
ಗೋಕಾಕ: ಇಲ್ಲಿನ ಘಟಪ್ರಭಾ ತೀರದಲ್ಲಿ ಪ್ರಪ್ರಥಮ ಬಾರಿಗೆ ಗೋಕಾಕ ನಾಡಿನಲ್ಲಿ ಶ್ರೀ ಸಾಯಿ ಸಮರ್ಥ್ ಫೌಂಡೇಷನ್ ವತಿಯಿಂದ ಸೋಮವಾರ ಕಾಶಿ ಮಾದರಿ ಗಂಗಾ ಆರತಿ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರು ಚಾಲನೆ ನೀಡಿದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಶ್ರೀ ಸಾಯಿ ಫೌಂಡೇಷನ್ ಅಧ್ಯಕ್ಷ ವರ್ತಕ ಅರುಣ ಸಾಲಳ್ಳಿ, ಭಾರತ ಸಾಕಷ್ಟು ಪುಣ್ಯ ಕ್ಷೇತ್ರಗಳು, ತೀರ್ಥ ಕ್ಷೇತ್ರಗಳಿಂದ ಕೂಡಿರುವ ನೆಲೆಬೀಡಾಗಿದೆ. ಅಂತಹ ಕ್ಷೇತ್ರಗಳಲ್ಲಿ ಉತ್ತರ ಕರ್ನಾಟಕದ ಘಟಪ್ರಭಾ, ಮಲಪ್ರಭಾ, ಕೃಷ್ಣಾ ನದಿಗಳು ಹರಿದಿವೆ. ಹರಿದ್ವಾರಕ್ಕೆ ಜೀವನದಲ್ಲಿ ಒಮ್ಮೆಯಾದರೂ ಭೇಟಿ ನೀಡಬೇಕೆಂಬ ಬಯಕೆಯನ್ನು ಜನರು ಇಟ್ಟಿಕೊಂಡಿರುವುದು ಸಹಜ. ಹೀಗಾಗಿ, ಪುಣ್ಯಕ್ಷೇತ್ರ ಕಾಶಿಯ ಗಂಗಾ ಆರತಿ ಮಾದರಿಯಲ್ಲಿ ಘಟಪ್ರಭಾ ನದಿ ತೀರದಲ್ಲಿ ಗಂಗಾ ಆರತಿ ಆಯೋಜಿಸಲಾಗಿದೆ ಎಂದು ವಿಶ್ಲೇಷಿಸಿದರು.
ವಾರಣಾಸಿಯಿಂದ ಆಗಮಿಸಿದ್ದ ವಿಶೇಷ ತಂಡ ನಡೆಸಿದ ಗಂಗಾ ಆರತಿ ಕಾರ್ಯಕ್ರಮವನ್ನು ಸಾರ್ವಜನಿಕರ ಪ್ರಶಂಸಿಸಿದರು.
ವೇದಿಕೆಯಲ್ಲಿ ಫೌಂಡೇಷನ್ ಪದಾಧಿಕಾರಿಗಳಾದ ಆನಂದ ಪಾಟೀಲ ಸಂಜು ಚಿಪ್ಪಲಕಟ್ಟಿ , ಶಾಂತಾ ಪಾಟೀಲ, ಅನುಪಾ ಕೌಶಿಕ್, ಕವಿತಾ ಬಾಡಗಂಡಿ, ಲಕ್ಷ್ಮಿ ಮುತ್ಯಾಗೋಳ್, ಭಾರತೀ ಕೊಳವಿ ಪಾಲ್ಗೊಂಡಿದ್ದರು. ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತಾದಿಗಳು ಗಂಗಾ ಆರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪುಳಕಿತರಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.