ಬೆಳಗಾವಿ: ಜಿಲ್ಲಾ ಪಂಚಾಯ್ತಿಯ ಯೋಜನಾ, ಹಣಕಾಸು ಹಾಗೂ ಲೆಕ್ಕಪರಿಶೋಧನಾ ಸ್ಥಾಯಿ ಸಮಿತಿ ಸಭೆ ಅಧ್ಯಕ್ಷೆ ಆಶಾ ಐಹೊಳೆ ಅಧ್ಯಕ್ಷತೆಯಲ್ಲಿ ಬುಧವಾರ ನಡೆಯಿತು.
ಅನುಮತಿ ಇಲ್ಲದೇ ಗೈರು ಹಾಜರಾದ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ಅಧ್ಯಕ್ಷರು ಹಾಗೂ ಸಮಿತಿಯ ಸದಸ್ಯರು ಸಮಿತಿಯ ಸದಸ್ಯ ಕಾರ್ಯದರ್ಶಿಯಾದ ಮುಖ್ಯ ಲೆಕ್ಕಾಧಿಕಾರಿ ಪರುಶುರಾಮ ದುಡಗುಂಟಿ ಅವರಿಗೆ ಸೂಚಿಸಿದರು.
‘ಪ್ರಗತಿ ಪರಿಶೀಲನಾ ವರದಿ ಪುಸ್ತಕವನ್ನು ಸಭೆಯ ನೋಟಿಸ್ನಲ್ಲಿ ತಿಳಿಸಿರುವ ದಿನಾಂಕದೊಳಗೆ ಎಲ್ಲ ಸದಸ್ಯರಿಗೂ ಒಂದು ಪ್ರತಿಯನ್ನು ನೇರವಾಗಿ ತಲುಪಿಸುವ ವ್ಯವಸ್ಥೆ ಮಾಡಬೇಕು’ ಎಂದು ಸದಸ್ಯ ಗುರಪ್ಪ ಶಿವನಿಂಗ ದಾಶ್ಯಾಳ ಅಧಿಕಾರಿಗಳಿಗೆ ಸೂಚಿಸಿದರು.
ನಿಗದಿತ ಗುರಿ ತಲುಪುವಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಲಾಯಿತು.
ಮೀನುಗಾರಿಕಾ ಇಲಾಖೆಯು ಕೆರೆಯ ಟೆಂಡರ್ ಕರೆದಿರುವ ಕುರಿತು ಮಾಹಿತಿ ಒದಗಿಸಬೇಕು. ತೆಲಸಂಗ ಗ್ರಾಮದ ತೋಟಗಾರಿಕೆ ರೈತ ಉತ್ಪಾದಕರ ಸಂಘ ಮುಚ್ಚಿ ಹೋಗಿದ್ದು, ಅದನ್ನು ಪುನಃ ಪ್ರಾರಂಭಿಸುವ ಕುರಿತು ಕ್ರಮ ವಹಿಸಲಬೇಕು ಎಂದು ನಿರ್ದೇಶನ ನೀಡಲಾಯಿತು.
ಸದಸ್ಯ ಜಿತೇಂದ್ರ ಟೋಪಣ್ಣ ಮಾದರ, ‘ತೋಟಗಾರಿಕಾ ಇಲಾಖೆಯಲ್ಲಿ ಮೀಸಲಿರಿಸಿರುವ ಅನುದಾನ ಮತ್ತು ಫಲಾನುಭವಿಗಳ ಮಾಹಿತಿ ಒದಗಿಸಬೇಕು’ ಎಂದು ಸೂಚಿಸಿದರು.
‘ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಚಿಕ್ಕೋಡಿ ವಿಭಾಗದ ಅಧಿಕಾರಿಗಳು ಸಭೆಗೆ ಹಾಜರಾಗದಿರುವುದರಿಂದ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಅಧ್ಯಕ್ಷೆ ಸೂಚಿಸಿದರು.
ಸದಸ್ಯ ರಮೇಶ ದೇಶಪಾಂಡೆ ಮಾತನಾಡಿ, ‘ಹಿಂದಿನ ಸಾಲಿನಂತೆ ಪ್ರಸ್ತುತ ಸಾಲಿನ ಅನುದಾನ ವಾಪಸ್ ಹೋಗಿದಂತೆ ನೋಡಿಕೊಳ್ಳಬೇಕು. ಸರಿಯಾದ ಸಮಯಕ್ಕೆ ಬಿಲ್ಲುಗಳನ್ನು ತಯಾರಿಸಿ ಅನುದಾನ ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ತಿಳಿಸಿದರು.
ಸದಸ್ಯ ಕೃಷ್ಣಪ್ಪ ಬಾಲಪ್ಪ ಲಮಾಣಿ, ಅನಿಲ ಪಾರೀಸಪ್ಪ ಮ್ಯಾಕಲಮರ್ಡಿ, ಶಿವಗಂಗಾ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.