ಹುಕ್ಕೇರಿ: ಜಿಲ್ಲಾ ಮಧ್ಯವರ್ತಿ ಸಹಕಾರ ಬ್ಯಾಂಕಿನ ಚುನಾವಣೆಗೆ ಸಂಬಂಧಿಸಿದಂತೆ ಒಂದು ವಾರದಿಂದ ನಡೆಯುತ್ತಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಲ್ಲಿ ಮತದಾನದ ಹಕ್ಕು ನೀಡುವ ಸಭೆಗಳಲ್ಲಿ ಜಾರಕಿಹೊಳಿ ಮತ್ತು ಕತ್ತಿ–ಪಾಟೀಲ್ ಗುಂಪುಗಳ ಮಧ್ಯೆ ಯಾವುದೇ ತಿಕ್ಕಾಟ ನಡೆಯದೇ ಠರಾವ್ ಪಾಸಾದ ಘಟನೆ ನಡೆದಿದೆ.
ತಾಲ್ಲೂಕಿನ ಗೌಡವಾಡ ಗ್ರಾಮದಲ್ಲಿ ಬುಧವಾರ ಗದ್ದಲವಾದ ಕಾರಣ ಮುಂದೂಡಿದ್ದ ಸಭೆಯು ಶುಕ್ರವಾರ ಪಿಕೆಪಿಎಸ್ ಸಂಘದ ಸಭೆಯಲ್ಲಿ ಕತ್ತಿ –ಪಾಟೀಲ್ ಪರ ಬಹುಮತ ಪಡೆಯುವ ಮೂಲಕ ತಲಾ ಒಬ್ಬರನ್ನು ಮತದಾನ ಮಾಡಲು ಠರಾವ್ ಪಾಸು ಮಾಡಲಾಗಿದೆ. ನಂತರ ನಿರ್ದೇಶಕರು ಬೆಲ್ಲದ ಬಾಗೇವಾಡಿಗೆ ತೆರಳಿ ಶಾಸಕ ನಿಖಿಲ್ ಕತ್ತಿ ಮತ್ತು ಎ.ಬಿ.ಪಾಟೀಲ್ ಪುತ್ರ ವಿನಯಗೌಡ ಅವರನ್ನು ಭೇಟಿಯಾದರು.
’ಜಾರಕಿಹೊಳಿ ಬೆಂಬಲಿಗರು ನಮಗೆ ದಾಂದಲೆ ಬೇಡವಾದ ಕಾರಣ ಮತ್ತು ಸಚಿವ ಸತೀಶ್ ಜಾರಕಿಹೊಳಿ ದೊಡ್ಡ ಮನಸ್ಸು ಮಾಡಿ ಬಿಟ್ಟುಕೊಟ್ಟಿದ್ದಾರೆ’ ಎಂದರು.
ಗೌಡವಾಡದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಸಿಪಿಐಗಳಾದ ಮಹಾಂತೇಶ್ ಬಸ್ಸಾಪುರ ಮತ್ತು ಎಚ್.ಡಿ.ಮುಲ್ಲಾ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ನಿಡಸೋಸಿ ಪಿಕೆಪಿಎಸ್ ಸಂಘ ಕತ್ತಿ ತೆಕ್ಕೆಗೆ?: ಶುಕ್ರವಾರ ನಡೆದ ನಿಡಸೋಸಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರು ಪೂರ್ಣ ಪ್ರಮಾಣದ ಬೆಂಬಲವನ್ನು ಕತ್ತಿ–ಪಾಟೀಲ್ ಪೆನಲ್ಲಿಗೆ ವ್ಯಕ್ತಪಡಿಸಿ ಬೆಲ್ಲದ ಬಾಗೇವಾಡಿಯ ವಿಶ್ವರಾಜ ಶುಗರ್ ಕಾರ್ಖಾನೆಗೆ ತೆರಳಿ ಶಾಸಕ ನಿಖಿಲ್ ಕತ್ತಿ ಮತ್ತು ಎ.ಬಿ.ಪಾಟೀಲ್ ಪುತ್ರ ವಿನಯಗೌಡ ಅವರನ್ನು ಭೇಟಿಯಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.