ಕಾಗವಾಡ ಕಾಂಗ್ರೆಸ್ ಶಾಸಕ ರಾಜು ಕಾಗೆ ಚಿತ್ರ
ಬೆಳಗಾವಿ: ‘ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ಸಿಂಗ್ ಸುರ್ಜೇವಾಲಾ ಅವರನ್ನು ಮಂಗಳವಾರ ಬೆಳಿಗ್ಗೆ 11ಕ್ಕೆ ಬೆಂಗಳೂರಿನಲ್ಲಿ ಭೇಟಿಯಾಗಿ, ನನ್ನ ಸಮಸ್ಯೆ ಹೇಳಿಕೊಳ್ಳುತ್ತೇನೆ’ ಎಂದು ಶಾಸಕ ರಾಜು ಕಾಗೆ ಹೇಳಿದರು.
ಇಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸುರ್ಜೇವಾಲಾ ಅವರ ಸಭೆಗೆ ಆಗಮಿಸುವಂತೆ ಭಾನುವಾರ ರಾತ್ರಿ ನನಗೆ ಮಾಹಿತಿ ಬಂತು. ಸೋಮವಾರ ಮಧ್ಯಾಹ್ನ 2ಕ್ಕೆ ಭೇಟಿಯಾಗುವಂತೆ ತಿಳಿಸಲಾಗಿತ್ತು. ಆದರೆ, ಬೆಳಗಾವಿಯಲ್ಲಿ ಸೋಮವಾರ ನಡೆದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಸಭೆ ಮೊದಲೇ ನಿಗದಿಯಾಗಿತ್ತು. ಇಡೀದಿನ ಸಭೆಯಲ್ಲಿ ಭಾಗಿಯಾದ ಕಾರಣ, ಬೆಂಗಳೂರಿಗೆ ಹೋಗಲಾಗಿಲ್ಲ’ ಎಂದರು.
‘ಸುರ್ಜೇವಾಲಾ ತಮ್ಮ ಭೇಟಿಗಾಗಿ ಏಕೆ ನನ್ನನ್ನು ಕರೆದಿದ್ದಾರೆ? ಏನು ಹೇಳುತ್ತಾರೆ ಗೊತ್ತಿಲ್ಲ. ಮೊನ್ನೆ ನನ್ನ ಅಸಮಾಧಾನ ವ್ಯಕ್ತಪಡಿಸಿದ್ದೇನೆ. ಸುರ್ಜೇವಾಲಾ ಅವರು ಕೇಳುವ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸುತ್ತೇನೆ. ಸುರ್ಜೇವಾಲಾ ಭೇಟಿ ಬಳಿಕ ಮತ್ತೆ ಮಾತನಾಡುತ್ತೇನೆ’ ಎಂದು ತಿಳಿಸಿದರು.
‘ಕಾಂಗ್ರೆಸ್ನಲ್ಲಿರುವ ಬೇರೆ ಅಸಮಾಧಾನಿತ ಶಾಸಕರ ಸಮಸ್ಯೆಗಳು ಏನಿವೆ ಎಂದು ನನಗೆ ಗೊತ್ತಿಲ್ಲ. ಆದರೆ, ಸುರ್ಜೇವಾಲಾ ಅವರ ಮುಂದೆ ನನ್ನ ಸಮಸ್ಯೆ ತಿಳಿಸುತ್ತೇನೆ. ಬೇರೆ ಶಾಸಕರ ಸಮಸ್ಯೆ ಬಗ್ಗೆ ನಾನೇಕೆ ಮಾತನಾಡಲಿ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.