ADVERTISEMENT

ಖರೀದಿ ಕೇಂದ್ರ ಆರಂಭಿಸಲು ರೈತರ ಪ್ರತಿಭಟನೆ

ಗೋವಿನಜೋಳ, ಜೋಳ ಬೆಲೆ ಕುಸಿತ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2020, 13:52 IST
Last Updated 16 ಮಾರ್ಚ್ 2020, 13:52 IST
ಸವದತ್ತಿಯಲ್ಲಿ ಗೋವಿನ ಜೋಳ ಹಾಗೂ ಜೋಳವನ್ನು ಬೆಂಬಲ ಬೆಲೆಯಲ್ಲಿ ಖರೀದಿ ಮಾಡುವಂತೆ ಆಗ್ರಹಿಸಿ ರೈತರು ಸೋಮವಾರ ರಸ್ತೆತಡೆ ನಡೆಸಿದರು
ಸವದತ್ತಿಯಲ್ಲಿ ಗೋವಿನ ಜೋಳ ಹಾಗೂ ಜೋಳವನ್ನು ಬೆಂಬಲ ಬೆಲೆಯಲ್ಲಿ ಖರೀದಿ ಮಾಡುವಂತೆ ಆಗ್ರಹಿಸಿ ರೈತರು ಸೋಮವಾರ ರಸ್ತೆತಡೆ ನಡೆಸಿದರು   

ಸವದತ್ತಿ: ‘ಗೋವಿನಜೋಳ ಮತ್ತು ಜೋಳ ಬೆಲೆ ಕುಸಿತದಿಂದ ನಾವು ಬಹಳ ನಷ್ಟ ಅನುಭವಿಸುತ್ತಿದ್ದೇವೆ. ಹೀಗಾಗಿ, ಸರ್ಕಾರದಿಂದ ಕೂಡಲೇ ಬೆಂಬಲ ಬೆಲೆಯಲ್ಲಿ ಖರೀದಿ ಕೇಂದ್ರ ಆರಂಭಿಸಬೇಕು’ ಎಂದು ಆಗ್ರಹಿಸಿ ತಾಲ್ಲೂಕಿನ ಹಂಚಿನಾಳ, ಉಗರಗೋಳ, ಹಿರೇಕುಂಬಿ, ಹರಳಕಟ್ಟಿ, ಆಚಮಟ್ಟಿ, ಕಗದಾಳ ಮೊದಲಾದ ಗ್ರಾಮಗಳ ರೈತರು ಸೋಮವಾರ ಇಲ್ಲಿನ ಎಪಿಎಂಸಿ ವೃತ್ತದಲ್ಲಿ ರಸ್ತೆ ತಡೆದು ಪ್ರತಿಭಟಿಸಿದರು.

ಸ್ಥಳಕ್ಕೆ ಬಂದ ತಹಶೀಲ್ದಾರ್‌ ಪ್ರಶಾಂತ ಪಾಟೀಲ ಅವರನ್ನು ತರಾಟೆಗೆ ತೆಗೆದುಕೊಂಡರು.

‘ನಿನ್ನೆ ₹ 1,200 ಇದ್ದ ದರ ಈಗ ₹ 900ಕ್ಕೆ ಕುಸಿದಿದೆ. ನಾಳೆ ಏನಾಗುವುದೋ ಗೊತ್ತಿಲ್ಲ. ನಮ್ಮ ಗೋಳನ್ನು ಹೇಳುವುದಾದರೂ ಯಾರಿಗೆ? ಸರ್ಕಾರ ಇತ್ತ ಗಮನಹರಿಸುತ್ತಿಲ್ಲ. ಸ್ವತಃ ಸರ್ಕಾರವೇ ರೈತರ ಕತ್ತು ಹಿಸುಕುತ್ತಿದೆ. ವಿಷ ಸೇವಿಸಿ ಸತ್ತರೂ ಕೇಳುವುದಿಲ್ಲ’ ಎಂದು ಹಂಚಿನಾಳ ಗ್ರಾಮದ ರೈತ ಪಕೀರಗೌಡ ಪಾಟೀಲ ಆಳುತ್ತಲೇ ಆಕ್ರೋಶ ವ್ಯಕ್ತ‍ಪಡಿಸಿದರು.

ADVERTISEMENT

ಪ್ರತಿಭಟನೆಗೆ ಬೆಂಬಲ ನೀಡಿದ ರಾಷ್ಟ್ರೀಯ ಬಸವದಳದ ಗೌರವಾಧ್ಯಕ್ಷ ಆನಂದ ಚೋಪ್ರಾ ಮಾತನಾಡಿ, ‘ರೈತನ ಬೆಳೆ ಬಂದು 5 ತಿಂಗಳುಗಳು ಕಳೆದಿವೆ. ಕೇಂದ್ರ ಸರ್ಕಾರ ಬೆಂಬಲ ಬೆಲೆ ನಿಗದಿ ಮಾಡಿದೆ. ರಾಜ್ಯ ಸರ್ಕಾರ ಖರೀದಿ ಮಾಡಬೇಕಿದೆ. ಅತಿವೃಷ್ಟಿ ಹಾಗೂ ಬೆಳೆ ಹಾನಿಯಿಂದ ರೈತರು ಕಂಗಾಲಾಗಿದ್ದಾರೆ. ಅಳಿದುಳಿದದ್ದನ್ನು ಮಾರುಕಟ್ಟೆಗೆ ತಂದರೆ ಬೆಂಬಲ ಬೆಲೆ ಖರೀದಿ ಕೇಂದ್ರಗಳಿಲ್ಲ. ಜಿಲ್ಲಾಧಿಕಾರಿ ಕ್ರಮ ತೆಗೆದುಕೊಳ್ಳುತ್ತಿಲ್ಲ. ಮೂರು ಬಾರಿ ಮನವಿ ಸಲ್ಲಿಸಿದರೂ ಸ್ಪಂದಿಸುತ್ತಿಲ್ಲ’ ಎಂದು ದೂರಿದರು.

ತಾಲ್ಲೂಕಿನಾದ್ಯಂತ ಕೂಡಲೇ 10 ಖರೀದಿ ಕೇಂದ್ರಗಳನ್ನು ತೆರೆಯಬೇಕು ಎಂದು ಒತ್ತಾಯಿಸಿದರು.

ಮೂರು ತಾಸುಗಳವರೆಗೆ ರಸ್ತೆತಡೆ ನಡೆಸಿದರು. ಬಳಿಕ ತಹಶೀಲ್ದಾರ್‌ ಕಚೇರಿಯಲ್ಲಿ ಸಂಜೆವರೆಗೂ ಇದ್ದರು. ‘ಜಿಲ್ಲಾಧಿಕಾರಿಯಿಂದ ಯಾವುದೇ ಸೂಚನೆ ಬರಲಿಲ್ಲ. ಹೀಗಾಗಿ, ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದ್ದೇವೆ. ಮುಂದೆಯೂ ಕ್ರಮ ವಹಿಸದಿದ್ದಲ್ಲಿ ಹೋರಾಟ ತೀವ್ರಗೊಳಿಸಲಾಗುವುದು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.