ADVERTISEMENT

ಬಿಜೆಪಿ ಬಿಟ್ಟು ಬೇರೆ ಪಕ್ಷಕ್ಕೆ ಹೋಗಲ್ಲ: ರಮೇಶ ಕತ್ತಿ ಸ್ಪಷ್ಪನೆ

ಚುನಾವಣಾ ತಯಾರಿ ಪೂರ್ವಭಾವಿ ಸಭೆಯಲ್ಲಿ ರಮೇಶ ಕತ್ತಿ ಸ್ಪಷ್ಪನೆ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2023, 6:38 IST
Last Updated 31 ಮಾರ್ಚ್ 2023, 6:38 IST
ಹುಕ್ಕೇರಿಯಲ್ಲಿ ಗುರುವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ರಮೇಶ ಕತ್ತಿ ಮಾತನಾಡಿದರು
ಹುಕ್ಕೇರಿಯಲ್ಲಿ ಗುರುವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ರಮೇಶ ಕತ್ತಿ ಮಾತನಾಡಿದರು   

ಹುಕ್ಕೇರಿ: ‘ತಮ್ಮ ಕುಟುಂಬದ ಯಾವುದೇ ಸದಸ್ಯ ಬಿಜೆಪಿ ಬಿಟ್ಟು ಬೇರೆ ಪಕ್ಷಕ್ಕೆ ಹೋಗುವ ಪ್ರಶ್ನೆ ಇಲ್ಲ. ನಾನು ಬೇರೆ ಪಕ್ಷ ಸೇರುತ್ತೇನೆ ಎಂಬುದು ಗಾಳಿ ಸುದ್ದಿ. ಜನ ಇದನ್ನು ಗಮನಕ್ಕೆ ತೆಗೆದುಕೊಳ್ಳಬಾರದು’ ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಸ್ಪಷ್ಟ‍ಪಡಿಸಿದರು.

ಪಟ್ಟಣದ ವಿಶ್ವರಾಜ್ ಭವನದಲ್ಲಿ ಹುಕ್ಕೇರಿ ಮಂಡಲ ವತಿಯಿಂದ ಗುರುವಾರ ಆಯೋಜಿಸಿದ್ದ ಬಿಜೆಪಿ ಚುನಾವಣಾ ತಯಾರಿ ಪೂರ್ವಭಾವಿ ಸಭೆಯಲ್ಲಿ ಕಾರ್ಯಕರ್ತರನ್ನು ಉದ್ಧೇಶಿಸಿ ಮಾತನಾಡಿದರು.‘ತಮ್ಮ ಕುಟುಂಬದಲ್ಲಿ ಟಿಕೆಟ್‌ಗಾಗಿ ಪೈಪೋಟಿ ನಡೆದಿದೆ, ಕುಟುಂಬದಲ್ಲಿ ಬಿರುಕು ಬಿಟ್ಟಿದೆ ಎಂಬ ಗಾಳಿ ಸುದ್ದಿಯನ್ನು ನಮಗೆ ಆಗದವರು ಹರಡುತ್ತಿದ್ದಾರೆ. ಬಿಜೆಪಿ ವರಿಷ್ಠರು ಕುಟುಂಬದ ಯಾರಿಗೆ ಟಿಕೆಟ್ ಕೊಟ್ಟರೂ ಆಯ್ಕೆ ಮಾಡಲು ಶ್ರಮಿಸೋಣ. ಉಮೇಶ ಕತ್ತಿ ಅವರ ಕನಸು ನನಸು ಮಾಡೋಣ’ ಎಂದರು.

ಹಿರಾ ಶುಗರ್ಸ್‌ ಅಧ್ಯಕ್ಷ ನಿಖಿಲ್‌ ಕತ್ತಿ ಮಾತನಾಡಿ, ‘ನಮ್ಮ ಕುಟುಂಬದಲ್ಲಿ ಯಾರಿಗೆ ಟಿಕೆಟ್‌ ಕೊಟ್ಟರೂ ಆಯ್ಕೆ ಮಾಡಬೇಕು’ ಎಂದು ವಿನಂತಿಸಿದರು.

ADVERTISEMENT

ಸಂಗಮ ಶುಗರ್ಸ್‌ ಅಧ್ಯಕ್ಷ ರಾಜೇಂದ್ರ ಪಾಟೀಲ, ಹಿರಾ ಶುಗರ್ಸ್ ಉಪಾಧ್ಯಕ್ಷ ಶ್ರೀಶೈಲಪ್ಪ ಮಗದುಮ್ಮ, ಬೆ.ಬಾಗೇವಾಡಿ ಬ್ಯಾಂಕ್ ಅಧ್ಯಕ್ಷ ಪವನ್ ಕತ್ತಿ, ವಿಶ್ವರಾಜ ಶುಗರ್ಸ್ ನಿರ್ದೇಶಕ ಪ್ರಥ್ವಿ ಕತ್ತಿ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಸುಭಾಷ ಪಾಟೀಲ, ಡಿಸಿಸಿ ಬ್ಯಾಂಕ್ ನಿರ್ದೇಶಕ ಗಜಾನನ ಕ್ವಳ್ಳಿ, ಕೆ.ಎಂ.ಎಪ್ ನಿರ್ದೇಶಕ ರಾಯಪ್ಪ ಡೂಗ್, ಮುಖಂಡರಾದ ಜಯಗೌಡ ಪಾಟೀಲ, ಬಂಡು ಹತನೂರಿ, ಸಂಜಯ ಶಿರಕೋಳಿ, ಶಿವಾನಂದ ಮುಡಸಿ, ಇಲಿಯಾಸ ಅತ್ತಾರ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು. ಬಿಜೆಪಿ ರೈತಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಸತ್ಯಪ್ಪ ನಾಯಿಕ ಸ್ವಾಗತಿಸಿದರು. ರಾಜೇಂದ್ರ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಗುರುರಾಜ ಕುಲಕರ್ಣಿ ನಿರೂಪಿಸಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.