಾಗಪ್ಪ ರೈನಾಪೂರ, ಲಕ್ಷ್ಮಣ ಕುರಿ, ಶಿವಪ್ಪ ವೀರಶೆಟ್ಟಿ, ಪಾಂಡು ಕಾಡವ್ವಗೋಳ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.