
ಮೂಡಲಗಿ: ತಾಲ್ಲೂಕಿನ ಗುರ್ಲಾಪುರ ಕ್ರಾಸ್ನಲ್ಲಿ ಕಬ್ಬಿನ ಬೆಲೆಗಾಗಿ ರೈತರು ನಡೆಸಿದ ತೀವ್ರ ಸ್ವರೂಪದ ಹೋರಾಟ ಸರ್ಕಾರ ಹಾಗೂ ಕಾರ್ಖಾನೆಗಳ ಕಿವಿ ಹಿಂಡುವಲ್ಲಿ ಯಶಸ್ವಿಯಾಯಿತು. ಈ ಹೋರಾಟದ ಮೂಲಕ ಗುರ್ಲಾಪುರದ ಹೆಸರು ದೇಶದಾದ್ಯಂತ ಪಸರಿಸಿತು. ಆ ಮೂಲಕ ಸಣ್ಣ ಹಳ್ಳಿ ರೈತಶಕ್ತಿ ಕೇಂದ್ರವಾಗಿ ಮಾರ್ಪಾಡಾಯಿತು.
ಅಹೋರಾತ್ರಿ 9 ದಿನದ ಹೋರಾಟದ ಫಲವಾಗಿ ಸರ್ಕಾರವು ಟನ್ ಕಬ್ಬಿಗೆ ₹3,300 ದರ ಘೋಷಿಸುವ ಮೂಲಕ ರೈತರ ಹೋರಾಟಕ್ಕೆ ಜಯ ಸಿಕ್ಕಿತು.
ಸರ್ಕಾರವು ರೈತ ಮುಖಂಡರನ್ನು ಚರ್ಚೆಗೆ ಬೆಂಗಳೂರಿಗೆ ಬರಲು ಹೇಳಿದ್ದರೂ ರೈತರು ನಮ್ಮ ಬೇಡಿಕೆಗೆ ಧರಣಿ ಸ್ಥಳದಲ್ಲಿಯೇ ಇತ್ಯರ್ಥವಾಗಬೇಕು ಎಂದು ಪಟ್ಟು ಹಿಡಿದರು. ಪರಿಣಾಮ ಸಚಿವರೇ ಘಟನಾ ಸ್ಥಳಕ್ಕೆ ಬಂದು ಆದೇಶ ಪ್ರತಿ ನೀಡಬೇಕಾಯಿತು.
ರೈತರ ಹೋರಾಟವು ಜಾತ್ಯತೀತ, ಧರ್ಮಾತೀತ, ಪಕ್ಷಾತೀತವಾಗಿ ನಡೆದಿದ್ದು ವಿಶೇಷ. ‘ಜನಪ್ರತಿನಿಧಿಗಳು, ರಾಜಕೀಯ ವ್ಯಕ್ತಿಗಳು ಅನ್ನದಾತನ ವೇದಿಕೆ ಬರಬೇಕಾದರೆ ರಾಜಕೀಯ ಬಿಟ್ಟು ಇಲ್ಲಿ ಬರಬೇಕು. ರಾಜಕೀಯ ಮಾತು ಮಾತಾಡೋದಿಲ್ಲ. ಕೇವಲ ರೈತರ ಕಬ್ಬಿನ ಬೆಲೆ ಬಗ್ಗೆ ಮಾತ್ರ ಮಾತನಾಡಬೇಕು’ ಎಂದು ಹೋರಾಟದ ನೇತೃತ್ವ ವಹಿಸಿದ್ದ ಶಶಿಕಾಂತ ಗುರೂಜಿ ತಾಕೀತು ಮಾಡುತ್ತಿದ್ದರು. ಇದರಿಂದ ರಾಜಕೀಯ ಒಂದಂಶವೂ ಸುಳಿಯದೆ ರೈತರ ಹೋರಾಟವು ಸ್ವಾಭಿಮಾನಿಗಳ ಧರಣಿಯಾಗಿ ಮುಂದುವರಿಯಿತು.
ವಿವಿಧ ಮಠಾಧೀಶರು, ಹಾಲಿ– ಮಾಜಿ ಕೆಲ ಶಾಸಕರು, ರಾಜಕೀಯ ಧುರೀಣರು, ವಕೀಲರು, ವಿದ್ಯಾರ್ಥಿಗಳು, ಕನ್ನಡಪರ ಹೋರಾಟಗಾರರು, ಮಾಜಿ ಸೈನಿಕರು ಕೂಡ ಇದರ ಭಾಗವಾದರು. ವ್ಯಾಪಾರಿಗಳು ಸ್ವಯಂ ಪ್ರೇರಣೆಯಿಂದ ಬಂದ್ ಮಾಡಿ ಹೋರಾಟಕ್ಕೆ ದೊಡ್ಡ ಶಕ್ತಿ ನೀಡಿದರು. ಕ್ರಾಂತಿಗೀತೆಗಳು ನಿರಂತರ ಮೊಳಗಿದವು.
ಸಣ್ಣ ಹಳ್ಳಿಯಲ್ಲಿ ಆರಂಭವಾದ ಈ ಹೋರಾಟ ಜನಾಂದೋಲನವಾಯಿತು. ದಶಕಗಳಿಂದ ಕಳೆಗುಂದಿದ್ದ ರೈತ ಹೋರಾಟದ ವೈಭವ ಮರುಕಳಿಸುವಂತೆ ಮಾಡಿತು.
ಜಾತ್ರೆ ಸ್ವರೂಪ ಪಡೆದ ಹೋರಾಟ
ಧರಣಿಗೆ ಬರುವ ಸಾವಿರಾರು ರೈತರಿಗೆ ನಿತ್ಯ ಅನ್ನದಾಸೋಹವೇ ಇಲ್ಲಿ ಏರ್ಪಟ್ಟಿತು. ಹಳ್ಳಿ ಹಳ್ಳಿಗಳಿಂದ ತಾಯಂದಿರು ಸಾವಿವಾರು ರೊಟ್ಟಿ ಚಪಾತಿ ತರಾವರಿ ಚಟ್ನಿಗಳು ತರಕಾರಿ ಗಂಟುಗಳನ್ನು ಹೊತ್ತು ತಂದು ರೈತರಿಗೆ ಬಡಿಸುತ್ತಿದ್ದರು. ಇದು ಹೋರಾಟವೋ ಜಾತ್ರೆಯೋ ಎಂಬಂತೆ ಭಾಸವಾಯಿತು. ‘ಗುರ್ಲಾಪುರ ಕ್ರಾಸ್ ರಸ್ತೆಯಲ್ಲಿ ಅಡುಗೆ ಮಾಡಲಿಕ್ಕೆ ಹಚ್ಚಿದ್ದ ಒಲೆ 10 ದಿನಗಳ ವರೆಗೆ ಆರಿರಲಿಲ್ಲ’ ಎಂದು ಉಸ್ತುವಾರಿ ವಹಿಸಿದ್ದ ಗುರ್ಲಾಪುರ ಹಿರಿಯರು ಪತ್ರಿಕೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.