ADVERTISEMENT

‘ಅಲ್ಪಮತಕ್ಕೆ ಕುಸಿದ ಸರ್ಕಾರ; ಸದನದಲ್ಲಿ ಸಾಬೀತಾಗಲಿ’

​ಪ್ರಜಾವಾಣಿ ವಾರ್ತೆ
Published 6 ಜುಲೈ 2019, 15:28 IST
Last Updated 6 ಜುಲೈ 2019, 15:28 IST

ಬೆಳಗಾವಿ: ‘ಸರ್ಕಾರ ಅಲ್ಪಮತಕ್ಕೆ ಕುಸಿದಿದೆಯೋ ಇಲ್ಲವೋ ಎನ್ನುವುದು ವಿಧಾನಸಭೆಯ ಸದನದಲ್ಲಿ ಸಾಬೀತಾಗಬೇಕು. ಇದೇ ತಿಂಗಳ 12ರಂದು ಅಧಿವೇಶನ ನಡೆಯಲಿದ್ದು, ಅಲ್ಲಿ ಸರ್ಕಾರದ ಭವಿಷ್ಯ ಗೊತ್ತಾಗಲಿದೆ’ ಎಂದು ಸಚಿವ ಸತೀಶ ಜಾರಕಿಹೊಳಿ ಪ್ರತಿಕ್ರಿಯಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ರಾಜೀನಾಮೆ ಪ್ರಹಸನವನ್ನು ಕಳೆದ ಒಂದು ವರ್ಷದಿಂದ ಹುಲಿ ಬಂತು ಹುಲಿ... ಎನ್ನುವಂತೆ ನೋಡಿದ್ದೇವೆ. ವಿಧಾನಸಭಾಧ್ಯಕ್ಷ ರಮೇಶ್‌ಕುಮಾರ್‌ ಅವರು ರಾಜೀನಾಮೆ ನೀಡಿರುವುದನ್ನು ಅಧಿಕೃತಗೊಳಿಸಿದ ನಂತರವಷ್ಟೇ ನಿಜವಾಗಲಿದೆ’ ಎಂದರು.

‘ಹಾಗೊಂದು ವೇಳೆ 13 ಜನ ಶಾಸಕರು ರಾಜೀನಾಮೆ ನೀಡಿದ್ದೇ ನಿಜವಾಗಿದ್ದರೂ ತಕ್ಷಣ ಸರ್ಕಾರ ಬಿದ್ದುಹೋಗುವುದಿಲ್ಲ. ಇನ್ನೂ ಸಮಯ ಇದೆ. ಸರ್ಕಾರವನ್ನು ವಿಸರ್ಜನೆ ಮಾಡಬೇಕೋ, ಮುಂದುವರಿಸಬೇಕೋ, ಬೇರೆಯವರಿಗೆ ಅವಕಾಶ ನೀಡಬೇಕೋ, ಇದಕ್ಕೆ ಎಷ್ಟು ಶಾಸಕರು ಬೆಂಬಲ ನೀಡುತ್ತಾರೆ ಎನ್ನುವುದನ್ನೆಲ್ಲ ಸದನದಲ್ಲಿ ತೀರ್ಮಾನಿಸಲಾಗುವುದು’ ಎಂದು ಹೇಳಿದರು.

ADVERTISEMENT

‘ಅತೃಪ್ತರಾಗಿರುವ ಶಾಸಕರ ಮನವೊಲಿಸಲು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳ ವರಿಷ್ಠರು ಪ್ರಯತ್ನಿಸಲಿದ್ದಾರೆ. ಬೆಂಗಳೂರಿನಲ್ಲಿರುವ ಮುಖಂಡರೇ ಇದನ್ನು ಮಾಡುತ್ತಾರೆ. ಮುಂದೆ ಏನಾಗುತ್ತದೆಯೋ ಕಾದು ನೋಡೋಣ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.